Sunday, December 4, 2016

" ತೆರೆ "

ನಿನ್ನೆಯ "ಅನಿವಾರ್ಯತೆ" ಕವನದ ಮುಂದುವರೆದ ಭಾಗ .....
ನಮ್ಮ 80 ರ ದಶಕದ ಹೆಣ್ಮಗಳ ಸಮಸ್ಯೆಗೊಂದು ಪರಿಹಾರ ಬೇಕಲ್ಲವಾ ?.....
ಹೇಗಿದ್ದರೂ ಓದಿದ್ದಾಳೆ... ಕೆಲಸಕ್ಕೆ ಸೇರಲಿ.... ಸ್ವಂತ ಸಂಪಾದಿಸಲಿ.....
ಅವಳ ಸಮಸ್ಯೆಯನ್ನು ಅವಳೇ ಪರಿಹರಿಸಿಕೊಂಡಾಳು.... ಏನಂತೀರಿ ?

ನನ್ನ ದಾರಿಯ ನಾನು ಕಂಡುಕೊಳ್ಳುವೆನಪ್ಪ
ವಿದ್ಯೆ ಇದೆ ಬುದ್ಧಿ ಇದೆ ಯಾಕೆ ಚಿಂತೆ ? ||
ನನ್ನ ಹೆಗಲಿನ ಹೊರೆಯ ಇನ್ನು ನಾನೇ ಹೊರುವೆ
ಹೆದರದಿರಿ ಈ ಜಗವು ಮರುಳು ಸಂತೆ || ೧ ||

ನಿನ್ನ ಅಳಿಯನ ನಾನೆ ಹುಡುಕಿ ತರುವೆನೆ ಅಮ್ಮ
ನೋಡಿಕೊಳ್ಳುವೆ ನಾನು ನನ್ನ ಸೌಖ್ಯ ||
ಹುಡುಗ ಸಿಕ್ಕರೆ ಮದುವೆ- ಇಲ್ಲದಿರೆ ಕೊರಗಿಲ್ಲ
ಆತ್ಮಗೌರವವೊಂದೆ ನನಗೆ ಮುಖ್ಯ || ೨ ||

ಸ್ವಂತ ಬದುಕಿದು ಚೆನ್ನ ನನ್ನ ದುಡಿಮೆಯ ಫಲವು
ಹೆಚ್ಚಿಸಿದೆ ನನ್ನಲ್ಲಿ ಆತ್ಮಸ್ಥೈರ್ಯ ||
ಒಂದಾಗಿ ಬಾಳ್ವುದಕೆ ಹಿರಿಯರಾಶೀರ್ವಾದ
ಕೊಂಚ ಸಹಕಾರ ಇರುವುದನಿವಾರ್ಯ || ೩ ||

ವರದಕ್ಷಿಣೆಯ ಪಿತ್ತ ಹಿರಿಯ ಪೀಳಿಗೆಗಿರಲಿ
ಮಕ್ಕಳದರೊಳ ಬಿದ್ದು ನೋಯದಿರಲಿ ||
ಹೆಣ್ಣು ಮಕ್ಕಳ ಶಾಪ ತಟ್ಟದಿರಲೀ ಜಗಕೆ
ಸುಮಧುರದ ದಾಂಪತ್ಯ ಕೂಡಿಬರಲಿ || ೪ ||

- ಸುರೇಖಾ ಭೀಮಗುಳಿ
05/12/2016
ಚಿತ್ರ : ಅಂತರ್ಜಾಲ

ಅಯ್ಯೋ... ತಟ್ಟಿಯೇ ಬಿಟ್ಟಿತೇ ಹೆಣ್ಣು ಮಕ್ಕಳ ಬಿಸಿಯುಸಿರ ಶಾಪ.....???!!! ಓಂ ಶಾಂತಿ ... ಶಾಂತಿ... ಶಾಂತಿ.....!!!

Saturday, December 3, 2016

" ಅನಿವಾರ್ಯತೆ " (ನನ್ನ 132 ನೆಯ ಕವನ)


ನಿನ್ನೆಯ ’ಭ್ರಮಾನಿರಸನ’ ಕವನದ ಮುಂದುವರಿಕೆ....
80 ರ ದಶಕದ ಹೆಣ್ಣಿಗೆ ಬಂದೊದಗಿದ ಅನಿವಾರ್ಯತೆ !

ಕಂಡ ದೇವರಿಗೆಲ್ಲ ಹರಕೆ ಹೊತ್ತಿಹಳಮ್ಮ
ಅಪ್ಪನಾ ಮುಖದಲ್ಲು ಚಿಂತೆ ಗೆರೆಯು ||
ಬಂದ ವರಗಳು ಏಕೆ ತಪ್ಪಿ ಹೋಗುತ್ತಿಹರು ?
ಎಂದು ಬೀಳುವುದಿದಕೆ ಕೊನೆಯ ತೆರೆಯು ? || ೧ ||

ಕಾರಿನಲಿ ಬಂದವರ ಮೋರೆಯಲಿ ನಗುವಿಲ್ಲ
ಮತ್ತೆ ಘಟಿಸುತ್ತದೆಯೆ ಹಳೆಯ ಘಟನೆ ? ||
ಕನಸುಗಳ ಮೂಟೆಯನು ಕಟ್ಟಿ ಅಟ್ಟದಲಿಟ್ಟು
ಬಂದವರ ಎದುರಲ್ಲಿ ನನ್ನ ನಟನೆ || ೨ ||

ಹಣೆಯ ಬರಹದ ಮುಂದೆ ನಾವೆಷ್ಟರವರ್ಹೇಳು ?
ವಿಧಿಯಾಟ ಮೀರುವುದು ಹೇಗೆ ಸಾಧ್ಯ ? ||
ಕಾಯೋಣ ಇನ್ನಷ್ಟು ಹುಡುಕೋಣ ಮತ್ತಷ್ಟು
ಅಪ್ಪ ಅಮ್ಮನ ಮಾತು ಎಷ್ಟು ವೇದ್ಯ ? || ೩ ||

ಬೇಡೆಂದು ಭಾವಗಳ ತಡೆಹಿಡಿಯಲಾದೀತೆ ?
ಬೇಕೆಂದರೂ ಮನವು ಅರಳುತಿಲ್ಲ ||
ಘಾಸಿಯಾಗಿಹುದೆನ್ನ ಮಲ್ಲಿಗೆಯ ಹೃದಯಕ್ಕೆ
ನಷ್ಟ ತುಂಬುವುದಕ್ಕೆ ಯಾರು ಇಲ್ಲ || ೪ ||

ಬಂದವರ ಎದಿರಿನಲಿ ಕುರಿಯಂತೆ ನಿಲಲಾರೆ
ಸ್ವಾಭಿಮಾನವ ಬಿಟ್ಟು ಬದುಕಲಾರೆ ||
ನನ್ನ ಧ್ವನಿಗೂ ಒಂದು ಅವಕಾಶವಿರಬೇಕು
ನನ್ನತನಕೂ ಸ್ವಲ್ಪ ಬೆಲೆಯುಬೇಕು || ೫ ||

ಹೆಣ್ಣೇನು ಇವರೆದುರು ದರ್ಶನದ ಗೊಂಬೆಯೇ ?
ಹೆಣ್ಣ ಅನಿಸಿಕೆಗಳಿಗೆ ಬೆಲೆಯಿಲ್ಲವೆ ? ||
ಜಗದೆದುರು ತಲೆಯೆತ್ತಿ ನಿಲ್ಲಲಾರಳೆ ಹೆಣ್ಣು
ಹೆಣ್ಣಿನಾ ಶೋಷಣೆಗೆ ಕೊನೆಯಿಲ್ಲವೆ ? || ೬ ||

ನನ್ನ ಬದುಕಿನ ಬಗೆಗೆ ನಾನೆ ಯೋಚಿಸಬೇಕು
ಅನಿವಾರ್ಯ ಈ ನಿಲುವು ನನಗೆ ಮಾತ್ರ ||
ದೃಢಮನಸಿನಲ್ಲೊಮ್ಮೆ ಕೈಗೆತ್ತಿಕೊಳ್ಳುವೆನು
ಆ ಬ್ರಹ್ಮ ನನಗಿತ್ತ ಬಾಳ ಸೂತ್ರ || ೭ ||

- ಸುರೇಖಾ ಭೀಮಗುಳಿ
04/12/2016
ಚಿತ್ರ : ಅಂತರ್ಜಾಲ

Friday, December 2, 2016

" ಭ್ರಮಾನಿರಸನ ! " (ನನ್ನ 131 ನೆಯ ಕವನ)

ನಿನ್ನೆಯ "ಜಾರುತಿದೆ ಮನಸು" ಕವನದ ಮುಂದುವರೆದ ಭಾಗ.....
ಪಾಪಕಣ್ರೀ.... 80 ರ ದಶಕದ ಹೆಣ್ಮಕ್ಕಳು.... ಅಲ್ಲಲ್ಲ ಗಂಡ್ ಮಕ್ಳು ಸಹ.... ಹ ಹ ಹಾ.....

ಶ್ಯಾನುಭೋಗರ ಮನೆಗೆ ಹೋಗಿದ್ದ ಅಪ್ಪಯ್ಯ
ಹಿಂತಿರುಗಿ ಬಂದಾಗ ಮುಖವು ಪೆಚ್ಚು ||
ಹುಡುಗ ಉತ್ತಮನಂತೆ ತಾಯಿ ಜೋರಿಹರಂತೆ
ತಂದೆಗಿದೆ ಧನದಾಹ ಸ್ವಲ್ಪ ಹೆಚ್ಚು || ೧ ||

ಕಂಡ ಕನಸುಗಳೆಲ್ಲ ನೀರ ಪಾಲಾಗೋಯ್ತೆ ?
ಶ್ಯಾನುಭೋಗರ ಮಗನ ಮರೆಯಬೇಕೆ ? ||
ಧನದಾಹವಿಲ್ಲದಿಹ ಮನೆಯ ಹುಡುಕುವುದೆಂತು ?
ಮುಗ್ಧ ಮನಗಳ ಬಾಳು ಬಾಡಬೇಕೆ ? || ೨ ||

ಭಾವಗಳ ಮನದೊಳಗೆ ಬಿಡಬೇಕೊ ಬೇಡವೋ ?
ಕನಸಗಳಿಗವಕಾಶ ತಪ್ಪೊ ಸರಿಯೊ ? ||
ಯಾರನ್ನು ಮೆಚ್ಚುವುದೊ ಯಾರನ್ನು ನೆಚ್ಚುವುದೊ ?
ಇವರೆಲ್ಲರೆದುರಲ್ಲಿ ನಾನು ಕುರಿಯೊ ? || ೩ ||

ಮೃದು ಮನಸು ದಿನದಿನಕೆ ಕಲ್ಲಾಗುತಿಹುದೇಕೋ ?
ಭ್ರಮೆಯ ನಿರಸನ ಎನ್ನ ಕೊಲ್ಲುತಿಹುದು ||
ಅಪ್ಪ ಅಮ್ಮನ ಮನವ ನೋಯಿಸಲು ಮನಸಿಲ್ಲ
ಒಳಗೊಳಗೆ ಅತಿಹಿಂಸೆ ಎನಿಸುತಿಹುದು || ೪ ||

- ಸುರೇಖಾ ಭೀಮಗುಳಿ
03/12/2016
ಚಿತ್ರ : ಅಂತರ್ಜಾಲ

Thursday, December 1, 2016

" ಜಾರುತಿದೆ ಮನಸು " ( ನನ್ನ 130 ನೆಯ ಕವನ )

ಒಂದಾನೊಂದು ಕಾಲದಲ್ಲಿ ..... 22 ನೆಯ ವಯಸ್ಸಿನ ಹೆಣ್ಮಗಳು..... ನಾನಲ್ಲಪ್ಪಾ... ಹಹಹಾ.....

ರಾಮ ಭಟ್ಟರ ಮಗನೊ ಕೃಷ್ಣ ಭಟ್ಟರ ಮಗನೊ
ಕನಸಲ್ಲಿ ಬಂದವನು ಯಾರು ಅವನು ? ||
ಪೇಟೆಲೆದುರಾದವನು ಜಾತ್ರೆಯಲಿ ಕಂಡವನು
ಸೊಗಸು ಮೀಸೆಯ ತರುಣ ಮನದಲಿಹನು || ೧ ||

ಹೇಗಿದ್ದರೂ ಸರಿಯೆ ಕೊಂಕನಾಡದೆ ಇರಲಿ
ಮೃದು ಮನದ ಒಬ್ಬಾತ ನನಗೆ ಸಿಗಲಿ ||
ಕನಸು ಕಾಣುವ ವಯಸು ವಿಧಿ ಸಂಚದೇನಿದೆಯೊ ?
ಚೊಕ್ಕನೆಯ ಹೃದಯದವ ಬೇಗ ಬರಲಿ || ೨ ||

ಕೊಂಚ ಕಾಡಿಗೆ ಹೆಚ್ಚೆ ? ಮುಡಿದ ಮಲ್ಲಿಗೆ ಸಾಕೆ ?
ಸಿಂಗಾರವೆನ್ನದಿದುವತಿಯಲ್ಲವೆ ?  ||
ಅವನನ್ನು ಸೆಳೆವುದಕೆ ಈ ಕೋಲವೇತಕೇ ?
ನನ್ನೊಂದು ಕಿರುನೆಗೆಯು ಸಾಕಲ್ಲವೆ ? || ೩ ||

ಸಡಗರದಿ ಬಂದವನು ಶ್ಯಾನುಭೋಗರ ಮಗನು
ಹಗಲಿನಲು ಕಾಡುತಿದೆ ಅವನ ಕನಸು ||
ನೋಟವೊಂದರ ಒಳಗೆ ಹೀಗೇಕೆ ಆಗೋಯ್ತು ?
ಅವನೆಡೆಗೆ ಜಾರುತಿದೆ ನನ್ನ ಮನಸು || ೪ ||

- ಸುರೇಖಾ ಭೀಮಗುಳಿ
02/12/2016
ಚಿತ್ರ : ಅಂತರ್ಜಾಲ

Wednesday, November 30, 2016

" ಓ ಹರೆಯವೇ.... " (ನನ್ನ 129 ನೆಯ ಕವನ)

’ಜೀವನದಲ್ಲಿ ನನಗೆ ಬೇಕೆನ್ನಿಸಿ ಸಿಗದೇ ಹೋದದ್ದು.....’ ಎಂದು ನಾನಂದುಕೊಳ್ಳುವುದು...  ನಾನು ಎಂದಿಗೂ ’ಛೇ.. ! ಅದೊಂದು ಸಿಕ್ಕಿದ್ರೆ ಚೆನ್ನಾಗಿರ್ತಿತ್ತು ’ ಅಂದು ಕೊಳ್ಳುವುದು ಕಾಲೇಜು ದಿನಗಳ ಬಗ್ಗೆ ... ನನ್ನದೇ ಅನಿವಾರ್ಯ ಕಾರಣಗಳಿಂದ ಕಾಲೇಜು ಮೆಟ್ಟಿಲು ಹತ್ತಲಾಗದೆ ಡಿಪ್ಲೋಮಾ ... ಅದೂ ಮಹಿಳಾ ಪಾಲಿಟೆಕ್ನಿಕ್.... ಸೇರಿದ ಪರಿಣಾಮ ಜೀವನದ ಅದೊಂದು ಘಟ್ಟ ನನ್ನ ಅನುಭವಕ್ಕೆ ಬಾರದೇ ಹೋಯಿತು ......  ನನ್ನ ಕಾಲಕ್ಕೆ ಮಿಡಿ-ಚೂಡೀಧಾರಗಳು ಬಳಕೆಗೆ ಬಂದ ಕಾರಣ ಉದ್ದ ಲಂಗ... ಲಂಗ-ದಾವಣಿಯನ್ನು ಧರಿಸುವ ಅವಕಾಶವನ್ನೂ ನಾನು ಕಳೆದುಕೊಂಡೆ....   ಯಾರಾದರೂ ’ನನ್ನ ಕಾಲೇಜು ದಿನಗಳಲ್ಲಿ.... ’ ಎಂದು ಮಾತಿಗಾರಂಭಿಸಿದರೆ ನನ್ನ ಕರುಳಲ್ಲೆಲ್ಲ ವಿಪರೀತ ಸಂಕಟ ... !    ಹ್ಹ ಹ್ಹ ಹ್ಹಾ......

ಓ ಹರೆಯವೇ ನೀನು ಮತ್ತೊಮ್ಮೆ ಸಂಭವಿಸು
ಹಲವು ಕೆಲಸಗಳಿನ್ನು ಇಹವು ಬಾಕಿ ||
ಜವ್ವನದ ದಾರಿಯಲಿ ಅಡ್ಡಾಡಿ ಬರಬೇಕು
ಹಗಲು ಕನಸಿನ ದಿನಕೆ ಲಗ್ಗೆ ಹಾಕಿ || ೧ ||

ಬಾಲ್ಯ ದಿನವದು ಬೇಡ ಏರು ಜವ್ವನ ಬೇಕು
ನಾನೊಮ್ಮೆ ಆ ದಿನಕೆ ಹೋಗಬೇಕು ||
ಲಂಗದಾವಣಿ ಧರಿಸಿ ಮಲ್ಲಿಗೆಯ ಹೂಮುಡಿದು
ಅಂಗಳದಿ ರಂಗೋಲಿ ಹಾಕಬೇಕು || ೨ ||

ಕಾಲೇಜು ದಾರಿಯಲಿ ಗೆಳತಿಯರ ಗುಂಪಿನಲಿ
ಮನಬಿಚ್ಚಿ ಲಘುಹರಟೆ ಕೊಚ್ಚಬೇಕು ||
ಪಾಠದಲಿ ಮುಂದಿದ್ದು ಗುರುಗಳನು ಮೆಚ್ಚಿಸುತ
ಸಹಪಾಠಿಗಳ ಗಮನ ಸೆಳೆಯಬೇಕು || ೩ ||

ರೇಷ್ಮೆ ಸೀರೆಯನುಟ್ಟು ಕೇದಗೆಯ ಘಮ ಹೀರಿ
ಕಾಲ್ಗೆಜ್ಜೆ ಸಪ್ಪಳದಿ ಬೀಗಬೇಕು ||
ಮಳೆಯ ಹನಿಹನಿಯಲ್ಲಿ ನನ್ನ ಧ್ವನಿಯನು ಬೆರೆಸಿ
ಮೆಲುವಾಗಿ ಹಾಡೊಂದ ಹಾಡಬೇಕು || ೪ ||

ಅಡಿಕೆ ಚಪ್ಪರದಲ್ಲಿ ಕಾಲ್ನೀಡಿ ಕುಳಿತೊಮ್ಮೆ
ರಾತ್ರಿ ನಕ್ಷತ್ರಗಳ ಎಣಿಸಬೇಕು ||
ಆಗಸದ ಮೋಡಗಳ ಮಾತನಾಡಿಸುತೊಮ್ಮೆ
ಅಪ್ಪನಳಿಯನ ಕನಸ ಕಾಣಬೇಕು || ೫ ||

- ಸುರೇಖಾ ಭೀಮಗುಳಿ
30/11/2016
ಚಿತ್ರ : ಅಂತರ್ಜಾಲ

Monday, November 28, 2016

" ಓ ಬ್ರಹ್ಮ .... ಉತ್ತರಿಸು......." (ನನ್ನ 128 ನೆಯ ಕವನ)


ಓ ಬ್ರಹ್ಮ ಉತ್ತರಿಸು ನನ್ನ ಕಾಡಿಹ ಪ್ರಶ್ನೆ
ಮನದಲ್ಲಿ ಇಷ್ಟೊಂದು ಚಂಚಲತೆ ಯಾಕೊ ?
ಕಾರಣವ ತಿಳಿಸಿಬಿಡು ತಿದ್ದುಪಡಿ ಮಾಡಿಕೊಡು
ಹದದೊಳಿರಿಸುವ ಪರಿಯ ತಿಳಿಸಿಬಿಡು ಸಾಕೊ || ೧ ||

ದೂರ ಸರಿದವರನ್ನು ಹತ್ತಿರಕೆ ಕರೆಯುವುದು
ಹತ್ತಿರವೆ ಇದ್ದವರ ಕಡೆಗಣಿಪುದು ||
ಮಾತಾಡ ಬಯಸುವರ ಬಹುದೂರ ತಳ್ಳುವುದು
ಮೌನದಲಿ ಕಾಡುವರ ನೆನೆದಳುವುದು || ೨ ||

ಸಂಕಟದ ಸಮಯದಲಿ ಬದುಕು ಸಾಕೆನ್ನುವುದು
ಜೀವ ಹೋದರೆ ಸಾಕು ಎಂದಳುವುದು ||
ಸಾವು ಹತ್ತಿರ ಬರಲು ಬದುಕ ಬೇಕೆನ್ನುವುದು
ಆಯುಷ್ಯ ಹೆಚ್ಚಿಸಲು ಗೋಳಿಡುವುದು || ೩ ||

ಮನದ ವ್ಯಾಪಾರವದೊ ಬಲು ಭಿನ್ನವಾಗಿಹುದು
ಚಂಚಲತೆಯಿಂದಲೇ ಹಿಂಸಿಸುವುದು ||
ಇರುವುದೆಲ್ಲವ ಬಿಟ್ಟು ಇಲ್ಲದ್ದ ಕೇಳುವುದು
ಸಭ್ಯತೆಯ ಪರಿಧಿಯಲಿ ಬದುಕಬಿಡದು || ೪ ||

- ಸುರೇಖಾ ಭೀಮಗುಳಿ
28/11/2016
ಚಿತ್ರ : ಅಂತರ್ಜಾಲ

Sunday, November 27, 2016

" ಕೋತಿಯ ಅಳಲು " (ನನ್ನ 127 ನೆಯ ಕವನ )



ಕಾಡುಮೇಡಿನಲಿದ್ದ ಫಲಗಳನೆ ನಂಬಿದ್ದ
ಕೋತಿಗಳ ಗುಂಪಿನಾ ಪ್ರಮುಖ ನಾನು ||
ನಮ್ಮೊಡಲ ಸಂಕಟವ ಬಲ್ಲವರು ಯಾರಿಹರು ?
ನಮ್ಮ ಇಂದಿನ ಕಥೆಯ ಹೇಳಲೇನು ? || ೧ ||

ಮಾವು ಹಲಸಿನ ಮರವ ನಾಟವೆನ್ನುತ ಕಡಿದು
ಬರಿದಾಗಿ ಮಾಡಿದಿರಿ ಕಾಡ ಬೊಗಸೆ ||
ನೇರಳೆಯ ಹಣ್ಣಿಲ್ಲ ಹೆಬ್ಬಲಸು ಸಿಗಲಿಲ್ಲ
ನಮ್ಮಶ್ರು ಬಿಂದುಗಳು ನಿಮಗೆ ಸೊಗಸೆ ? || ೨ ||

ಮನೆಯೊಳಗೆ ಕುಳಿತು ನೀವ್ ಬಿಸಿಯಡುಗೆ ಉಣ್ಣುವಿರಿ
ಹಸಿದೊಟ್ಟೆ ಸಂಕಟವ ಬಲ್ಲಿರೇನು ? ||
ನಿಮ್ಮ ತೋಟದೊಳಿರುವ ಎಳನೀರು ಕುಡಿಯುತಿರೆ
ಕಲ್ಲನೊಗೆಯುತ ನಮ್ಮ ಬೈವದೇನು ? || ೩ ||

ಸುಮ್ಮಸುಮ್ಮನೆ ಕಿತ್ತು ಹಾಳುಮಾಡುವುದಿಲ್ಲ
ನಾಳೆಗೆನ್ನುತ ಎತ್ತಿ ಕದ್ದಿಡುವುದಿಲ್ಲ ||
ಹೊಟ್ಟೆ ತುಂಬುತ್ತಲೇ ಹೊರಟುಬಿಡುತೇವಲ್ಲ
ಇನ್ನು ನಾಳೆಯವರೆಗೆ ಚಿಂತೆ ಇಲ್ಲ || ೪ ||

ನಮಗು ಈ ದಿನಗಳಲಿ ನಿಮ್ಮ ತೋಟವೆ ಗತಿಯು
ತೋಚುತಲೆ ಇಲ್ಲೆಮಗೆ ಬೇರೆ ದಾರಿ ||
ಬಿಸಿಯುಸಿರ ಹೊರಹಾಕಿ ನಮ್ಮನ್ನು ಶಪಿಸದಿರಿ
ಬಾಳೆತೋಟದಲಿಷ್ಟು ಜಾಗಕೊಡಿರಿ || ೫ ||

- ಸುರೇಖಾ ಭೀಮಗುಳಿ
27/11/2016
ಚಿತ್ರ : ಸುಮಂತ ಭೀಮಗುಳಿ

shanaka hebbar ಅವರ ಕೋರಿಕೆಯ ಮೇರೆಗೆ ಬರೆದದ್ದು....
(ಕೋತಿಗಳಿಂದ ಕೃಷಿಕನಿಗೆ ಆಗುತ್ತಿರುವ ಸಂಕಟಗಳ ಬಗ್ಗೆ ಪದ್ಯ ಬರೆಯಲು ಅವರು ಕೇಳಿದ್ದು .... ಆದರೆ ಪದ್ಯ ಬರೆಸಿ ಕೊಂಡದ್ದು ಬಡಕೋತಿ ..ಹ್ಹಹ್ಹಹ್ಹಾ.. !)

Saturday, November 26, 2016

" ಕೋಳಿ ಕಥೆ ! " (ನನ್ನ 126 ನೆಯ ಕವನ)



ಕೋಳಿ ಕೂಗಿದ ಶಬ್ದ ಕೇಳಿಯೆ
ಹಲವು ವರ್ಷಗಳಾಯಿತು ||
ಯಾರದೋ ಮನೆ ಮೇಲೆ ಕುಳಿತಿಹ
ಹುಂಜ ನೆನಪಿಗೆ ಬಂದಿತು || ೧ ||


ಸೂರ್ಯ ಉದಯದ ಮೊದಲ ಕ್ಷಣಕೇ
ಕೂಗುತಿತ್ತದು ಕೋಳಿಯು ||
ಮನೆಯ ಮಂದಿಯು ಏಳುತಿದ್ದರು
ಸಾಂಗ ನಿತ್ಯದ ವಾರ್ತೆಯು || ೨ ||


ಕೋಳಿ ಬೇಡವು ನಮ್ಮ ಜನರಿಗೆ
ಮೊಟ್ಟೆ ಬೇಕಿದೆ ಅನುದಿನ ||
ಹೊಟ್ಟೆ ತುಂಬಿದ ಸುಖದಿ ಮೆರೆಯುತ
ಕೋಳಿ ಮರೆವರು ಈ ಜನ || ೩ ||


ಒಂದು ಸ್ವಲ್ಪವೆ ಅನ್ನ ಸಿಕ್ಕರು
ಕೋಳಿ ಬಳಗವ ಕರೆವುದು ||
ಸಿರಿಯು ಬಂದರೆ ಮನುಜ ಕುಲವದು
ಮನೆಯ ಮಂದಿಯ ಮರೆವುದು || ೪ ||


- ಸುರೇಖಾ ಭೀಮಗುಳಿ
26/11/2016
ಚಿತ್ರ : ಅಂತರ್ಜಾಲ

Friday, November 25, 2016

" ಬೆಕ್ಕಿನ ಕಥೆ ! " (ನನ್ನ 125 ನೆಯ ಕವನ )


ಮನೆಯ ಸುತ್ತ ತಿರುಗುತಿಹುದು
ಅಬ್ಬೆಪಾರಿ ಬೆಕ್ಕು ||
ಜನರ ಹಂಗು ಇಲ್ಲ ಇದಕೆ
ಮುಖದಲೇನೊ ಸೊಕ್ಕು || ೧ ||

ಅರ್ಧರಾತ್ರಿಯಲ್ಲಿ ಗೋಳು
ಅಳುವು ಇದರ ರೋಗ ||
ನಿದ್ದೆ ಹಾಳು ಮನದಿ ನೋವು
ಕೇಳಿಯದರ ರಾಗ || ೨ ||

ಹಾಲು ಅನ್ನ ಕರಿದ ತಿಂಡಿ
ಸೆಳೆಯದಿದರ ಮನಸು ||
ಹೆಗ್ಗಣ ಇಲಿ ಓತಿಕ್ಯಾತ
ಇದುವೆ ಅದರ ತಿನಿಸು || ೩ ||

ನಮ್ಮ ಮನೆಯ ಬಾಗಿಲಲ್ಲೆ
ಬೆಕ್ಕಬೇಟೆ ತಾಣ ||
ರಕ್ತ-ಮಾಂಸ ಚಲ್ಲಪಿಲ್ಲಿ
ಹಿಂಸೆ ಅದಕೆ ಕಾಣ || ೪ ||

ಹಗಲು ಪೂರ ಸೊಂಪು ನಿದ್ದೆ
ಕಾರ ಕೆಳಗೆ ಗೊರಕೆ ||
ಓಡಿಸಿದರು ಗಮನವಿಲ್ಲ
ಭಯವೆ ಇಲ್ಲವದಕೆ || ೫ ||

ಬೆಕ್ಕನಿಷ್ಟಪಡುವ ಜನರೆ
ಬನ್ನಿ ನಮ್ಮ ಮನೆಗೆ ||
ಕೊಂಡು ಹೋಗಿ ಸಾಕಿಕೊಳ್ಳಿ
ಶರಣು ನಾನು ನಿಮಗೆ || ೬ ||

- ಸುರೇಖಾ ಭೀಮಗುಳಿ
25/11/2016
ಚಿತ್ರ : ಅಂತರ್ಜಾಲ

Thursday, November 24, 2016

" ನಾಯಿ ಚಿಂತೆ " (ನನ್ನ 124 ನೆಯ ಕವನ)


ನಮ್ಮ ಎದುರು ಮನೆಯಲಿಹವು
ಎರಡು ಸಾಕು ನಾಯಿ ||
ಮೂರು ಹೊತ್ತು ಬೊಗಳುತಾವೆ
ಮುಚ್ಚದೇನೆ ಬಾಯಿ || ೧ ||

ರಸ್ತೆಯಲ್ಲಿ ಕಾಗೆ-ದನವು
ಬಂದರಿವಕೆ ರಗಳೆ ||
ಯಾರು ಸ್ವಲ್ಪ ಕೆಮ್ಮಿದ್ರೂನು
ಶುರುವೆ ನಾಯಿ ಕಹಳೆ || ೨ ||

ಇವುಗಳ್ಹೀಗೆ ಕೂಗುತಿರಲು
ಮನೆಯ ಅಮ್ಮ ಒಳಗೆ ||
ಟೀವಿ  ಬಿಟ್ಟು ಕದವ ತೆರೆದು
ಬರರು ಎಂದು ಹೊರಗೆ || ೩ ||

ಎದುರು-ಬದರು ಮನೆಯು ನಮದು
ಬಿಡುಗಡೆಯೇ ಇಲ್ಲ ||
ಫೋನು-ಧ್ಯಾನ-ಮನದ ಮಾತು
ಸಾಂಗವಾಗುತಿಲ್ಲ || ೪ ||

ಎಲ್ಲರದ್ದು ಸ್ವಂತ ಸೂರು
ಬದುಕ ಬೇಕು ಸಹಿಸಿ ||
ಬಿಡುಗಡೆಯಾ ದಾರಿ ಏನು ?
ಕರುಣೆ ತೋರಿ ತಿಳಿಸಿ || ೫ ||

- ಸುರೇಖಾ ಭೀಮಗುಳಿ
24/11/2016
ಚಿತ್ರ : ಅಂತರ್ಜಾಲ

Friday, November 18, 2016

" ಮಿತಿ " (ನನ್ನ 123 ನೆಯ ಕವನ)


ಬದುಕೆಂಬ ಪಥದಲ್ಲಿ ನಮ್ಮ ರಥಗಳು ಬೇರೆ
ಪ್ರತಿ ಭೇಟಿ ಸಹ ಒಂದು ವಿಧಿಯ ಲೀಲೆ ||
ಪರರ ಮಿತಿಯನು ನಾವು ಅರಿಯಬೇಕಲ್ಲದೆ
ಹೊರಿಸಬಾರದು ಹೊರೆಯ ಅವರ ಮೇಲೆ ||  ೧ ||

ಪಥದಿ ಕಂಡವರೊಡನೆ ಸೌಹಾರ್ದ ಮಾತುಕತೆ
ತಪ್ಪಿಲ್ಲ ಮಾತಿನಲಿ ಹಾಲು-ಜೇನು ||
ಎದುರಾದ ಸ್ನೇಹಕ್ಕೆ ಸಿಹಿ ಮನದ ಹಾರೈಕೆ
ಬಯಸಬಾರದು ಬಿಟ್ಟು ಬೇರೆ ಏನು || ೨ ||

ಬದುಕಿಗಿದೆ ಚೌಕಟ್ಟು ತಪ್ಪಬಾರದು ನಾವು
ನಮ್ಮೊಳಿತಿಗಾಗಿಯೇ ನೀತಿ ನಿಯಮ ||
ಹಠದಿ ಮಿತಿ ಮೀರಿದರೆ ಜೀವನವು ಕಗ್ಗಂಟು
ಅರಳದೆಲೆ ಬಾಡುವುದು ಬಾಳ ಕುಸುಮ || ೩ ||

- ಸುರೇಖಾ ಭೀಮಗುಳಿ
18/11/2016
ಚಿತ್ರ : ಅಂತರ್ಜಾಲ

Thursday, November 10, 2016

" ಯಾಕೆ ಈ ದ್ವಂದ್ವ ? "



ಮನಸು ಏತಕೆ ಹೀಗೆ ತೂಗಾಡುತಿಹುದಲ್ಲ ?
ದ್ವಂದ್ವ ಕಾಡಿಹುದೇಕೆ ನಿಲುವ ಕಸಿದು ||
ಚಿನಕುರುಳಿಯಂತಿದ್ದ ಹೂಮನಸು ಸಹ ಇಂದು
ಕೈಕಟ್ಟಿ ಕುಳಿತಿಹುದು ಮೂಲೆ ಹಿಡಿದು ||

ಹೊರಜಗಕೆ ಸ್ಪಂದಿಸಲೆ ? ನನಗೇಕೆ ಎನ್ನಲೇ ?
ಇರಲೇನು ಸ್ವಾರ್ಥದಲಿ ನನ್ನಷ್ಟಕೆ ? ||
ನನದಾದ ಮೇಲೇಕೆ ಪರರ ಬಗೆಗಿನ ಚಿಂತೆ ?
ಯಾಕೆನಗೆ ಬೇಕು ಈ ಹೊಣೆಗಾರಿಕೆ ? ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ಮನವಿದ್ದು ಮರುಗದೆಲೆ ಬರಡಾಗಲೆ ? ||
ಸಹಜೀವಿಗಳಿಗೆಲ್ಲ ಸ್ಫೂರ್ತಿತುಂಬುತಲೊಮ್ಮೆ
ಜಗದೊಡನೆ ಸ್ಪಂದಿಸಲು ಅಣಿಯಾಗಲೆ ? ||

- ಸುರೇಖಾ ಭೀಮಗುಳಿ
10/11/2016
ಚಿತ್ರ : ಅಂತರ್ಜಾಲ

Monday, October 17, 2016

" ಕವನ ಕಟ್ಟುವುದೊಂದು ಕಲೆ "


ಪ್ರಾಸಹೊಂದಿಸುವುದನು ತ್ರಾಸವೆಂದೆಣಿಸದಿರಿ
ಬಲು ಸೊಗಸು ವ್ಯಾಯಾಮ ನಂಮಿದುಳಿಗೆ  ||
ಜತನದಲಿ ಹೊಸೆಯುವುದೆ ತೃಪ್ತಿಯೀಯುವ ಕೆಲಸ
ಶೋತೃವಿನ ಹಂಗಿಲ್ಲ ನಿಜಗವಿತೆಗೆ || ೧ ||

ಗುರಿಯೆಡೆಗೆ ಪಯಣಿಸುವ ಅನುಭವದಿ ಆಹ್ಲಾದ
ತಲುಪಿದೊಡೆ ಏನುಂಟು ಬರಿಯ ಗಮ್ಯ ||
ಪದಕೆ ಪದವನು ಹೊಸೆದು ಮಾತ್ರೆ ಪ್ರಾಸದಿ ಬೆಸೆದು
ಛಂದಸ್ಸು ಹೊಂದಿಸುವ ಕೆಲಸ ರಮ್ಯ || ೨ ||

ನಸುಬಿರಿದ ಮೊಗ್ಗುಗಳ ಸೂತ್ರದೊಲು ಬಂಧಿಸಲು
ಶೃಂಗಾರಗೊಳ್ಳುವುದು ಕುಸುಮ ಹಾರ ||
ಮನದಲರಳಿದ ಭಾವ ಕ್ರಮದಲ್ಲಿ ಹೊಂದಿಸಲು
ಸೃಷ್ಟಿಗೊಳ್ಳುವುದಲ್ಲಿ ಕಾವ್ಯ ಸಾರ || 

ಮನಸು ಇದ್ದರೆ ಸಾಕು ಕೊಂಚ ಪರಿಶ್ರಮ ಬೇಕು
ಕ್ರಮ ಬಿಡದೆ ಮುನ್ನೆಡೆವ ದೃಢತೆ ಬೇಕು || 
ಕವಿ ಬರೆದ ಕವನವನು ಓದುಗನು ಗುನುಗುನಿಸೆ
ಸಾರ್ಥಕ್ಯವೆನ್ನಿಪುದು ಕವಿಯ ಬದುಕು || ೩ ||

- ಸುರೇಖಾ ಭೀಮಗುಳಿ
17/10/2016
ಚಿತ್ರ ಕೃಪೆ : ಅಂತರ್ಜಾಲ

Friday, October 14, 2016

" ಪ್ರೀತಿಯೆಂಬ ಬಂಧನ "




 
 
ಪ್ರೀತಿ ಎಂಬ ಭಾವದಲ್ಲಿ
ಬಂಧಿಸಿಡುವಿರೇಕೆ ? ||
ಪಕ್ಷಿಯೊಂದ ಹಿಡಿದು ತಂದು
ಗೂಡಲಿಟ್ಟ ಹಾಗೆ || ೧ ||


ಇಟ್ಟ ಗೂಡು ಚಿನ್ನವೆಂದು
ಹಕ್ಕಿಗೇನು ಗೊತ್ತು ? ||
ಉಸಿರುಕಟ್ಟಿ ಸಾಯದಿರಲಿ
ಗಗನವದರ ಸೊತ್ತು || ೨ ||


ಶುದ್ಧವಾದ ಪ್ರೀತಿಗಿರದು
ಕಳೆದು ಹೋಗೊ ಭೀತಿ ||
ಕಟ್ಟಿ ಹಾಕಿ ಕೊಲ್ಲ ಬೇಡಿ
ಅದುವೆ ನಿಮಗೆ ನೀತಿ || ೩ ||


- ಸುರೇಖಾ ಭೀಮಗುಳಿ
14/10/2016
ಚಿತ್ರ : ಅಂತರ್ಜಾಲ

ಭಾವ ಋಣ : Raghavendra Raghu ಅವರ ಪದ್ಯದಿಂದ ಕದ್ದದ್ದು.

Tuesday, October 4, 2016

" ನೆನಪುಗಳ ಕುರಿತು........ "



ಮೆಲ್ಲಮೆಲ್ಲನೆ ನನ್ನ ಆವರಿಸದಿರು ನೆನಪೆ
ಸಲ್ಲದಿಹ ವ್ಯಾಮೋಹ ನಿನಗದೇಕೆ ? ||
ಕೊಲ್ಲಲಾರೆಯೊ ನೀನು ಮತ್ತೊಮ್ಮೆ ಎದುರಾಗಿ
ತಲ್ಲಣವ ಸೃಷ್ಟಿಸುವ ಸಂಚದೇಕೆ ? || ೧ ||

ನಿನ್ನ ಇರುವಿಕೆ ನನಗೆ ಹೆಚ್ಚೇನು ಬಾಧಿಸದು
ನಿನ್ನಿಂದ ಕಲಿತಿಹೆನು ಬದುಕ ಪಾಠ ||
ನಿನ್ನಿಂದಲೇ ನನ್ನ ಜೀವನಕೆ ಒಂದರ್ಥ
ನಿನ್ನೊಂದಿಗೇ ನನ್ನ ಬಾಳ ಓಟ || ೨ ||

ಕಹಿನೆನಪುಗಳೆ ಬನ್ನಿ ಕಹಿಯನಲ್ಲಿಯೆ ಬಿಟ್ಟು
ಸಿಹಿನೆನಪುಗಳೆ ನಿಮಗೆ ನನ್ನ ಕರೆಯು ||
ಸಹಿಹಾಕಿ ತೆರಳುತಲಿ ಹೊಸನೆನಪನೊಯ್ಯಿರೀ
ದಹಿಸದಿರಿ ಆತ್ಮವನು ಇದುವೆ ಮೊರೆಯು || ೩ ||

- ಸುರೇಖಾ ಭೀಮಗುಳಿ
04/10/2016
ಚಿತ್ರ : ಅಂತರ್ಜಾಲ 

Thursday, September 29, 2016

" ಕಾಡದಿರು ಮನವೇ...... "


ಬೇಡವೆಂದರು ಏಕೆ ಮತ್ತೆ ನೀ ಕೊರಗುತಿಹೆ
ಕಾಡದಿರು ಓ ಮನವೆ ನೀನು ಹೀಗೆ ||
ಮಾಡದಿರು ಘಾಸಿಯನು ಹಳೆನೆನಪ ಕೆದಕುತಲಿ
ದೂಡದಿರು ನನ್ನನ್ನು ಇನ್ನು ಕೆಳಗೆ || ೧ ||

ಬದುಕೆಮಗೆ ಕೊಟ್ಟಿಹುದು ಮೃದುಮಧುರ ಅನುಭೂತಿ
ಅದು ನಿನಗೆ ಬೇಕಿಲ್ಲ ಮೆಲ್ಲುವುದಕೆ ||
ಬದಲಾಗಿ ಕಹಿನೆನಪ ಮತ್ತೆ ಮತ್ತೇ ನೆನೆದು
ಕೆದಕುತ್ತ ಗೋಳಿಡುವ ಹುಚ್ಚದೇಕೆ ? || ೨ ||

ಚಿತ್ತದಲಿ ಹೊಳೆಯುವವು ಹಲವಾರು ಚಿತ್ರಗಳು
ಸತ್ತಂತೆ ಉಳಿದಿಹವು ಇನ್ನು ಕೆಲವು ||
ಮತ್ತದರ ಮಧ್ಯದಲಿ ಬೇಕಾದ್ದ ನೀವಾಯ್ದು
ಉತ್ತಮವ ಮೆರೆಸುವುದು ನನ್ನ ಒಲವು || ೩ ||

ಹೊರಜಗವು ದರ್ಪಣವು ನಿನ್ನದೆ ಪ್ರತಿಬಿಂಬ
ಪರರಿಗಾಗಿಯೆ ಸಲಲಿ ನಿನ್ನ ನಗುವು ||
ಕೊರಗುತ್ತ ಕುಳಿತಿರಲು ನೀ ಒಂಟಿಯಾಗುವೆಯೊ
ಅರಳುತ್ತಲಿರಲೆಂದು ನಿನ್ನ ಮೊಗವು || ೪ ||

- ಸುರೇಖಾ ಭೀಮಗುಳಿ
29/09/2016
ಚಿತ್ರ : ಅಂತರ್ಜಾಲ

Friday, September 23, 2016

" ಬಿಕ್ಕಳಿಸುತ್ತಿರುವ ಮನಕ್ಕೊಂದಿಷ್ಟು ಸಾಂತ್ವನ "


ಉಕ್ಕಿ ಬರುತಿದೆ ದುಃಖ ಬಿಕ್ಕಳಿಸುತಿದೆ ಮನಸು
ಸುಕ್ಕುಗಟ್ಟಿದೆ ಮೌನ ಯಾಕೆ ಹೀಗೆ ? ||
ದಿಕ್ಕು ತಪ್ಪಿದೆ ಸ್ನೇಹ ಹಕ್ಕು ಸಾಧಿಸಲರಿಯೆ
ಸಿಕ್ಕೀತೆ ಪರಿಹಾರ ಕಟ್ಟಕಡೆಗೆ ? || ೧ ||

ದಿಕ್ಕುಗೆಟ್ಟವರಂತೆ ಮುಕ್ಕಾಗದಿರು ಮನವೆ
ದಕ್ಕಲೇ ಬೇಕೆಂಬ ಹಠವದೇಕೆ ? ||
ಪಕ್ಕಾಗಲೀ ಸಮಯ ಚೊಕ್ಕಗೊಳ್ಳಲಿ ಹೃದಯ
ತಿಕ್ಕಾಟವದು ಸಹಜ ಬದುಕುವುದಕೆ || ೨ ||

ತಿಕ್ಕಿದಾಗಲೆ ಚಿನ್ನ ಚಕ್ಕಂಥ ಹೊಳೆಯುವುದು
ಚಿಕ್ಕ ನೆವವೂ ಸಾಕು ಸ್ವಂತ ಖುಷಿಗೆ ||
ನಕ್ಕುಬಿಡು ಒಂದು ಕ್ಷಣ ಮಿಕ್ಕಿದ್ದ ವಿಧಿಗೆ ಬಿಡು
ಸಕ್ಕರೆಯ ಸವಿಯುಂಟು ನಿನ್ನ ನಗೆಗೆ || ೩ ||

- ಸುರೇಖಾ ಭೀಮಗುಳಿ

23/09/2016
ಚಿತ್ರ : ಅಂತರ್ಜಾಲ

" ಓ ಮಗುವೆ "



ಹದಿನೆಂಟು ವರ್ಷಗಳು ಕಳೆದು ಹೋದವು ಹೇಗೆ ?
ಹದಿನೇಳು ಮತ್ತೊಂದು ದಿನದ ಹಾಗೆ ||
ಹೂವು ಅರಳುವ ತೆರದಿ ಬಿರಿದೆ ನನ್ನೊಡಲಲ್ಲಿ
ಬದುಕು ಸಾರ್ಥಕವಾಯ್ತು ನಿನ್ನ ಜೊತೆಗೆ || ೧ ||

ಮೋದಗೊಂಡಿತ್ತು ಮನ ನಿನ್ನ ಮೊಗವನು ನೋಡಿ
ಓ ಮಗುವೆ ಓ ನಗುವೆ ಎಲ್ಲಿಂದ ಬಂದೆ ? ||
ದಾಂಪತ್ಯ ಫಲಿಸಿತ್ತು ನಿನ್ನ ಬರುವಿನ ಜೊತೆಗೆ
ಕಳಿಸಿಕೊಟ್ಟನೆ ನಿನ್ನ ಈ ಜಗದ ತಂದೆ ? || ೨ ||


ನಿನ್ನ ಗುಂಡನೆ ಕೆನ್ನೆ ಮುದ್ದು ಕೈ ಕಾಲುಗಳು
ಪುಟ್ಟ ತುಟಿಗಳ ನಿನ್ನ ಬೊಚ್ಚು ಬಾಯಿ ||
ದೇವಲೋಕದ ಸಿರಿಯೆ ನಮಗಾಗಿ ಧರೆಗಿಳಿಯೆ
ಎನಿಸಿಕೊಂಡೆನು ನಾನು ನಿನ್ನ ತಾಯಿ || ೩ ||

ಹದಿನೆಂಟು ವರ್ಷದಲಿ ಎಷ್ಟೆಲ್ಲ ಬದಲಾಯ್ತು ?
ನನಗಿಂತ ಹತ್ತಿಂಚು ನೀನು ಹೆಚ್ಚು ||
ತಾಯಿ ಭಾರತಿ ಋಣವ ತೀರಿಸುವ ಹೊಣೆಯಿಹುದು
ಆಗು ನೀನೆಲ್ಲರಿಗು ಅಚ್ಚು ಮೆಚ್ಚು || ೪ ||

- ಸುರೇಖಾ ಭೀಮಗುಳಿ
22/09/2016
ಚಿತ್ರ : ನಾನು ಮತ್ತು ಸುಮಂತ (ಹದಿನೇಳು ವರ್ಷದ ಹಿಂದೆ)

Wednesday, September 14, 2016

" ಒಂದು ನೆನಪು "



ಜೇಡ ಕಟ್ಟಿದ ಬಲೆಯ ಇಬ್ಬನಿಯ ಚಿತ್ತಾರ
ಮುತ್ತು ಮಣಿ ಶೃಂಗಾರ ಒಂದು ನೆನಪು ||
ಅಡಿಕೆ ತೋಟದ ನಡುವೆ ಆ ಬಲೆಯು ಕಡಿದಾಗ
ಪಾಪ ಪ್ರಜ್ಞೆಯು ಇರಿದ ಒಂದು ನೆನಪು || ೧ ||


ದೂರ ಬೆಟ್ಟವನೆಲ್ಲ ಮಂಜು ಮುಸುಕಿದ ಹೊತ್ತು
ಅದು ಮಾಗಿ ಮುಂಜಾವು ಒಂದು ನೆನಪು ||
ರವಿಕಿರಣ ಸ್ಪರ್ಶದಲಿ ಆ ತೆರೆಯು ಸರಿದಾಗ
ಪ್ರಕೃತಿ ಸೊಬಗದು ಮೆರೆದ ಒಂದು ನೆನಪು || ೨ ||


ಅರುಣ ಉದಯದ ಸಮಯ ಹೊಳೆಯ ನೀರಿನ ಮೇಲೆ
ತೆಳು ಹಬೆಯ ಗಮನಿಸಿದ ಒಂದು ನೆನಪು ||
ಹೊಳೆಸ್ನಾನದಾಸೆಯಲಿ ತುಂಗೆ ಮಡಿಲನು ಸೇರಿ
ಸಮಯ ಪ್ರಜ್ಞೆಯ ಮರೆತ ಒಂದು ನೆನಪು || ೩ ||


ನನಗೇಕೆ ಆಗಾಗ ಕನವರಿಕೆಯಾ ಮೋಹ ?
ಕನಸಿನಲು ಬರುತಾವೆ ಹಳೆಯ ನೆನಪು ||
ನಿಜವ ಹೇಳಿರಿ ನನಗೆ- ಕಾಡಲಾರವೆ ನಿಮಗೆ ?
ಬಾಲ್ಯ ಕಾಲದ ಸವಿಯ ಒಂದು ನೆನಪು || ೪ ||


- ಸುರೇಖಾ ಭೀಮಗುಳಿ
14/09/2016
ಚಿತ್ರ : ಅಂತರ್ಜಾಲ

Tuesday, August 23, 2016

" ಹೆಂಡತಿ ಊರಿಂದ್ಬರುವಳು ಎಂದರೆ "


ಹೆಂಡತಿ ಊರಿಂದ್ಬರುವಳು ಎಂದರೆ
ನನ್ನೆದೆ ಡವಡವ ಎನ್ನುವುದು ||
ಶಿಸ್ತಿನ ಪಾಠವ ಕೇಳುವುದೆಂದರೆ
ನನ್ನಯ ಮನ ಹಿಂಜರಿಯುವುದು || 1 ||


ಅವಳಿಲ್ಲದೆಯೇ ಕಳೆಯುವ ದಿನದಲಿ
ಮನೆಯಲಿ ಅಶಿಸ್ತು ಮೆರೆಯುವುದು ||
ಬೇಕಾಬಿಟ್ಟೀ ಜೀವನ ಶೈಲಿಯು
ನನ್ನನು ಹಿಡಿದಾವರಿಸುವುದು || 2 ||


ಹೆಂಡತಿ ಮನೆಒಳ ಹೆಜ್ಜೆಯನಿಟ್ಟೊಡೆ
ಕಸಗಳು ಸ್ವಾಗತ ಕೋರುವವು ||
ಹಾಸಿಗೆ ಬಟ್ಟೆಯ ಪಾತ್ರೆಯ ರಾಶಿಯು
ನನ್ನಯ ಕಥೆಯನು ಸಾರುವವು || 3 ||


ಅಶಿಸ್ತು ಎಂದರೆ ಅವಳಿಗೆ ಆಗದು
ಎನ್ನವ ವಿಷಯದ ಅರಿವುಂಟು ||
ಹೆಂಡತಿ ಹತ್ತಿರ ಬೈಯ್ಯಿಸಿಕೊಳ್ಳುವ
ಅನುಭವದಲ್ಲಿಯು ಮಜವುಂಟು || 4 ||


- ಸುರೇಖಾ ಭೀಮಗುಳಿ
21/08/2016
ಚಿತ್ರ : ಅಂತರ್ಜಾಲ

Thursday, August 18, 2016

" ಭಾವದೀಪ್ತಿಗೊಂದು ಬಿನ್ನಹ "

ಭಾವದೀಪ್ತಿಯೆ ಏಕೆ ಮಂಕಾಗಿ ಕುಳಿತಿರುವೆ ?
ಮನದಲ್ಲಿ ಕುದಿಯುತಿದೆ ಏನೊ ಮೌನ ||
ನನಗೆ ತಿಳಿಯುದ ಹಾಗೆ ನೋವನುಣ್ಣುವಿಯೇಕೆ ?
ಹರಳುಗಟ್ಟಿದೆ ಏಕೆ ನನ್ನ ಸುಮನ ? || ೧ ||

ಬನ್ನಿರೈ ಭಾವಗಳೆ ನೀವ್ದೂರ ಸರಿಯದಿರಿ
ಹೋಗದಿರಿ ನೀವುಗಳು ನನ್ನ ಬಿಟ್ಟು ||
ನೀವು ತೊರೆದರೆ ಅಲ್ಲಿ ಶೂನ್ಯ ಆವರಿಸುವುದು
ನನ್ನೊಡನೆ ನಿಮಗೇಕೆ ಇಂಥ ಸಿಟ್ಟು ? || ೨ ||

ಭಾವದೀಪ್ತಿಯೆ ನಿನಗೆ ದೃಷ್ಟಿ ತಾಕಿಹುದೇನು ?
ನೀನೇಕೆ ಹೀಗಿಂದು ಸುಮ್ಮನಿರುವೆ ? ||
ನನ್ನ ಬಿನ್ನಹ ಕೇಳಿ ಮತ್ತೊಮ್ಮೆ ಪ್ರಜ್ವಲಿಸು
ನಿನ್ನ ಬೆಳಕಲಿ ನಾನು ಸ್ಫೂರ್ತಿಗೊಳುವೆ || ೩ ||

- ಸುರೇಖಾ ಭೀಮಗುಳಿ
18/08/2016
ಚಿತ್ರ : ಸುಮಂತ ಭೀಮಗುಳಿ

Thursday, July 28, 2016

" ಬೆಳಗಿನ ಉಪಹಾರ "



ಬೆಳಗಿನಾ ಉಪಹಾರ ಹೊಂದಿಸುವ ಚಿಂತೆಯೇ ?
ಬಲುಸುಲಭ ಪರಿಹಾರ ನಾ ತಿಳಿಸುವೆ ||
ದಿನಕೊಂದು ತಿಂಡಿಯನು ಮಾಡುವುದೆ ಸರಿದಾರಿ
ಆಗಲೇ ಈ ವ್ಯಥೆಗೆ ಮುಕ್ತಾಯವೆ || ೧ ||

ಹುಳಿದೋಸೆ, ಸೆಟ್ದೋಸೆ, ಬರಿಯ ಅಕ್ಕಿಯ ದೋಸೆ
ಮತ್ತೊಂದು ದಿನದಲ್ಲಿ ಅಕ್ಕಿ ಇಡ್ಲಿ ||
ಅವಲಕ್ಕಿ ಉಪ್ಪಿಟ್ಟು ರಜೆಯ ದಿನಗಳಿಗಿರಲಿ
ನಡುವೊಂದು ದಿನಕಾಗಿ ರವೆಯ ಇಡ್ಲಿ || ೨ ||

ದೋಸೆ ಜೊತೆಯಲಿ ರುಚಿಯು ತೆಂಗಿನ್ಕಾಯಿಯ ಚಟ್ನಿ
ಆಲು ಸಾಗುವು ಸೊಗಸು ಸೆಟ್ದೋಸೆಗೆ ||
ಬರಿಯಕ್ಕಿ ದೋಸೆ ಜೊತೆ ಬೆಣ್ಣೆ ಬೆಲ್ಲವು ಚಂದ
ಟೊಮೆಟೊ ಗೊಜ್ಜದು ಬೇಕು ಇಡ್ಲಿ ಜೊತೆಗೆ || ೩ ||

ಚಿತ್ರನ್ನ ಮೊಸರನ್ನ ತರಕಾರಿ ಅನ್ನಗಳು
ಬಿಸಿಬೇಳೆ ಬಾತು ಜೊತೆ ಖಾರ ಬೂಂದಿ ||
ಪಲಾವು ಮೊಸರ್ಬಜ್ಜಿ ವಾಂಗಿಬಾತಾದೀತು
ಸೊಪ್ಪು ಅನ್ನವು ಒಮ್ಮೆ ಮಧ್ಯ ದಿನದಿ || ೪ ||

ರೊಟ್ಟಿ ಚಪಾತಿಗಳೋ ರಾತ್ರಿ ಹೊತ್ತಿಗೆ ಸಮವು
ಸಮಯ ಹೊಂದುವುದಿಲ್ಲ ಬೆಳಗಿನೊತ್ತು ||
ಪೂರಿ ಬನ್ಸು ವಡೆಗಳು ತಿಂಗಳೊಪ್ಪತ್ತಿನಲಿ
ಮನೆಮಂದಿ ಆರೋಗ್ಯ ನಮ್ಮ ಸೊತ್ತು || ೫ ||

ಹೋಟೆಲಿನ ತಿಂಡಿಗಳು ಅನಿವಾರ್ಯ ದಿನಕಿರಲಿ
ಹೊರಹೊರಟ ಸಮಯದಲಿ ಒದಗಿಬರಲಿ ||
ರುಚಿಗೆಂದೊ ಮಜಕೆಂದೊ ಯಾವಾಗಲೋ ಒಮ್ಮೆ
ಕೊಂಡು ತಿನ್ನುವ ನಾವು ಖುಷಿಖುಷಿಯಲಿ || ೬ ||

- ಸುರೇಖಾ ಭೀಮಗುಳಿ
28/07/2016
ಚಿತ್ರ : ಅಂತರ್ಜಾಲ

Friday, July 8, 2016

"ಸಂಸಾರ ಆಶಯ"







ಮನೆಹೊರಗೆ ಚಳಿಗಾಳಿ ತುಂತುರಿನ ಮಳೆಹನಿಯು
ಕರಿಮೋಡ ಕವಿದಿಯುದು ಭೂಮಿ-ಬಾನು ||
ಆ ದೇವ ಒದಗಿಸಿದ ಬೆಚ್ಚನೆಯ ಮನೆದೊಳಗೆ
ಸಂಸಾರ ಸಾಗರದಿ ನಾನು ನೀನು || ೧ ||

ಹಲವಾರು ಬಡವರಿಗೆ ಬೆಚ್ಚನೆಯ ಸೂರಿಲ್ಲ
ಎಂಬ ಸತ್ಯದ ಅರಿವು ನನಗೆ ಉಂಟು ||
ಬೆಚ್ಚನೆಯ ಮನೆಯಿದ್ದು ನೆಮ್ಮದಿಯ ಸುಳಿವಿಲ್ಲ
ಮನದೊಳಗೆ ಅವಿತಿಹವು ನೂರು ಗಂಟು || ೨ ||

ಇನ್ನು ಕೆಲವರಿಗಂತು ಕೈತುಂಬ ಕಾಸಿಹುದು
ಸುಖಿಸೆ ಸಮಯವೆ ಇಲ್ಲ ಅವರ ಬದುಕ ||
ಮತ್ತಿಷ್ಟು ಮನುಜರಿಗೆ ಸಮಯವಿದೆ ಧಾರಾಳ
ವ್ಯಯಿಸೆ ಹಣವೇ ಇಲ್ಲ ಎಂಥ ಕುಹಕ ! || ೩ ||

ಹಣ-ಸಮಯ ಅನುಕೂಲ, ಬೆಚ್ಚನೆಯ ಮನೆ-ಮನಸು
ಜೊತೆಗೊಂದು ಸಹೃದಯ ಇಲ್ಲೆಂಬ ಕೊರಗು ||
ಎಲ್ಲದರ ಮೇಳದಲಿ ಜೊತೆಕೊಡಲಿ ಸಾಂಗತ್ಯ
ಒಂಟಿ ಬದುಕಿಗೆ ಇಲ್ಲ ಪ್ರಾಕೃತಿಕ ಮೆರುಗು || ೪ ||

ವೆಚ್ಚಕ್ಕೆ ಹೊನ್ನಿರಲಿ ವಾಸಕ್ಕೆ ಮನೆಯಿರಲಿ
ಮುದ್ದಾದ ಸಂಸಾರ ಜೊತೆಯಲಿರಲಿ ||
ಬಂಧುತ್ವ ಬಲಗೊಳಲಿ ಬಾಂಧವ್ಯ ನೆಲೆಗೊಳಲಿ
ದೇವನಿತ್ತಿಹ ಬಾಳು ಸಫಲಗೊಳಲಿ || ೫ ||

- ಸುರೇಖಾ ಭೀಮಗುಳಿ
08/07/2016
ಚಿತ್ರ : ಅಂತರ್ಜಾಲ

Tuesday, July 5, 2016

" ಕುವರಿ "



ದೇವನಿರುವನು ಮಗುವ ಮುಗ್ಧ ಮನದಲ್ಲಿಯೇ
ಅವನಿಲ್ಲ ಕಟ್ಟಿರುವ ಗುಡಿಯ ಒಳಗೆ ||
ತನ್ಮಯದಿ ಕುಳಿತಿರುವ ಮುದ್ದು ಹುಡುಗಿಯ ನೋಡಿ
ಅವನೋಡಿ ಬಂದಿಹನು ಇವಳ ಬಳಿಗೆ || ೧ ||

ಎಳೆಬಿಸಿಲು ಹೊಸಹಸಿರು ಸ್ವಚ್ಚಂದ ಪರಿಸರವು
ಕಾವಿಕಟ್ಟೆಯ ಮೇಲೆ ಪುಟ್ಟ ಕುವರಿ ||
ತನ್ನಾಟದೊಳಗವಳು ಜಗವನ್ನೆ ಮರೆತಿಹಳು
ಅವಳ ಹಾಡಿಗೆ ಬೇಕೆ ತಾಳ ತಂಬೂರಿ ? || ೨ ||

ಹುಡುಕುತ್ತಲಿಹೆವಲ್ಲ ಗುಡಿಗೋಪುರದ ಒಳಗೆ
ಇಹರೇನು ಗೋವಿಂದ ಶಿವ ಪಾರ್ವತಿ ||
ಮುದ್ದು ಮಕ್ಕಳ ತೆರದಿ ಮೂರ್ತಗೊಂಡಿಹರಲ್ಲ
ಗುರುತಿಸಲು ಬೇಕಿಹುದು ನಮಗೆ ಶಕ್ತಿ || ೩ ||

ಭರತ ಖಂಡವೆ ಗುಡಿಯು ನಾವಿಲ್ಲಿ ಬಂಧುಗಳು
ಹೆಣ್ಣು ಮಕ್ಕಳು ನಮಗೆ ದೇವಿಯಂತೆ ||
ಜನ್ಮಿಸಿದ ಬಾಲಕರು ರಾಘವನ ಪ್ರತಿರೂಪ
ಸಾರ್ಥಕ್ಯಗೊಳ್ಳಲಿದೆ ಜಗದ ಸಂತೆ || ೪ ||

- ಸುರೇಖಾ ಭೀಮಗುಳಿ
05/07/2016
ಚಿತ್ರ : Rohini H S (ನಮ್ ನಗರ ಗ್ರೂಪ್)

Monday, June 27, 2016

" ಬಾವನ ಭಾವ "

ನನ್ನ ನಾದಿನಿ ಇವಳು ಬಹಳ ಒಳ್ಳೆಯ ಹುಡುಗಿ
ಇವಳ ರೇಗಿಸುವಾಸೆ ಯಾಕೊ ಕಾಣೆ ||
ಕಾಡುವೆನು ಈಕೆಯನು ಲಘು ಹಾಸ್ಯಗೈಯ್ಯುತ್ತ
ನೋಯಿಸುವ ಮನವಿಲ್ಲ ದೇವರಾಣೆ || 1 ||

ಧೈರ್ಯ ಸಾಲುವುದಿಲ್ಲ ಹೆಂಡತಿಯ ರೇಗಿಸಲು
ಉಪವಾಸ ವನವಾಸ ಭಯದ ನೆರಳು ||
ಅಪಾಯಗಳಿನಿತಿಲ್ಲ ನಾದಿನಿಯ ಕಾಡಿದರೆ
ಇವಳು ಅತ್ತೆಯ ಮನೆಯ ಮುದ್ದು ಮಗಳು || 2 ||

ನಾದಿನಿಯ ಹುಸಿಮುನಿಸು ಸಂತಸವ ನೀಡುವುದು
ಕಾರಣವು ಏನೆಂದು ನಾನು ಅರಿಯೆ ||
ತಂಗಿ ಕಣ್ಣಂಚಿನಲಿ ಕಣ್ಣೀರು ತುಳುಕಿದರೆ
ಪತ್ನಿ ತಡೆಯೊಡ್ಡುವಳು ಸಾಕು ದೊರೆಯೆ || 3 ||

ಅತ್ತೆ ಮಾವನಿಗಿವಳು ಅಚ್ಚು ಮೆಚ್ಚಿನ ಮಗಳು
ಮುದ್ದು ತಂಗಿಯು ಇವಳು ನನ್ನೊಡತಿಗೆ  ||
ಮನದಲ್ಲಿ ತುಂಬಿಹುದು ಕಾಳಜಿಯ ಮೃದು ಭಾವ
ಶುಭವನ್ನೆ ಕೋರುವೆನು ನನ್ನ ನಾದಿನಿಗೆ || 4 ||

- ಸುರೇಖಾ ಭೀಮಗುಳಿ
27/06/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, June 24, 2016

" ನಾದಿನಿಯ ದುಮ್ಮಾನ "


ಬಾವ ಇಂಥವರೆಂದು ನನಗೆ ಗೊತ್ತಿರಲಿಲ್ಲ
ಗೋಳುಹೊಯ್ವರು ನನ್ನ ಮತ್ತೆ ಮತ್ತೆ ||
ವೇದನೆಯ ಭಾವವಿದು ಮನದೊಳಗೆ ಅವಿತಿಹುದು
ನಾನು ನೊಂದಿಹುದೇಕೆ ನಿಮಗೆ ಗೊತ್ತೆ ? || ೧ ||

ನನ್ನ ಗೋಳಾಡಿಸುವ ಚಟವೇಕೋ ಇವರಿಗೆ ?
ನೋಯುವೆನು ಒಳಗೊಳಗೆ ಹಿಂಸೆಯಾಗಿ ||
ಅಂತರಾಳದ ಬೇನೆ ಇವರ ಗಮನದಲಿಲ್ಲ
ಹೃದಯ ನರಳಿಹುದಿಂದು ನೋವು ತಾಗಿ || ೨ ||

ಮುನಿಸಿಕೊಂಡರು ಕೂಡ ಗೋಳುಗುಡಿಸುವರಲ್ಲ
ಚಂದ ಕಾಣುವೆ ಈಗ ನೀನು ಜಾಣೆ ||
ಒಂದು ಮೆಚ್ಚುಗೆ ನೋಟ ಮತ್ತೊಂದು ಸಿಹಿಮಾತು
ಕಾಯುವುದು ನನ್ನ ಮನ ಯಾಕೊ ಕಾಣೆ || ೩ ||

ಹುಸಿಮುನಿಸು ತೋರಿದರೆ ಕೇಳುವರು ಬಾವಯ್ಯ
ಒಂದು ಕನ್ನಡಿಯನ್ನು ನೀನು ತಾರೆ ||
ಕನ್ನಡಿಯ ನನ್ನೆಡೆಗೆ ತಿರುಗಿಸುತ ಹೇಳುವರು
’ನೋಡಿಕೋ ನಿನ್ನಯಾ ಗಡಿಗೆ ಮೋರೆ’ || ೪ ||

ಮೌನಿಯಾದರೆ ಕೂಡ ಮಾತಿಗೆಳೆಯುವರಾಗ
’ಮೌನದಲಿ ಇಹುದಲ್ಲ ಎಷ್ಟು ಶಾಂತಿ ?’ ||
ಸುಮ್ಮನುಳಿಯಲು ಬಿಡದೆ ರೇಗಿಸುವ ಹುನ್ನಾರ
’ ಅರಳಿದರೆ ನಿನ್ನ ಮುಖ ಸೂರ್ಯಕಾಂತಿ...... ’ || ೫ ||

- ಸುರೇಖಾ ಭೀಮಗುಳಿ
24/06/2016
ಚಿತ್ರ : ಅಂತರ್ಜಾಲ


 ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Saturday, June 18, 2016

" ನನ್ನಯ ಹೆಂಡತಿ "


ನನ್ನಯ ಹೆಂಡತಿ ಕೋಪಿಸಿಕೊಂಡರೆ ಮನೆಯಲಿ ಒಂಥರ ಹಬ್ಬ
ಮನದಲಿ ಮೌನವು ಆವರಿಸುವುದೂ ತಡೆಯಲು ಆಗದು ’ಅಬ್ಬಾ !’ || ಪ ||

ಮೋಹದ ಮಡದಿಯು ದುಮುಗುಡುತಿದ್ದರೆ ಮುಖವೋ ಗಡಿಗೆಯ ರೀತಿ
ನಾನೂ ಅವಳನು ರಮಿಸುವ ಪ್ರಕ್ರಿಯೆ ಅವಳಿಗು ಬಹಳಾ ಪ್ರೀತಿ
ಕೋಪಿಸಿಕೊಂಡರೆ ಕರಗಿಯೆ ಹೋಗುವೆ ಎಂಬುದು ಅವಳಿಗೆ ಗೊತ್ತು
ಹುಸಿಮುನಿಸಿನಲೀ ಆಡುವ ನಾಟಕ ಮುನಿಸೂ ಅವಳಿಗೆ ಸೊತ್ತು || ೧ ||

ಪ್ರೇಮಿಸಿದವಳೂ ಕೈಹಿಡಿದವಳೂ ದೇವನು ಕೊಟ್ಟಿಹ ವರವು
ನೆಮ್ಮದಿ ಜೀವನ ಆಕೆಯ ಜೊತೆಯಲಿ ಅವಳಿಂದಲೆ ನನ್ನಿರುವು
ಅವಳಿಗೆ ನಾನೂ ನನಗೇ ಅವಳೂ ಬ್ರಹ್ಮನೆ ಬರೆದಿಹನಲ್ಲ
ಮುನಿದರು ತವರಿಗೆ ಹೋಗದೆ ಉಳಿವಳು .. ’ನಾನೇ ಅವಳಿಗೆ ಎಲ್ಲ’ || ೨ ||

 - ಸುರೇಖಾ ಭೀಮಗುಳಿ
18/06/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, June 16, 2016

" ಇಲ್ಲಗಳ ನಡುವೆ "

ಮಾವನಾ ತಿಥಿಯೆಂದು ಇವರೂರಿಗೋಗಿಹರು
ನನ್ನ ಕೇಳುವರಾರು ಈ ಮನೆಯಲಿ ? || ಪಲ್ಲವಿ ||

"ಬೆಳಗಾಯ್ತು ಎದ್ದೇಳು ಮಕ್ಕಳಿಗೆ ತಡವಾವ್ತು"
ಎಂದೆನ್ನ ಇಂದಾರು ಎಬ್ಬಿಸುವರಿಲ್ಲ ||
ಅಂಗಳವ ಗುಡಿಸುತ್ತ ನೀರನ್ನು ಚಿಮುಕಿಸುತ
ರಂಗವಲ್ಲಿಯನಿಡಲು ಕರೆವರಿಲ್ಲ || ೧ ||

ಅಡಿಗೆಮನೆ ಕೆಲಸದಲಿ ಜೊತೆಯನ್ನು ಒದಗಿಸುತ
ಈರುಳ್ಳಿ ಹೆಚ್ಚಿಡುವ ಇನಿಯನಿಲ್ಲ ||
ಮನೆಕೆಲಸ ಸಮಯದಲಿ ದಣಿವಾಯ್ತೆ ಎನ್ನುತಲಿ
ಕನಿಕರಿಪ ಪತಿರಾಯ ಮನೆಯೊಳಿಲ್ಲ || ೨ ||

ಬಿಟ್ಟು ಬಾ ಗಣಕವನು ಎಸೆದು ಬಿಡು ಚರವಾಣಿ
ಬಂದು ಬಿಡು ನೀ ಬೇಗ ಎನುವರಿಲ್ಲ ||
ಅವರಿರುವ ಸಮಯದಲಿ ಸೆಳೆಯುವುದು ವಾಟ್ಸಾಪು
ಇಂದೇತಕೋ ಏನೊ ಸೆಳೆಯುತಿಲ್ಲ ! || ೩ ||

- ಸುರೇಖಾ ಭೀಮಗುಳಿ
16/06/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

( ಅಷ್ಟೆಲ್ಲ ಏನೂ ಕೋಲ ಇಲ್ಲ... ನಾಳೆ ವಾಪಾಸ್ ಬರ್ತಾರೆ.... ಏನೋ ಎಲ್ಲರು ಫೇಸ್ ಬುಕ್ ನಲ್ಲಿ "ಅವರಿಲ್ದೂಟ" ಅಂಥ ಪದ್ಯ(Mohini damle) ... ಲೇಖನ (Rajanikant mrugavade) ಬರೆದ್ರಲ್ಲ.... ನಾನೂ ಏನಾದ್ರು ಬರೆಯೋಣ ಅಂಥ ಶುರುಮಾಡ್ದೆ... ಹೀಗಾಯ್ತು ನೋಡಿ ಕಥೆ.... ಏನು ಪ್ರೇಮಕವಿ ಬರೆದ್ರೆ ಮಾತ್ರ ಪ್ರೇಮಗೀತೆನಾ ? ... ನಾವು ಬರೆದ್ರೆ ಅದಕ್ಕೆ ವ್ಯಾಲ್ಯೂನೆ ಇಲ್ವಾ... ? ಹ್ಹಹ್ಹಹ್ಹಾ.... )

Monday, June 13, 2016

" ಮೈಸೂರು ಮಲ್ಲಿಗೆಯ ಗುಂಗಿನೊಡನೆ..... "


ಇಂದೇಕೊ ಮನದಲ್ಲಿ ಮಲ್ಲಿಗೆಯ ಹೂಗಂಧ
ಪ್ರೇಮಕವಿ ಹಾಡುಗಳ ಬಿಡದ ಗುಂಗು ||
ಪ್ರೀತಿ ಪ್ರೇಮದ ಒರತೆ, ವಿರಹ ಭಾವದ ಕವಿತೆ
ಬರೆದು ಮುಗಿಸಿಹರಲ್ಲ ಎಂಬ ಕೊರಗು || ೧ ||

ಹುಡುಕಿಹೆನು ತಡಕಿಹೆನು ಬೇಡಿಹೆನು ಕಾಡಿಹೆನು
ನನ್ನ ಕವನಕೆ ಬರಲಿ ಹೊಸತು ಜೀವ ||
ಹೊಳೆದು ಬಿಟ್ಟಿತು ನೋಡಿ ಮನವ ಸೆಳೆಯಿತು ಕಾಡಿ
ಬಾವ - ನಾದಿನಿ ಎಂಬ ಮಧುರ ಭಾವ || ೨ ||

ನನ್ನ ಮನವಿದು ಈಗ ಕಳೆದು ಹೋಗಿದೆಯಲ್ಲ
ಕಾಲು ಶತಮಾನದಾ ಹಿಂದೆ ಹಿಂದೆ ||
ಆ ಕಾಲದಾ ನೆನಪ ಮತ್ತೆ ನಾ ಸವಿಯುತ್ತ
ಇಡುತಿರುವೆ ಹೊಸಕವನ ನಿಮ್ಮ ಮುಂದೆ || ೩ ||

ಪ್ರೇಮಕವಿಯನು ನೆನೆದು ನಾನಿಂದು ಬರೆದಿರುವೆ
ಕಲ್ಪನೆಯ ಹೊಸ ಕೂಸು ನಿಮ್ಮೆದುರಲಿ ||
ಹೇಗಿಹುದು ಹೇಳಿಬಿಡಿ ತಪ್ಪಿದ್ದ ತಿದ್ದಿಬಿಡಿ
ನಿಮ್ಮ ಹರಕೆಯು ನನ್ನ ಕಾಯುತಿರಲಿ || ೪ ||

 *********************************
ಕವನದೊಳಗಿನ ಕವನ :    " ನಾದಿನಿಯ ಮನ "
------------------------------------------------
ಅಮ್ಮ ಮೆಚ್ಚಿದ ಅಳಿಯ, ಅಪ್ಪ ಹುಡುಕಿದ ಹುಡುಗ
ಎಂಬ ವಿಷಯಗಳೆಲ್ಲ ಅತ್ತ ಇರಲಿ ||
ಮನದ ಮೂಲೆಯಲೇಕೊ ಸಣ್ಣನೆಯ ಬಿರುಗಾಳಿ
ಮುದ್ದು ಅಕ್ಕನ ಬಾಳು ಚೆನ್ನವಿರಲಿ || ೧ ||

ಅಕ್ಕ-ಬಾವಗೆ ಮದುವೆ ಎಂಬ ಸಂಭ್ರಮದೊಡನೆ
ನನ್ನ ಮನದಲು ಏಕೊ ಏನೋ ಕನಸು ||
ಅಕ್ಕ ಹೇಗೂ ಸ್ವಂತ ನಾನವರ ಹಕ್ಕಲ್ಲ
ಲಘು ಸಲಿಗೆ ಬಯಸುತಿದೆ ನನ್ನ ಮನಸು || ೨ ||

ಅಕ್ಕನೆದುರಲೆ ನನ್ನ ಮತ್ತೆ ಮತ್ತೇ ಕರೆದು
ಸೆಳೆಯುತ್ತಲಿಹರಲ್ಲ ನನ್ನ ಗಮನ ||
ನನ್ನ ಹೆಸರೂ ಕೂಡ ಇಷ್ಟು ಮುದ್ದಾಗಿದೆಯೆ ?
ಪ್ರಶ್ನೆ ಕೇಳಿದೆಯಲ್ಲ ನನ್ನ ಸುಮನ || ೩ ||

ಅಕ್ಕ ಮೆಚ್ಚಿದ ಗಂಡ, ಅಮ್ಮಗೊಪ್ಪಿದ ಅಳಿಯ,
ಅಪ್ಪನಿಗು ಬಲು ಮೆಚ್ಚು ನನ್ನ ಬಾವ ||
ನನ್ನ ಮನದಲು ಒಂದು ಸವಿಯಾದ ಮೆಚ್ಚಿಗೆಯು
ತಪ್ಪೇನು ? ಎನುತಲಿದೆ ನನ್ನ ಭಾವ ||  ೪ ||

ಅಕ್ಕ ಬಾವನ ನೋಡಿ ಮನವಿಂದು ಅರಳುತಿದೆ
ಮಲ್ಲಿಗೆಯ ಹೂವಂತೆ ಗಂಧ ಬೀರಿ ||
ಗುಪ್ತಗಾಮಿನಿಯಾಗಿ ಪ್ರೇಮರಸ ಹರಿಯುತಿದೆ
ಮನದಲ್ಲಿ ಹೊಸಭಾವ ಕಾವನೇರಿ || ೫ ||

ಬಾವ ನೋಡಿಹರಂತೆ ನನಗಾಗಿ ಗಂಡೊಂದ
ಸುಳ್ಳು ನುಡಿಯರು ಎಂದು ನನಗೆ ಗೊತ್ತು ||
ಆ ಹುಡುಗನೂ ಕೂಡ ಬಾವನನು ಹೋಲುವನೆ ?
ಎಂದು ಮನ ಕೇಳಿಹುದು ಮತ್ತು ಮತ್ತು || ೬ ||

- ಸುರೇಖಾ ಭೀಮಗುಳಿ
13/06/2016
ಚಿತ್ರ : ಅಂತರ್ಜಾಲ

Friday, June 3, 2016

" ಕವನಾ ಬೇರೆ ಬೇರೆ ತರಹಾ... "

ಕೆಲವು ಕವಿಗಳ ಕವನ ಕೊಳಗತಪ್ಪಲೆಯಂತೆ
ಮೇಲಿಂದ ಕೆಳವರೆಗೆ ಒಂದೆ ಮಾಟ ||
ಅಂಕುಡೊಂಕುಗಳಿಲ್ಲ ಲಾಲಿತ್ಯವಿನಿತಿಲ್ಲ
ಕೊನೆಯ ಅಕ್ಷರ ಮಾತ್ರ ಒಂದೆ ನೋಟ || ೧ ||

ಇನ್ನು ಕೆಲವರ ಪದ್ಯ ಗದ್ಯಗಳ ಹರಿದಂತೆ
ರಾಗ-ಪ್ರಾಸದ ಇನಿತು ಸ್ಪರ್ಶವಿಲ್ಲ ||
ಏನು ಹೇಳಲು ಇವರು ಹೊರಟಿಹರು ಎಂಬುದನು
ಅರಿಯದೆಲೆ ನಾ ಸೋತು ಹೋದೆನಲ್ಲ || ೨ ||

ಇನ್ನು ಕೆಲವರ ಕವಿತೆ ನಾಲ್ಕಾರು ಪದಕುಸುಮ
ಚುಟುಕು-ಗುಟುಕುಗಳೆಂದು ಇವರ ಸೊಲ್ಲು ||
ಬಾಯ್ವರೆಗೆ ಬಂದದ್ದು ಉದರ ತಲಪುವುದಿಲ್ಲ
ಅಷ್ಟರಲಿ ಆ ಕವನ ಮುಗಿದು ಹೋಯ್ತಲ್ಲ || ೩ ||

ಮತ್ತೆ ಕೆಲವರ ಕಾವ್ಯ ಕಬ್ಬಿಣದ ಕಡಲೆಗಳು
ಅರಗಿಸಲು ಸಾಧ್ಯವೇ ಪಾಮರರಿಗೆ ? ||
ಮಿತಿಯ ಜ್ಞಾನವ ಪಡೆದ ನನ್ನಂಥ ಕವಿ(ಪಿ)ಗಳಿಗೆ
ಮೆದುಳಿಗೆಟಕುವುದಿಲ್ಲ ಇವರ ಗುಳಿಗೆ || ೪ ||

ಕವನವೆಂಬುದು ನಮ್ಮ ಮುದ್ದು ಹೆಣ್ಮಗಳಂತೆ
ಬೇಕೆನಿಸದೇ ಕೊಂಚ ಒನಪು ಒಯ್ಯಾರ ? ||
ಜಡೆಹೆಣೆದು ಹೂಮುಡಿಸಿ ಲಂಗ ದಾವಣಿ ತೊಡಿಸಿ
ದೃಷ್ಟಿ ತೆರೆದರೆ ಆಯ್ತು ಅವಳ ಸಿಂಗಾರ || ೫ ||

- ಸುರೇಖಾ ಭೀಮಗುಳಿ
03/06/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, June 1, 2016

" ಇಲ್ಲಿ ಮಳೆಯಾಗಿದೆ ಇಂದು...."

ಗುಡುಗುಡನೆ ಗುಡುಗುಡನೆ ಬಾನು ಗುಡುಗುತ್ತಿಹುದು
ಆರ್ಭಟವು ಕೇಳುತಿದೆ ಬಾನ ಬಯಲಿಂದ ||
ಯಾರೆಲ್ಲರಿಗೆ ಬೇಕು ವರ್ಷ ಕಾಲದ ಸೊಬಗು
ಬನ್ನಿರೈ ನಮ್ಮನೆಗೆ ನಿಮ್ಮ ಊರಿಂದ || ೧ ||

ಪಳಪಳನೆ ಪಳಪಳನೆ ಬೆಳಕೊಂದು ಮಿಂಚುತಿದೆ
ಕಣ್ಣು ಕೋರೈಸಿಹುದು ಬಲು ಸೊಗಸಿನಿಂದ ||
ಯಾರೆಲ್ಲರಿಗೆ ಬೇಕು ವರ್ಷಕಾಲದ ಚಿತ್ರ
ಅರ್ಜಿಯನು ಸಲ್ಲಿಸಿರಿ ನಿಮ್ಮ ಕಡೆಯಿಂದ || ೨ ||

ರಪರಪನೆ ರಪರಪನೆ ಜಲಧಾರೆ ಸುರಿಯುತಿದೆ
ಆಗಸದ ಒಡೆಯನಾ ಹಸ್ತದಿಂದ ||
ಯಾರೆಲ್ಲರಿಗೆ ಬೇಕು ವರ್ಷರಾಯನ ಕರುಣೆ
ನಮಿಸ ಬನ್ನಿರಿ ಹಾಗೆ ಭಕ್ತಿಯಿಂದ || ೩ ||

- ಸುರೇಖಾ ಭೀಮಗುಳಿ
01/06/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, May 30, 2016

" ಕಳ್ಳನಿಗೂ ಒಂದು ಪದ್ಯ ! ".....

ಕಟ್ಟಿ ಕುಳಿತಿಹೆವಿಂದು ನೆಮ್ಮದಿಯ ಸೂರೊಂದ
ಬೆಲೆಕಟ್ಟಲಾದೀತೇ ಬೆವರ ಹನಿಗೆ ||
ಕಳ್ಳಕಾಕರ ಭಯದಿ ಮನವಿಂದು ನಲುಗಿರಲು
ಸುತ್ತ ಕಬ್ಬಿಣ ಜೈಲು ನಮ್ಮ ಮನೆಗೆ || ೧ ||

ಕಳ್ಳರೋ ನೂರಾರು ಕಳ್ಳತನ ಹಲವಾರು
ದಿನದಿನಕೆ ಹೊಸಮಾರ್ಗ ಕಲಿವರವರು ||
ಕಂಡದ್ದ ಕದಿಯುವರು ಕನ್ನವಿಟ್ಟೆಲ್ಲವನು
ಬಲಿಪಶುಗಳಾಗುವೆವು ಅವರ ಎದುರು || ೨ ||

ಕಷ್ಟಾರ್ಜಿತವು ನಮದೆ ಇಷ್ಟದಾ ಮನೆ ನಮದೆ
ನಮ್ಮಿಚ್ಛೆಯಂತೆ ನಾವ್ ಇರಬಾರದೆ ? ||
ಕಳ್ಳಕಾಕರ ದೃಷ್ಟಿ ಬೀಳದೇ ಇರುವಂತೆ
ರಕ್ಷಿಸೋ ನರಹರಿಯೆ ನಮ್ಮ ಬಿಡದೆ || ೩ ||

ಕಳ್ಳಿರಿಗು ಬುದ್ಧಿಕೊಡು ಕದಿಯದೇ ಇರುವಂತೆ
ಆತನೂ ಹೆಮ್ಮೆಯಲಿ ದುಡಿದುಣ್ಣಲಿ ||
ಶ್ರೀಮಂತ ಹಂಚುತಲಿ ತನ್ನ ಸಿರಿಯಲಿ ಸ್ವಲ್ಪ
ದಾನಧರ್ಮವ ಮಾಡಿ ಸುಖಿಗೊಳ್ಳಲಿ || ೪ ||

- ಸುರೇಖಾ ಭೀಮಗುಳಿ
30/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, May 24, 2016

ನಮ್ಮ ಮನೆ ’ವಿವೇಕ’ (24/05/2001 ನಮ್ಮ ಗೃಹಪ್ರವೇಶವಾದ ದಿನ)

ನಮ್ಮ ಮುದ್ದಿನ ಗೃಹಕೆ ಹದಿನೈದು ತುಂಬಿಹುದು
ಎಂಥ ತೃಪ್ತಿಯ ಭಾವ ನಮ್ಮ ಮನದಿ ||
ಹದಿನೈದು ವರ್ಷದಲಿ ಏರಿಳಿತಗಳಿದ್ದರೂ
ಕೊಟ್ಟಿಹುದು ನೆಮ್ಮದಿಯ ಅಂಥ ಕ್ಷಣದಿ || ೧ ||

ನನಗೊಂದು ಸ್ಥಾನವನು ಹುಟ್ಟೂರು ಕೊಡಲಿಲ್ಲ
ಜನ್ಮ ಕೊಟ್ಟಿತು ಜೊತೆಗೆ ನೆನಪು ನೂರು ||
ಕೊಟ್ಟ ಮನೆ ಎನ್ನಿಸಿತು ನನ್ನ ಬಾವನ ಮನೆಯು
ಆ ದೇವ ಒದಗಿಸಿದ ಹೊಸತು ಸೂರು || ೨ ||

ಹಲಸು-ಹೊಂಗೆಯ ಮರವು ಸೊಂಪಾಗಿ ತೂಗಿಹುದು
ನೋಟವೂ ಹಸಿರಸಿರು ಶುದ್ಧ ಗಾಳಿ ||
ಮನೆಯ ಮೇಲಿನ ನೆತ್ತಿ ತಂಪಾಗಿ ಕಾದಿಹುದು
ಹಿತಮಿತದ ಪರಿಸರವು ಕಾದಿಹಳು ಕಾಳಿ || ೩ ||

ನಮ್ಮ ಪ್ರೀತಿಯ ಗೃಹಕೆ ನಾಮಕರಣವೆ ಹಾಗೆ
’ವಿವೇಕ’ ಎಂಬ ಹೆಸರು ನಮ್ಮ ಮನೆಗೆ ||
ವಿವೇಕವಿದ್ದವರಿಗೆ ಎಂದೆಂದು ಸ್ವಾಗತವು
ಸ್ನೇಹಹಸ್ತವು ನಮದು ನಿಮ್ಮ ಕಡೆಗೆ || ೪ ||

- ಸುರೇಖಾ ಭೀಮಗುಳಿ
24/05/2016
ಚಿತ್ರ : ’ವಿವೇಕ’ ಮನೆ
ಛಾಯಾಗ್ರಹಣ : ಸುಧನ್ವ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Sunday, May 22, 2016

" ಶತಕ ಸಂಭ್ರಮ "

ಹಾಗು ಹೀಗೂ ನಾನು ಶತಕ ಬಾರಿಸಿ ಬಿಟ್ಟೆ
ಇಂದಿನದು ನನ್ನಯಾ ನೂರನೆಯ ಕವನ ||
ಒಂದಿಷ್ಟು ಜೊಳ್ಳುಗಳು ಮತ್ತಿಷ್ಟು ಕಾಳುಗಳು
ಆಯ್ದುಕೊಳ್ಳಿರಿ ಕಾಳು ನಿಮಗೆ ನಮನ || ೧ ||

ಮನದಲುಕ್ಕಿದ ಭಾವ ಹಾಡೆಂದು ನಾ ಭ್ರಮಿಸಿ
ಒಂದರಾ ಹಿಂದೊಂದು ದಾಖಲಿಸಿದೆ ||
ಪ್ರೋತ್ಸಾಹವನು ಕೊಡುತ ನನ ಬೆನ್ನ ತಟ್ಟಿದಿರಿ
ಕವಯಿತ್ರಿ ನಾನೆಂದು ಸಂಭ್ರಮಿಸಿದೆ || ೨ ||

ಮಾತ್ರೆ ಛಂದಸ್ಸುಗಳ ಪಾಠ ಕೇಳಿದೆ ನಾನು
ಕಲಿಸಿಕೊಟ್ಟರು ನನ್ನ ಮಾರ್ಗದರ್ಶಿಗಳು ||
ಎಷ್ಟು ಕಲಿತೆನೊ ಏನೊ ? ರಕ್ತಗತವೆಷ್ಟಾಯ್ತೋ ?
ಕಾವ್ಯ ಕನ್ನಿಕೆ ನನ್ನ ಮನಕೊಲಿದಳು || ೩ ||

ಎಷ್ಟು ಸಲ ಎಡವಿದೆನೊ ? ಮಕಾಡೆ ಮಲಗಿದೆನೋ ?
ಮೃದುವಾಗಿ ಸಲಹಿದಿರಿ ಜೊತೆಯ ಬಿಡದೆ ||
ಆವರಿಸಿಕೊಂಡಿಹುದು ಮಧುರ ಭಾವನೆಯೊಂದು
ತೆರೆದಿರುವೆ ಭಾವಗಳ ನಿಮ್ಮ ಮುಂದೆ ||| ೪ ||

- ಸುರೇಖಾ ಭೀಮಗುಳಿ
23/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, May 18, 2016

" ನನಗೆ ಇಷ್ಟ "..... ( 99 ನಾಟ್ ಔಟ್....)

ಕಾದ ಭೂರಮೆ ಮೇಲೆ ವರುಣ ಸಿಂಚನ ಗೈಯೆ
ಬರುವ ಮಣ್ಣಿನ ಘಮಲು ನನಗೆ ಇಷ್ಟ ||
ಭೂತಾಯ ಮಡಿಲಲ್ಲಿ ಹಸಿರು ಹುಲ್ಲಿನ ಮೇಲೆ
ನೀರಬಿಂದುವಿನಾಟ ನನಗೆ ಇಷ್ಟ || ೧ ||

ಕಾರ್ಮೋಡ ಮುಸುಕುತ್ತ ವರ್ಷಧಾರೆಯು ಸುರಿಯೆ
ಗುಡುಗು ಮಿಂಚಿನ ಸಮಯ ನನಗೆ ಇಷ್ಟ ||
ಭಾರಿ ಬೆಟ್ಟವನೇರಿ ಪ್ರಕೃತಿಯ ಜೊತೆಸೇರಿ
ಗಡಸು ಗಾಳಿಯ ಬೀಸು ನನಗೆ ಇಷ್ಟ || ೨ ||

ಹಳೆ ನೆನಪ ಕೆದಕುತ್ತ ಲಘು ದಾಟಿ ಬೆರೆಸುತ್ತ
ಕಥೆಯನ್ನು ಹಂಚುವುದು ನನಗೆ ಇಷ್ಟ ||
ಭಾವಲೋಕದಿ ಬೆರೆತು ಭವದ ಕಷ್ಟವ ಮರೆತು
ಹೊಸ ಕವನ ಹೊಸೆಯುವುದು ನನಗೆ ಇಷ್ಟ || ೩ ||

ಇನ್ನಷ್ಟು ಮತ್ತಷ್ಟು ಬರೆಯುತ್ತ ಸಾಗಿದರೆ
ಮುಗಿವ ಲಕ್ಷಣ ಕಾಣೆ ನನ್ನ ಇಷ್ಟ ||
ನನ್ನ ವಿಷಯವನಿಲ್ಲಿ ನಾನು ನಿಲ್ಲಿಸಿ ಬಿಡುವೆ
ಹೇಳಿರೈ ನೀವೀಗ ನಿಮ್ಮ ಇಷ್ಟ || ೪ ||

- ಸುರೇಖಾ ಭೀಮಗುಳಿ
18/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, May 13, 2016

" ಪದ್ಯ ಬಂಡಿ "

ಕವನ ಕಟ್ಟುವುದಕ್ಕೆ ಕಾರಣವೆ ಬೇಕಿಲ್ಲ
ರೇಖ- ಮೋಹಿನಿ ಎಂಬ ನಾರಿಯರಿಗೆ ||
ಸುಮ್ಮನೇ ಕುಳಿತಿರಲು ಮನಸು ಬಂದಿತು ಎಂದು
ಪದ್ಯ ಹೊಸೆವೆವು ನಾವು ಗೊತ್ತೆ ನಿಮಗೆ ? || ೧ ||

ಸಮಯ ಜಾರದ ಹೊತ್ತು- ಮನವು ಅರಳಿದ ಹೊತ್ತು
"ಪದ್ಯ ಕಟ್ಟೋಣವೇ ?" ಎಂಬ ಕರೆಯು ||
ಅವರಲ್ಲಿ ನಾನಿಲ್ಲಿ ಪದ್ಯ ಕಟ್ಟುವ ಆಟ
ಎಂಥ ಸೊಗಸೋ ಅದು ಪದ್ಯ ಸುರೆಯು || ೨ ||

ಯಾವುದೋ ಚಿತ್ರವನು ಕಳಹುತ್ತ ಕೇಳುವರು
ಪದ್ಯ ಕಟ್ಟೋಣವೇ ಇದನು ಕುರಿತು ? ||
ಮಳೆ ಬರುವ ಹಾಗಿದೆ ಅದರ ಕುರಿತೇ ಬರೆವ
ಆಗದೇ ? ಎನ್ನುವೆನು ನಾನು ಅರಿತು || ೩ ||

ಚಿತ್ರವಾದರೆ ಏನು ? ಭಾವವಾದರೆ ಏನು ?
ಕವನ ಕಟ್ಟುವುದಕ್ಕೆ ಯಾವುದೇನು ? ||
ಅವರೊಂದು-ನಾನೊಂದು ಪದ್ಯ ಬರೆದರೆ ಆಗ
ಪದ್ಯ ಬಂಡಿಯ ಚಕ್ರ ಅವರು - ನಾನು || ೪ ||

ನಾವು ಕಟ್ಟಿದ ಪದ್ಯ ಹೊಸೆದಿರುವ ಹೊಸ ಕವನ
ಎಲ್ಲದಕು ವೇದಿಕೆಯು ಫೇಸು ಬುಕ್ಕು ||
ವೇದಿಕೆಯ ಸಲ್ಲಾಪ ನಿಮ್ಮನಾದರಿಸಿಹುದು
ಇಷ್ಟವಾದರೆ ಒತ್ತಿ ಒಂದು ಲೈಕು || ೫ ||

- ಸುರೇಖಾ ಭೀಮಗುಳಿ
13/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, May 11, 2016

" ಕವನ ಕಟ್ಟುವುದು ಬಲು ಸುಲಭ ! "

ಕವನ ಕಟ್ಟುವ ಕೆಲಸ ಶ್ರಮವ ಬೇಡುವುದಿಲ್ಲ  
ಭಾವ ಒಂದಿಷ್ಟಂತು ಬೇಕೆ ಬೇಕು ||
ಪದವ ಹೆಣೆಯುವ ಜಾಣ್ಮೆ ಮತ್ತಿಷ್ಟು ಆಸಕ್ತಿ
ತುಸು ಪ್ರಾಸ ಹೊಂದಿಸಿದರಷ್ಟೆ ಸಾಕು  || ೧ ||
        
ಮೊಗ್ಗೊಂದು ಹೂವಾಗಿ ವಿಕಸಿಸುವ ಅಂದದಲಿ
ಕವನ ಹೊರ ಚಿಮ್ಮುವವು ಹಿಡಿದು ಪಟ್ಟು ||
ಹೂವಿಂದ ಹೂಗಂಧ ಪಸರಿಸುವ ರೀತಿಯಲಿ
ಭಾವಗಳು ಹೊಮ್ಮುವುದೆ ಕವಿತೆ ಹುಟ್ಟು || ೨ ||

ಕವನ ಹುಟ್ಟುವುದೆನಗೆ ನವಿರಾದ ಭಾವದಲಿ
ಒಂದರಾ ಹಿಂದೊಂದು ಸಾಲು ಸಾಲು ||
ನನ್ನ ಬರೆ ನನ್ನ ಬರೆ ಎಂದು ಕಾಡುವವೆನ್ನ
ಬಿಟ್ಟುಬಿಡದೆಲೆ ಹಿಡಿದು ನನ್ನ ಕಾಲು || ೩ ||

ಪ್ರಾಸ ಹೊಂದಿದ ಪದ್ಯ ಹಿತಮಿತದ ಸೋಮರಸ
ಹಾಡ ತೊಡಗುವುದಲ್ಲ ಮುದದಿ ಮನಸು ||
ಒಂದು ಚಂದದ ರಾಗ ಹೊಂದಿಕೊಂಡರೆ ಆಗ
ಸಾರ್ಥಕ್ಯ ಹೊಂದುವುದು ಕವನ ಕನಸು || ೪ ||

- ಸುರೇಖಾ ಭೀಮಗುಳಿ
12/05/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ಬಂದಿಹನು ಮಳೆರಾಯ ...."

ಬಂದಿಹನು ಮಳೆರಾಯ ನಮ್ಮ ಕರೆಯನು ಕೇಳಿ
ಎತ್ತಿ ಆರತಿಯನ್ನು ನಮ್ವರುಣಗೆ ||
ಒಂದಿಷ್ಟು ದಿನವಿದ್ದು ಆತಿಥ್ಯ ಸ್ವೀಕರಿಸು
ಎಂದು ಒತ್ತಾಯಿಸಿರಿ ನನ್ನೊಟ್ಟಿಗೆ || ೧ ||


ಹನಿಯುತಿದೆ ಮಳೆ ಹೊರಗೆ ಪಿರಿಪಿರಿಯ ಶಬ್ದದಲಿ
ಗುಡುಗುಡುನೆ ಗುಡುಗುತಿದೆ ಬಾನ ಬಯಲು ||
ಶಬ್ದವನು ಕೇಳುತ್ತ ಮಳೆಯನ್ನು ನೋಡುತ್ತ
ಕವನವನು ಕಟ್ಟುವುದು ಎಂಥ ಅಮಲು || ೨ || 


ಮಲೆನಾಡ ಮುಂಗಾರು ಹೇಗಿತ್ತು ಗೊತ್ತೇನು ?
ಅಡಿಕೆ ಮರಗಳು ಹಾಗೆ ತೂಗುತಿತ್ತಲ್ಲ ||
ಬೆಂಗಳೂರಲಿ ಅದನು ಕಲ್ಪಿಸಲು ಆದೀತೆ ?
ಮನವಿಂದು ಹುಟ್ಟೂರ ನೆನೆಯುತಿದೆಯಲ್ಲ || ೩ ||


ಮಳೆಬಂದ ಸಂಭ್ರಮದಿ ನಿತ್ಯವಿಧಿ ತಪ್ಪೋಯ್ತು
ಸಂಜೆ ನಡಿಗೆಗೆ ಇಂದು ಬಿತ್ತು ರಜೆಯು ||
ಮನೆಹೊರಗೆ ಕುಳಿತು ನಾ ಮಳೆಯನಾಸ್ವಾದಿಸುವೆ
ಯಾರಿಗೇ ಬೇಕು ಆ ನಡಿಗೆ ಸಜೆಯು || ೪ ||


- ಸುರೇಖಾ ಭೀಮಗುಳಿ
06/05/2016
ಚಿತ್ರ : ಅಂತರ್ಜಾಲ


ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli

Tuesday, April 12, 2016

" ವಿಪಶ್ಯನ ಧ್ಯಾನದ ಗುಂಗಿನಲ್ಲಿ "

ಬುದ್ಧನ ಧ್ಯಾನ ಕ್ರಮವಾದ ವಿಪಶ್ಯನ ಧ್ಯಾನ ತರಗತಿಗಾಗಿ ಬೆಂಗಳೂರು ಉತ್ತರದಲ್ಲಿರುವ ದಾಸನಪುರ ಹೋಬಳಿಯ ಮಾಕಳಿ ಎಂಬ ಊರಿನ ಧ್ಯಾನಕೇಂದ್ರಕ್ಕೆ ಹೊರಟು ನಿಂತಿದ್ದೇನೆ. ಹತ್ತು ದಿನದ ಹಠಮೌನ, ಮಿತ ಆಹಾರ, ಶಿಸ್ತಿನ ದಿನಚರಿ ... ಹಲವು ಅನುಭವಗಳಿಗೆ ತೆರೆದುಕೊಳ್ಳುವುದಕ್ಕೋಸ್ಕರ................ ( 13/04/2016 ರ ಮಧ್ಯಾನ್ಹದಿಂದ 24/04/2016 ರ ಬೆಳಗಿನವರೆಗೆ  )

ಹೊರಟಿರುವೆ ನಾ ನಾಳೆ ವಿಪಶ್ಯನ ಧ್ಯಾನಕ್ಕೆ
ಅನುಭವದ ಹೊಸ ಮಜಲ ಅರಿಯುವುದಕೆ ||
ಪೆನ್ನು ಪುಸ್ತಕವಿಲ್ಲ ಓದಿ ಬರೆವಂತಿಲ್ಲ
ದಶದಿನದ ತಪವನ್ನು ಗೈಯ್ಯುವುದಕೆ || ೧ ||

ದಿನಕೊಂದೆ ಬಿಸಿಊಟ ಮತ್ತೆ ಮಿತ ಉಪಹಾರ
ಹೇಗೆ ಸಹಿಸಲಿ ನಾನು ಹಸಿವೆಯನ್ನು ? ||
ಜೀವನದಲೊಮ್ಮೆಯೂ ಉಪವಾಸ ಮಾಡಿಲ್ಲ
ಹೊರಳಾಡಿ ಕಳೆಯಲೇ ರಾತ್ರಿಯನ್ನು ? || ೨ ||

ದಶದಿನದ ಮೌನದಲಿ ಮಾತು ಮರೆಯುವುದಂತೆ
ನನ್ನಿಂದ ಸಾಧ್ಯವೇ ಹಠದ ಮೌನ ? ||
ಅಸಾಧ್ಯ ಯಾವುದಿದೆ ? ಪರಿಕಿಸಿಯೆ ಬಿಡುವೆ ನಾ
ಹೊಸತಕ್ಕೆ ಒಡ್ಡುವೆನು ನನ್ನನ್ನು ನ || ೩ ||

ವಾಟ್ಸಪ್ಪು ಫೇಸ್ಬುಕ್ಕು ಚರವಾಣಿ ಸ್ಥಿರವಾಣಿ
ಎಲ್ಲ ಬಂಧನದಿಂದ ದೂರ ದೂರ ||
ಹೇಗೆ ಕಳೆಯಿತು ನನ್ನ ದಶದಿನದ ದಿನಚರಿಯು
ಹಂಚುವೆನು ನಿಮ್ಮೊಡನೆ ಅದರ ಸಾರ || ೪ ||

- ಸುರೇಖಾ ಭೀಮಗುಳಿ
12/04/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, April 8, 2016

" ಯುಗಾದಿ ಶುಭಾಶಯ "

(ಇಂದು ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ನಮ್ಮ ಬಡಾವಣೆಯಲ್ಲಿ ಒಂದು ಚಂದದ ಮಳೆ... ಹಾಗಾಗಿ ಇಂದಿನ ಯುಗಾದಿ ಕವನದಲ್ಲಿ ಮಳೆಗೂ ಒಂದು ಸ್ಥಾನ ! )

ಬೆಳಗಿನ ಜಾವದ ತಂಪನೆ ಮಳೆಯೂ
ವರುಣನ ಸ್ವಾಗತ ಯುಗಾದಿಗೆ ||
ದುರ್ಮುಖ ನಾಮದ ಸಂವತ್ಸರಕೇ
ಶುಭಾಶಯವಂತೆ ಸರ್ವರಿಗೆ || ೧ ||

ದಿನದಿಂದಿನಕೇ ಸೆಖೆ ಏರಿಹುದೂ
ದಿನಕರ ಉರಿದಿಹ ಬಾನಲ್ಲಿ ||
ವರುಣಾಗಮನಕೆ ಕಾಯುತಲಿದ್ದೆವು
ಪ್ರಾರ್ಥನೆ ಸಲ್ಲಿಸಿ ಮನದಲ್ಲಿ || ೨ ||

ತಣ್ಣತಣ್ಣಗಿನ ಹನಿಯುದುರಿದವೋ
ಇಳೆಯಾಯಸವದು ಪರಿಹಾರ ||
ಮಣ್ಣಿನ ವಾಸನೆ ಸುತ್ತಲು ಹರಡಲು
ಪರಿಸರ ಘಮಘಮ ಮಾದಕರ || ೩ ||

ಹೊಸವರ್ಷದಲೀ ಹರುಷವು ಉಕ್ಕಲಿ
ಶುಭವಾಗಲಿ ನಿಮಗೆಂದೆಂದು ||
ಕಹಿ ಕಾಡದಲೇ ಸಿಹಿ-ಸಿರಿಯುಕ್ಕಲಿ
ನನ್ನಯ ಆಶಯ ನಿಮಗಿಂದು || ೪ ||

- ಸುರೇಖಾ ಭೀಮಗುಳಿ
08/04/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, March 29, 2016

" ಮನದ ಮಾಲಿ "

ಹಿರಿಯತನವನು ನಾವು ಒಪ್ಪಿಕೊಳದಿರಬೇಕೆ ?
ಯೌವ್ವನದ ಕಳೆಯಲ್ಲಿ ಮೆರೆಯವೇಕೆ ? ||
ಕೃತಕತೆಯ ಸೋಗಿನಲಿ ಕಳೆದು ಹೋಗಲೆ ಬೇಕೆ ?
ದೇವರಿಟ್ಟಂತೆ ನಾವ್ ಇದ್ದು ಬಿಡಬೇಕೆ ? || ೧ ||

ಕಪಟ ನಟನೆಯು ಏಕೆ ? ಹುಂಬತನ ನಮಗೇಕೆ ?
ಇದ್ದರಾಗದೆ ನಾವು ಇದ್ದ ಹಾಗೆ ? ||
ಶುಭಗಿ ನಾನೇ ಎಂಬ ಮುಖವಾಡ ಕಿತ್ತೊಗೆದು
ಇದ್ದು ಬಿಡುವೆನು ನಾನು ನನ್ನ ಹಾಗೆ || ೨ ||

ಬಿಡಿಸಿ ನಾ ಇಟ್ಟಿರುವೆ ಮನದ ಪದರುಗಳನ್ನು
ಬಿಡುಬೀಸು ಜೀವನವು ಇನ್ನು ಮುಂದೆ ||
ಬದುಕಿದ್ದು ಬಿಡಲಿನ್ನು ತೆರೆದ ಪುಸ್ತಕದಂತೆ
ಕದ್ದು ಮುಚ್ಚಿದ ಕಥೆಯು ಬೇಡ ತಂದೆ || ೩ ||

ಜಗದೆದುರು ತೆರೆದಿರುವೆ ಕಹಿಸಿಹಿಗಳೆಲ್ಲವನು
ನಾನು ಈ ಕ್ಷಣದಲ್ಲಿ ಖಾಲಿ ಖಾಲಿ ||
ಹೃದಯ ಸಿಂಹಾಸನದಲ್ಲಿ ಪವಡಿಸಿಹ ಪರಮಾತ್ಮ
ಅವನೆ ಇನ್ಮುಂದೆ ಈ ಮನದ ಮಾಲಿ || ೪ ||

- ಸುರೇಖಾ ಭೀಮಗುಳಿ
28/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, March 23, 2016

" ಇನ್ನಷ್ಟು ಒಂದು ನೆನಪುಗಳು.... "

ಉದ್ದ ಹಗ್ಗವ ಕಟ್ಟಿ ಜೋಕಾಲೆ ಜೀಕುತಿರೆ
ಮಣೆಜಾರಿ ಬಿದ್ದಂಥ ಒಂದು ನೆನಪು ||
ಬಾಗಿಲಿನ ಸಂಧಿಯಲಿ ಕೈ ಬೆರಳು ಸಿಕ್ಕಿದ್ದು
ಆ ನೋವನುಂಡಿದ್ದು ಒಂದು ನೆನಪು || ೧ ||

ಸಂಪಿಗೆಯ ಮರ ಹತ್ತಿ ಹೂವು ಕೊಯ್ಯಲು ಹೋಗಿ
ನೇರ ಕೆಳಗುರುಳಿದ್ದ ಒಂದು ನೆನಪು ||
ಹಪ್ಪಳವ ಸುಡ ಹೊರಟು ಕೈಸುಟ್ಟುಕೊಂಡಂತೆ
ಕೈಬೊಬ್ಬೆ ಬಂದಂತೆ ಒಂದು ನೆನಪು || ೨ ||

ಗಡಿಬಿಡಿಯ ಓಟದಲಿ ಮುಗ್ಗರಿಸಿ ಬಿದ್ದಂಥೆ
ಮಂಡಿ ತರಚಿದ ಗಾಯ ಒಂದು ನೆನಪು ||
ಪಾದರಕ್ಷೆಯೆ ಇರದ ಪುಟ್ಟ ಪಾದದ ತುದಿಗೆ
ಕಲ್ಲು ಎಡವಿದ ನೋವು ಒಂದು ನೆನಪು || ೩ ||

ಪಿರಿಪಿರಿಯ ಮಳೆಯಲ್ಲಿ ಜಾರುವಂಗಳದಲ್ಲಿ
ಕಾಲು ಜಾರುತ ಬಿದ್ದ ಒಂದು ನೆನಪು ||
ಬಿದ್ದದ್ದೆ ಹೆಳೆಮಾಡಿ ಕೆಸರಾಟವಾಡುತ್ತ
ಜಗವನ್ನು ಮರೆತದ್ದು ಒಂದು ನೆನಪು || ೪ ||

ಸಣ್ಣ ಅಂಚಲಿ ಓಡಿ ಗದ್ದೆ ಕೆಸರಲಿ ಬಿದ್ದು
ಬಟ್ಟೆ ಕೊಳೆಯಾದಂತೆ ಒಂದು ನೆನಪು ||
ಹಸಿಹುಲ್ಲು ಕೊಯ್ಯುತಲಿ ಕೈಗಂದು ಚುಚ್ಚಿದ್ದು
ನಾಚಿಕೆಯ ಮುಳ್ಳೆಂದು ಒಂದು ನೆನಪು || ೫ ||

ಹಿಪ್ಪುನೇರಳೆ ಹಣ್ಣು ಮಿತಿಯ ಮೀರುತ ತಿಂದು
ನೀಲ್ನೀಲಿ ಕಕ್ಕಿದ್ದು ಒಂದು ನೆನಪು ||
ತಾರೆಕಾಯಿಯ ತಿಂದು ಪಿತ್ತ ನೆತ್ತಿಗೆ ಏರಿ
ತಲೆತಿರುಗಿ ಬಿದ್ದದ್ದು ಒಂದು ನೆನಪು || ೬ ||

ಅನುಭವದ ಪಾಡುಗಳು ಗೈದ ಪ್ರಮಾದಗಳು
ಅಷ್ಟಿಷ್ಟು ಅಲ್ಲೆಂದು ಒಂದು ನೆನಪು ||
ಬರೆದಷ್ಟು ಮುಗಿಯದೋ ನೆನಪಿನಂಗಳದಲ್ಲಿ
ಬೆಂಬತ್ತಿ ಕಾಡುತಿವೆ ’ಒಂದು ನೆನಪು’ || ೭ ||

- ಸುರೇಖಾ ಭೀಮಗುಳಿ
23/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, March 14, 2016

" ಒಂದು ನೆನಪು.... "

ಮಲೆನಾಡ ಚಪ್ಪರದಿ ಸಂಜೆ ಇಳಿ ಬಿಸಿಲಿನಲಿ
ವಿರಮಿಸಿದ ಸುಖಘಳಿಗೆ ಒಂದು ನೆನಪು ||
ಸೂರ್ಯಾಸ್ತ ವೇಳೆಯಲಿ ಕೈತುತ್ತ ಕೊಟ್ಟಂಥ
ಅಕ್ಕನನು ನೆನೆಸುತಿದೆ ಒಂದು ನೆನಪು || ೧ ||

ಬಾನಿನಂಗಳದಲ್ಲಿ ಪಕ್ಷಿ ಗುಂಪದು ಹಾರಿ
ಚಿತ್ರಿಸಿದ ಚಿತ್ತಾರ ಒಂದು ನೆನಪು ||
ಬಣ್ಣದೋಕುಳಿಯಲ್ಲಿ ಮಿಂದೆದ್ದ ಆಗಸದ
ಸವಿರಂಗ ನೆನೆಸಿಹುದು ಒಂದು ನೆನಪು || ೨ ||

ರಾತ್ರಿಯಾಕಾಶದಲಿ ಮಿನುಗುತಿಹ ತಾರೆಗಳ
ಎಣಿಸಲೆತ್ನಿಸಿದಂಥ ಒಂದು ನೆನಪು ||
ಅಡಿಕೆ ಮರಗಳ ತೋಟ ತಂಗಾಳಿಯಲಿ ತೂಗಿ
ಮನವ ಮುದಗೊಳಿಸಿದ್ದ ಒಂದು ನೆನಪು || ೩ ||

ಅಂಗಳದ ಕೊನೆಯಲ್ಲಿ ಪೇರಲೆಯ ಮರದಿಂದ
ದೊರೆಗಾಯಿ ಸವಿದಂಥ ಒಂದು ನೆನಪು ||
ಸೂರಗೆಯ ಹೂಗಂಧ ಹೊತ್ತು ತಂದಿರುತಿದ್ದ
ತಂಗಾಳಿ ಬೀಸಿನಲಿ ಒಂದು ನೆನಪು || ೪ ||

ಅಡಿಕೆ-ಬಾಳೇ-ಕಾಫಿ ತುಂಬಿ ತೂಗಿದ ತೋಟ
ಹಚ್ಚಹಸುರಿನ ನೋಟ ಒಂದು ನೆನಪು ||
ಗೋಧೂಳಿ ಸಮಯದಲಿ ಹಟ್ಟಿಯಲಿ ಕಟ್ಟಿದ್ದ
ಎಮ್ಮೆ ಅಮ್ಮನ ಕರೆದ ಒಂದು ನೆನಪು || ೫ ||

ಮಲ್ಲಿಗೆಯ ಗಿಡದಿಂದ ಮೊಗ್ಗ ಕೀಳುವ ಹೊತ್ತು
ದರೆಗೆ ಉರುಳಿಯೆ ಬಿದ್ದ ಒಂದು ನೆನಪು ||
ಬಚ್ಚಲಿನ ಕೊಳೆನೀರು ಕುಡಿದು ಹಸುರಾಗಿದ್ದ
ತೊಂಡೆ ಚಪ್ಪರವೆಂಬ ಒಂದು ನೆನಪು || ೬ ||

ನಿತ್ಯ ಪೂಜೆಗೆ ಒದಗಿ ಸತ್ಯ ಸೇವೆಯ ಗೈದ
ರತ್ನಗಂಧಿಗೆ ಗಿಡದ ಒಂದು ನೆನಪು ||
ಮನೆಯ ಅಂಗಳದಲ್ಲಿ ತಾನಾಗಿ ಅರಳಿದ್ದ
ಕಾಶಿತುಂಬೆಯ ಹೂವು ಒಂದು ನೆನಪು || ೭ ||

ಹಾಡ್ಯದಾ ಮಧ್ಯದಲಿ ಹೆಮ್ಮರದ ಬುಡದಲ್ಲಿ
ರಂಜದಾ ಹೂವಾಯ್ದ ಒಂದು ನೆನಪು ||
ಉದ್ದುದ್ದ ಮಾಲೆಯನು ಮಡಿಕೆ ಮಾಡುತ ಮುಡಿದು
ಹೆಮ್ಮೆ ಭಾವದಿ ಮೆರೆದ ಒಂದು ನೆನಪು || ೮ ||

ಮಧ್ಯಾಹ್ನ ಮಲ್ಲಿಗೆಯೊ ಗೋರಟೆಯ ಮೊಗ್ಗುಗಳೊ
ದಂಡೆ ಹೆಣೆಯುತ್ತಿದ್ದ ಒಂದು ನೆನಪು ||
ಕಾಡು ಗುಡ್ಡವ ಅಲೆದು ಬಗೆಬಗೆಯ ಹಣ್ಣುಗಳ
ಸವಿದಂತ ಬಾಲ್ಯದಾ ಒಂದು ನೆನಪು || ೯ ||

ಒಂದೊಂದೆ ಎನ್ನುತ್ತ ರಂಜ ಹೂವನು ಹೆಕ್ಕಿ
ಪೋಣಿಸಿಹ ಹೂಮಾಲೆ "ಒಂದು ನೆನಪು" ||
ಘಮಘಮವ ಸೂಸುತಲಿ ನಿಮ್ಮ ಮನವರಳಿತೇ ?
ಹಂಚಿಕೊಳ್ಳಿರಿ ನಿಮ್ಮ ಒಂದು ನೆನಪು || ೧೦ ||

- ಸುರೇಖಾ ಭೀಮಗುಳಿ
14/03/2016
ಚಿತ್ರ : Shankar Hebbar

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, March 1, 2016

" ಮುದ್ದು ಮಗಳ ಓಲೈಕೆ "

ಮುದ್ದು ಮಗಳನ್ನೊಮ್ಮೆ ಬಿಗಿದಪ್ಪಿ ಮುದ್ದಿಸುತ
ಮೃದುವಾಗಿ ಮೈದಡವಿ ಸಂತೈಸಿದೆ ||
ತಲೆಯ ನೇವರಿಸುತ್ತ ನೆತ್ತಿಯಾಘ್ರಾಣಿಸುತ
ಹೂಮುತ್ತ ಹಣೆಗೊತ್ತಿ ಓಲೈಸಿದೆ || ೧ ||

ಸ್ನೇಹಿತರ ಗುಂಪಿನಲ್ಲಿ ನಿನ್ನ ಬಗ್ಗೆಯೆ ಚರ್ಚೆ
ಶುಭವ ಹಾರೈಸಿಹರು ನೋಡು ಮಗಳೆ ||
ಸಣ್ಣ ವಿಷಯವನೆತ್ತಿ ಕೊರಗಿನೀ ಕರಗದಿರು
ಒಮ್ಮೆ ನೀ ನಕ್ಕುಬಿಡು ಬಿಟ್ಟು ರಗಳೆ || ೨ ||

ಹುಸಿಮುನಿಸ ತೋರದಲೆ ನಗುನಗುತ ಇದ್ದುಬಿಡು
ಹೂದೋಟದರಳಿರುವ ಹೂವಿನಂತೆ ||
ಹದಿನಾರ ಮೀರದಿರು ಯಕ್ಷಕನ್ಯೆಯರಂತೆ
ಹಾದಿಹೋಕರ ದೃಷ್ಟಿ ತಾಕದಂತೆ || ೩ ||

ನನ್ನ ಮುದ್ದಿನ ಮಗಳ ನಾನು ಮರೆಯುವುದುಂಟೆ
ನಿನಗೇತಕೀಬಗೆಯ ಅನುಮಾನ ಕಂದ ? ||
ಎಂಥ ಸೊಗಸಿದು ಮಗಳೆ ನಿನ್ನ ಸಹಚರ್ಯದಲಿ
ಮನವು ಅರಳಿಹುದಲ್ಲ ಅದುವು ನಿನ್ನಿಂದ ||

- ಸುರೇಖಾ ಭೀಮಗುಳಿ
02/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, February 29, 2016

" ಕಾವ್ಯಕನ್ನಿಕೆಯ ಕೋಪ "

ಕೋಪದಲಿ ಬೆಂದಿಹಳು ನನ್ನ ಮುದ್ದಿನ ಮಗಳು
ಕಾವ್ಯ ಕನ್ನಿಕೆಗಿಂದು ನೋವಾಗಿದೆ ||
ಬೇಸರದಿ ನೊಂದಿಹಳು ಮೃದು ಮನವು ಬಾಡಿಹುದು
ಮುತ್ತಿಟ್ಟು ಉಪಚರಿಸಬೇಕಾಗಿದೆ || ೧ ||

ಗದ್ಯದುಪಚಾರದಲಿ ನನ್ನ ಮೆರೆತಿಹಳಮ್ಮ
ಎಂಬ ಕೊರಗದು ನನ್ನ ಕಾವ್ಯಕನ್ನಿಕೆಗೆ ||
ನೋವುಂಡು ಗೊತ್ತಿಲ್ಲ ಸೂಕ್ಷ್ಮಮನ
ವಳೀಕೆ
ಬಿಕ್ಕುತ್ತ ಕುಳಿತಿಹಳು ಮಡಿಲಿನೊಳಗೆ || ೨ ||

ದಿನದಿನವು ಹೊಸಕಥೆಯ ಹೆಣೆಯುತ್ತ ಕುಳಿತಿರುವೆ
ದೂರುತಿರುವಳು ಮಗಳು ಮುನಿಸಿನಿಂದ ||
ಆಗಾಗ ಸಂತೈಸಿ ಮುದ್ದಿಸದೆ ಹೋದರೇ
ಸಹಿಸಲಾಗದು ನೋವು ಆಕೆಯಿಂದ || ೩ ||

ಏನು ಮಾಡಲಿ ಹೇಳಿ ? ಹೇಗೆ ಸಮಧಾನಿಸಲಿ ?
ಕಥೆಯ ಬರೆಯೆಂದವರು ನೀವಲ್ಲವೇ ? ||
ಮಗಳ ಸಂತ್ವನಕಿಂದು ಹೊಸ ವಿದ್ಯೆ ಹೇಳಿಕೊಡಿ
ನನ್ನ ಸ್ನೇಹಿತರೆಂದು ನೀವಿಲ್ಲವೇ ? || ೪ ||

- ಸುರೇಖಾ ಭೀಮಗುಳಿ
01/03/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, February 22, 2016

" ತಮ್ಮ ಬೇಕು ನನಗೆ ತಮ್ಮ ಬೇಕು...."

ತಮ್ಮ ಬೇಕು ನನಗೆ ತಮ್ಮ ಬೇಕು....
ನನ್ನ ಹಾಗೆ ಇರುವ ಒಬ್ಬ ತಮ್ಮ ಬೇಕು....|

ಆಡುವುದಕೆ ಹಾಡುವುದಕೆ
ಮತ್ತೆ ಲೂಟಿ ಮಾಡುವುದಕೆ
ಓದುವುದಕೆ ಬರೆಯುವುದಕೆ
ಕದ್ದು ತಂಟೆ ಮಾಡುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ನಾನು ಹೇಳಿದಂಗೆ ಕೇಳ್ವ ತಮ್ಮ ಬೇಕು....

ಉಣ್ಣುವುದಕೆ ತಿನ್ನುವುದಕೆ
ಕೂಡಿ ಜಗಳವಾಡುವುದಕೆ
ಊರು ಕೇರಿ ಸುತ್ತುವುದಕೆ
ಜೊತೆಗೆ ಸೈಕಲ್ ಹೊಡೆಯುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ಇದ್ದದನ್ನು ಹಂಚಿಕೊಳಲು ತಮ್ಮ ಬೇಕು....

ಮೋಜು ಮಸ್ತಿ ಮಾಡುವುದಕೆ
ನಗುವ ಜಗಕೆ ಹಂಚುವುದಕೆ
ಪ್ರೀತಿ ಸುಖದ ವಿನಿಮಯಕ್ಕೆ
ಮುದ್ದುಗರೆದು ಮಲಗುವುದಕೆ

ತಮ್ಮ ಬೇಕು ನನಗೆ ತಮ್ಮ ಬೇಕು....
ನೀನು ನನ್ನ ತಮ್ಮನೆಂಬ ಹೆಮ್ಮೆ ಬೇಕು....

- ಸುರೇಖಾ ಭೀಮಗುಳಿ
23/02/2016
ಚಿತ್ರ : 12 ವರ್ಷದ ಹಿಂದೆ ನಾನೇ ತೆಗೆದದ್ದು ...

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, January 28, 2016

" ಮುದ್ದು ಕಂದ "

" ಮುದ್ದು ಕಂದ "
-------------------
ನಿದ್ದೆಯ ಮಾಡಿಹ ಮುದ್ದಿನ ಕಂದನ
ಮುಖದಲ್ಲೇಕೋ ಮುಗ್ಧ ನಗು ||
ಕಾರಣವೇನೋ ? ಎನ್ನುವ ಯೋಚನೆ
ಏಕೆಂದರೆ ಅವ ನನ್ನ ಮಗು || ೧ ||

ಕನಸಲಿ ದೇವನ ಕಂಡನು ಪುಟ್ಟನು
ಎನ್ನುತಲಿಹಳೂ ಅವನಮ್ಮ ||
ದೇವರು ಪಾಠವ ಮಾಡುತಲಿಹರೋ ?
ಹೇಳಿಬಿಡು ನೀ ’ಹೌದಮ್ಮ’ || ೨ ||

ಮೋದದಿ ನಗುತಿಹ ಪುಟ್ಟನ ಮುಖವೂ
ಅರೆಕ್ಷಣದಲ್ಲಿ ಅಳುಮೋರೆ ||
ಯಾರೋ ನಿನ್ನನು ಹೆದರಿಸ ಬಂದರೆ ?
ಹೇಳಿಬಿಡೋ ನೀ ನನ್ನ ದೊರೆ || ೩ ||

ಪುಟ್ಟನೆ ಕಾಲ್ಗಳೊ ಮುದ್ದಿನ ಕೈಯ್ಯೋ
ಹಸಿಹಸಿ ಮೈಯ್ಯಾ ಹಸುಕೂಸು ||
ಕಲ್ಮಶವೆನ್ನುವ ಭಾವವೆ ಮೂಡದ
ಶುದ್ಧಾತ್ಮನ ನೆಲೆ ಹೂ ಮನಸು || ೪ ||

ರಾಮಚಂದಿರನೊ ಉಡುಪಿಯ ಕೃಷ್ಣನೊ
ಯಾರೈ ನೀನೂ ಹೇಳು ಮರಿ ||
ಮಧುಸೂದನನಾ ಪ್ರತಿರೂಪವು ನೀ
ನನ್ನಯ ಪಾಲಿಗೆ ನೀನೆ ಹರಿ || ೫ ||

- ಸುರೇಖಾ ಭೀಮಗುಳಿ
29/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ಓ ಮಗುವೇ...... "

" ಓ ಮಗುವೇ...... "
-------------------
ಓ ಮಗುವೆ ಓ ಮಗುವೆ ನನ್ನ ಮುದ್ದಿನ ಮಗುವೆ
ಬಂದೆಯಾ ನನ್ನೆಡೆಗೆ ನಾನು ಕರೆಯೆ ||
ಮಧುಪರ್ಕ ಹೂ ಹಣ್ಣು ಚಾಮರದ ತಂಗಾಳಿ
ಸ್ವಾಗತವು ಈ ಧರೆಗೆ ನನ್ನ ಸಿರಿಯೆ || ೧ ||


ಸಿರಿಯ ಸಂಪತ್ತುಗಳ ಮತ್ತಿಷ್ಟು ರತ್ನಗಳ
ಎಲ್ಲಿಂದ ಹೊಂದಿಸಲಿ ಮುದ್ದು ಮರಿಯೆ ? ||
ತುಂಬು ಪ್ರೀತಿಯ ಮುತ್ತು ನಾ ಕೊಡುವ ಸಿರಿ ನಿನಗೆ
ಧರಿಸಿಕೋ ನೀನದನೆ ನನ್ನ ದೊರೆಯೆ || ೨ ||


ಅರೆಘಳಿಗೆ ವಿಶ್ರಮಿಸು ನನ್ನ ಹೆಗಲಿನ ಮೇಲೆ
ನಿನ್ನ ಮೃದು ಸ್ಪರ್ಷಕೆ ಸೋತೆ ಚಿನ್ನ ||
ಆವ ಪುಣ್ಯದ ಫಲವೊ ಮಗುವಾಗಿ ಜನಿಸಿರುವೆ
ಅಪ್ಪನೆನ್ನವ ಭಾವ ಎಷ್ಟು ಚೆನ್ನ || ೩ ||


ನಿನಗಾಗಿ ನಾವ್ ಕಾದ ನವ ಮಾಸಗಳು ನನಗೆ
ನವಯುಗದ ತೆರದಲ್ಲಿ ತೋರಿತಲ್ಲ ||
ಮುದ್ದು ಮೊಗದಲಿ ನಗುವು ಎಂದು ಮಾಸದೆ ಇರಲಿ
ಬೇರೇನು ಹೊಸ ಆಸೆ ನನಗೆ ಇಲ್ಲ || ೪ ||



ತೋರಿಸುವೆ ಈ ಜಗವ ಹೊತ್ತು ಹೆಗಲಿನ ಮೇಲೆ
ಅಚ್ಚರಿಯ ಕಣ್ಬಿಟ್ಟು ನೀನು ನೋಡು ||
ಎಂಥ ಚಂದದ ಬದುಕು ನೀ ನನ್ನ ಜೊತೆಗಿರಲು
ಬದುಕಿತ್ತ ಸ್ವಾಮಿಗೆ ನಮನ ಮಾಡು || ೫ ||


- ಸುರೇಖಾ ಭೀಮಗುಳಿ
28/01/2016
ಚಿತ್ರ : ಅಂತರ್ಜಾಲ


ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli

Wednesday, January 27, 2016

" ಅಕೇಷಿಯಾ - ಅಕೇಷಿಯಾ "

ನಡೆವ ಗುರಿಯನೆ ಮರೆತ ನನ್ನೂರ ದಾರಿಯಲಿ
ಹುಡುಕುತಿರುವೆನು ನನ್ನ ಹೆಜ್ಜೆ ಗುರುತು ||
ಹಾದಿಯಾಚೀಚೆಯಲಿ ಬೆಳೆದಿಹುದು ಅಕೇಷಿಯ
ಕಳೆದುಕೊಂಡಿಹೆನಿಲ್ಲಿ ಮನದ ಮಾತು || ೧ ||

ಹಸಿರು ಹುಲ್ಲಿತ್ತಲ್ಲಿ ಗಿಡ ಚಿಗುರುತ್ತಿತ್ತಲ್ಲೆ
ಹುಲ್ಲು ಮೇಯುತಲಿತ್ತು ನಮ್ಮ ಎಮ್ಮೆ ||
ಹುಲ್ಲುಗಾವಲೆ ಇಲ್ಲ ಹಸುವು ಕೊಟ್ಟಿಗೆಯಲ್ಲೆ
ನಿಟ್ಟುಸಿರು ಬಿಟ್ಟಿಹೆನು ನಾನು ಒಮ್ಮೆ || ೨ ||


ನೆಲದ ಸಾರವ ಸೆಳೆವ ನೀರ ಸೆಲೆಯನೆ ಕಸಿವ
ನಮ್ಮೂರದಲ್ಲವೀ ಮರದ ಜಾತಿ ||
ಹೂವಿಲ್ಲ ಹಣ್ಣಿಲ್ಲ ಹೀಚು ಕಾಯಿಗಳಿಲ್ಲ
ದೂರನಿತ್ತಿದೆ ನಮ್ಮ ಕಾಡ ಕೋತಿ || ೩ ||


ಎಲ್ಲಿಂದಲೋ ಬಂದ ಹೊಸ ಬಗೆಯ ಸಸ್ಯವಿದು
ಬೇಗ ಕರಗದು ಎಲೆಯು ಮಣ್ಣಿನೊಳಗೆ ||
ಕೊನೆಗೊಂದು ದಿನ ಯಾರೊ ಮರವ ಕಡಿದೊಯ್ವರೋ
ಬೋಳು ನೆಲವನು ಬಿಟ್ಟು ನಮ್ಮೂರಿಗೆ || ೪ ||


- ಸುರೇಖಾ ಭೀಮಗುಳಿ
27/01/2016
ಚಿತ್ರ : Bellala Gopinath Rao

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, January 12, 2016

" ಕಂದನ ಹಾಡು - ಅಪ್ಪ-ಅಮ್ಮನ ಪಾಡು "

ಇನ್ನೇನು ಬೆಳಕಾಯ್ತು ಎದ್ದು ಬಿಡುವೆನು ನಾನು
ಬೆಚ್ಚಗಿಟ್ಟಳು ಮಗನ ಹೊದಿಕೆಯೊಳಗೆ ||
ಕಂದ ಏಳುವ ಮುನ್ನ ಕೆಲಸ ಮುಗಿಸುವೆ ತಾನು
ಎಂದು ಕೊಂಡಳು ತಾಯಿ ಮನದ ಒಳಗೆ || ೧ ||

ತಾಯಿ ಎದ್ದಾ ಒಡನೆ ಪುಟ್ಟಗೆಚ್ಚರವಾಯ್ತು
ಮೈಯ ಮುರಿಯುತಲೆದ್ದ ಹೊರಳಿಸುತ ಕತ್ತು ||
ನನ್ನ ಮುದ್ದಿನ ಮಗುವೆ... ಎದ್ದು ಬಿಟ್ಟೆಯ ಕಂದ ?
ಮಲಗ ಬಹುದಿತ್ತು ನೀ ಇನ್ನಷ್ಟು ಹೊತ್ತು || ೨ ||

ಹಸೆಯಿಂದ ಪಿಡಿದೆತ್ತಿ ಒದ್ದೆ ವಸ್ತ್ರವ ತೆಗೆದು
ಹಣೆಗೆ ಹೂಮುತ್ತಿಟ್ಟು ಅಪ್ಪಿಕೊಳುತ ||
ಎನರನ್ನ ನನಚಿನ್ನ ಎಂಥ ಸೊಗಸಿದು ಮಗುವೆ
ತಾಯ್ತನದ ಸೊಬಗೇ ನೀನೆನ್ನುತ || ೩ ||

ಹೊಟ್ಟೆ ತುಂಬಿದ ಮಗುವ ಅಪ್ಪನೆಡೆ ತಿರುಗಿಸುತ
ಎದ್ದು ಹೊರಟಳು ತಾಯಿ ಬಚ್ಚಲೆಡೆಗೆ ||
ಪುಟ್ಟ ಪಾದಗಳಲ್ಲಿ ಅಪ್ಪನನು ಮೆಟ್ಟುತ್ತ
ಗಮನ ಸೆಳೆಯಿತು ಮಗುವು ತನ್ನ ಕಡೆಗೆ || ೪ ||

ಎದ್ದೆಯಾ ನನಮುದ್ದು - ಏನು ಅವಸರವಿತ್ತು ?
ಬೆಚ್ಚ ಮಲಗುವ ಬಾರೊ ಮುಸುಕು ಹಾಕಿ ||
ಹೊರಗೆ ಚಳಿ ಕೊರೆಯುತಿದೆ ಬಿಸಿಲಿನ್ನು ಬಂದಿಲ್ಲ
ಮುಗಿಸಿಕೊಳ್ಳೋಣ ಬಾ ನಿದ್ದೆ ಬಾಕಿ || ೫ ||

ಕೈಕಾಲು ಬಡಿಯುತ್ತ ಬೊಚ್ಚುಬಾಯಗಲಿಸುತ
ಹೊದಿಕೆ ನೂಕಿದ ಕಂದ ಕಾಲಕಡೆಗೆ ||
ಅಮ್ಮನೆದ್ದಾಗೋಯ್ತು ನಾವು ಏಳೋಣ ನಡಿ
ಸೂರ್ಯ ಬರುತಾನೀಗ ನಮ್ಮ ಮನೆಗೆ || ೬ ||

- ಸುರೇಖಾ ಭೀಮಗುಳಿ
12/01/2016
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli