Monday, November 28, 2016

" ಓ ಬ್ರಹ್ಮ .... ಉತ್ತರಿಸು......." (ನನ್ನ 128 ನೆಯ ಕವನ)


ಓ ಬ್ರಹ್ಮ ಉತ್ತರಿಸು ನನ್ನ ಕಾಡಿಹ ಪ್ರಶ್ನೆ
ಮನದಲ್ಲಿ ಇಷ್ಟೊಂದು ಚಂಚಲತೆ ಯಾಕೊ ?
ಕಾರಣವ ತಿಳಿಸಿಬಿಡು ತಿದ್ದುಪಡಿ ಮಾಡಿಕೊಡು
ಹದದೊಳಿರಿಸುವ ಪರಿಯ ತಿಳಿಸಿಬಿಡು ಸಾಕೊ || ೧ ||

ದೂರ ಸರಿದವರನ್ನು ಹತ್ತಿರಕೆ ಕರೆಯುವುದು
ಹತ್ತಿರವೆ ಇದ್ದವರ ಕಡೆಗಣಿಪುದು ||
ಮಾತಾಡ ಬಯಸುವರ ಬಹುದೂರ ತಳ್ಳುವುದು
ಮೌನದಲಿ ಕಾಡುವರ ನೆನೆದಳುವುದು || ೨ ||

ಸಂಕಟದ ಸಮಯದಲಿ ಬದುಕು ಸಾಕೆನ್ನುವುದು
ಜೀವ ಹೋದರೆ ಸಾಕು ಎಂದಳುವುದು ||
ಸಾವು ಹತ್ತಿರ ಬರಲು ಬದುಕ ಬೇಕೆನ್ನುವುದು
ಆಯುಷ್ಯ ಹೆಚ್ಚಿಸಲು ಗೋಳಿಡುವುದು || ೩ ||

ಮನದ ವ್ಯಾಪಾರವದೊ ಬಲು ಭಿನ್ನವಾಗಿಹುದು
ಚಂಚಲತೆಯಿಂದಲೇ ಹಿಂಸಿಸುವುದು ||
ಇರುವುದೆಲ್ಲವ ಬಿಟ್ಟು ಇಲ್ಲದ್ದ ಕೇಳುವುದು
ಸಭ್ಯತೆಯ ಪರಿಧಿಯಲಿ ಬದುಕಬಿಡದು || ೪ ||

- ಸುರೇಖಾ ಭೀಮಗುಳಿ
28/11/2016
ಚಿತ್ರ : ಅಂತರ್ಜಾಲ

No comments:

Post a Comment