ಓ ಬ್ರಹ್ಮ ಉತ್ತರಿಸು ನನ್ನ ಕಾಡಿಹ ಪ್ರಶ್ನೆ
ಮನದಲ್ಲಿ ಇಷ್ಟೊಂದು ಚಂಚಲತೆ ಯಾಕೊ ?
ಕಾರಣವ ತಿಳಿಸಿಬಿಡು ತಿದ್ದುಪಡಿ ಮಾಡಿಕೊಡು
ಹದದೊಳಿರಿಸುವ ಪರಿಯ ತಿಳಿಸಿಬಿಡು ಸಾಕೊ || ೧ ||
ದೂರ ಸರಿದವರನ್ನು ಹತ್ತಿರಕೆ ಕರೆಯುವುದು
ಹತ್ತಿರವೆ ಇದ್ದವರ ಕಡೆಗಣಿಪುದು ||
ಮಾತಾಡ ಬಯಸುವರ ಬಹುದೂರ ತಳ್ಳುವುದು
ಮೌನದಲಿ ಕಾಡುವರ ನೆನೆದಳುವುದು || ೨ ||
ಸಂಕಟದ ಸಮಯದಲಿ ಬದುಕು ಸಾಕೆನ್ನುವುದು
ಜೀವ ಹೋದರೆ ಸಾಕು ಎಂದಳುವುದು ||
ಸಾವು ಹತ್ತಿರ ಬರಲು ಬದುಕ ಬೇಕೆನ್ನುವುದು
ಆಯುಷ್ಯ ಹೆಚ್ಚಿಸಲು ಗೋಳಿಡುವುದು || ೩ ||
ಮನದ ವ್ಯಾಪಾರವದೊ ಬಲು ಭಿನ್ನವಾಗಿಹುದು
ಚಂಚಲತೆಯಿಂದಲೇ ಹಿಂಸಿಸುವುದು ||
ಇರುವುದೆಲ್ಲವ ಬಿಟ್ಟು ಇಲ್ಲದ್ದ ಕೇಳುವುದು
ಸಭ್ಯತೆಯ ಪರಿಧಿಯಲಿ ಬದುಕಬಿಡದು || ೪ ||
- ಸುರೇಖಾ ಭೀಮಗುಳಿ
28/11/2016
ಚಿತ್ರ : ಅಂತರ್ಜಾಲ
No comments:
Post a Comment