Thursday, December 31, 2015

" ನಾಳೆ ನಮ್ಮದು "

" ನಾಳೆ ನಮ್ಮದು "
------------------
ಹಳೆಯ ದಿನಗಳು ಕಳೆದು ಹೋದವು
ಕಷ್ಟ-ಸುಖದಾ ಜೊತೆಯಲಿ ||
ನೆನಪನೊಂದಿಷ್ಟ್ ಉಳಿಸಿ ಹೋದವು
’ಭಾವ ಭಿತ್ತಿ’ಯ ಪುಟದಲಿ || ೧ ||

ಹೊಸತು ದಿನಗಳು ಶುಭವ ತರುವವು
ಎನ್ನುವಾಸೆಯು ಮನದಲಿ ||
ಇನ್ನು ಬರುವವು ಸುಖದ ದಿನಗಳು
ಎಂಬ ಆಶಯ ಫಲಿಸಲಿ || ೨ ||

ಕಷ್ಟ-ಸುಖಗಳು ಒಂದನೊಂದನು
ಬಿಟ್ಟು ಇರಲೂ ಸಾಧ್ಯವೆ ? ||
ಒಂದೆ ನಾಣ್ಯದ ಮುಖಗಳಂತೆ
ಒಟ್ಟಿಗಿರುವವು ಅಲ್ಲವೆ ? || ೩ ||

ಕಷ್ಟವಿದ್ದರೆ ಸುಖದ ಘಳಿಗೆಗೆ
ಬೆಲೆಯು ನಮ್ಮಯ ಬಾಳಲಿ ||
’ನಾಳೆ ನಮ್ಮದು’ ಎಂಬ ಆಸೆಯು
ಬತ್ತದಿರಲೀ ಬದುಕಲಿ || ೪ ||

- ಸುರೇಖಾ ಭೀಮಗುಳಿ
31/12/2015
ಚಿತ್ರ : ಸುಮಂತ ಬೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Sunday, December 13, 2015

" ಸಾಧನೆ "

ಹುಟ್ಟಿಷ್ಟು ವರ್ಷದಲಿ ಸಾಧಿಸಿದೆನೇನನ್ನು ?
ಹೇಗೆ ಹೇಳಲಿ ನಾನು ನಿಮ್ಮ ಮುಂದೆ ? ||
ಸಾಧನೆಯೆ ಮುಖ್ಯವೇ ? ಆತ್ಮತೃಪ್ತಿಯ ಮುಂದೆ
ಪ್ರಶ್ನೆಗುತ್ತರವನ್ನು ಹುಡುಕಿ ಬಂದೆ || ೧ ||

ಸಾಧನೆಯ ಅಳೆಯುವರು ಹೊರಗಿರುವ ಮಂದಿಗಳು
ಆತ್ಮ ತೃಪ್ತಿಯ ಭಾವ ನನ್ನದೇನೆ  ||
ಸಾಧನೆಯ ಗುರಿಯಿರಲಿ ಬೇಡವೆಂದವರಾರು ?
ಅದುವೆ ಜೀವನ ಗಮ್ಯವಲ್ಲ ತಾನೆ ?  || ೨ ||   

ಸಹಪಾಠಿಗಳು ಎಲ್ಲ ಸಾಧನೆಯ ಚಪ್ಪರಲಿ
ಕುಳಿತು ಮೆರೆದಿಹರೆಂದು ನಾನು ಬಲ್ಲೆ ||
ಅವರ ಸಾಧನೆ ನೋಡಿ ಕರುಬಲಾರೆನು ನಾನು
ಸ್ಪರ್ಧೆಯಲ್ಲಿನ ಓಟ ನಾನು ಒಲ್ಲೆ || ೩ ||

ನನ್ನ ಜೀವದ ಸೃಷ್ಟಿ ನಾನು ನೋಡುವ ದೃಷ್ಟಿ
ಭಿನ್ನವಾಗಿಹುದಲ್ಲ ಬದುಕಿನೆಡೆಗೆ ||
ಪ್ರೀತಿಯಂಮೃತ ಕಲಶ ಉಕ್ಕಿಹುದು ಹೃದಯದಲಿ
ಹಂಚ ಹೊರಟಿಹೆ ನಾನು ವಿಶ್ವದೆಡೆಗೆ || ೪ ||

- ಸುರೇಖಾ ಭೀಮಗುಳಿ
14/12/2015
ಚಿತ್ರಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, December 3, 2015

" ಕಾವೇರಿ ತಾಯಿ ಮತ್ತು ಮಕ್ಕಳ ಸಂವಾದ "

ತಾಯಿ ಹೌದು ಎಷ್ಟು ದಿನ
ಸಹಿಸಿಯೇನು ನೋವನು ? ||
ನೊಂದು ಬೆಂದು ಕೊರಗಿ ಮರುಗಿ
ಧಾರೆಯಾಗಿ ಸುರಿದೆನು || ೧ ||

ಹೆತ್ತ ತಾಯಿ ಅಮೃತವದು
ಮೆಚ್ಚಿ ಕುಡಿದು ತಣಿಯಲಿ ||
ಇನ್ನು ಬೇಕು ಮತ್ತು ಬೇಕು
ಎಂಬ ಹಠವ ತೊರೆಯಲಿ || ೨ ||

ದೈವ ಕೋಪ ಜನರ ಶಾಪ
ತಟ್ಟದಲೇ ಬಿಡುವುದೆ ? ||
ಇನ್ನಾದರೂ ಒಳಿತು ಬುದ್ಧಿ
ನಿಮ್ಮ ತಲೆಗೆ ಬರುವುದೆ ? || ೩ ||

ಕ್ಷಮಿಸು ತಾಯಿ ಮಕ್ಕಳಾಟ
ನಿನಗೆ ಕರುಣೆ ಬಾರದೆ ?  ||
ಯಾರ ಹಠಕೆ ಯಾರೊ ಹೊಣೆ
ತಾಯೆ ಇದು ನ್ಯಾಯವೇ ? || ೪ ||

ಶಾಂತಳಾಗು ಬೇಗ ತಾಯೆ
ನೋಡಲಾರೆ ಬವಣೆಯ ||
ಆರ್ತನಾದ ಕೇಳಲಾರೆ
ಕ್ಷಣದಿ ಪೊರೆಯಲಾರೆಯ ? || ೫ ||

- ಸುರೇಖಾ ಭೀಮಗುಳಿ
04/12/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, December 2, 2015

" ಚೆನ್ನೈನಲ್ಲಿ ಸುರಿಯುತ್ತಿರುವ ವರುಣದೇವನಿಗೊಂದು ಬಿನ್ನಹ...."


ಆ ತಾಯ* ದಾಹವದು ತೀರಿದರೆ ಸಾಕಿತ್ತು
ಇಡಿಯ ರಾಜ್ಯವೆ ನೀರು ಕುಡಿಯುತಿದೆ ಯಾಕೆ ? ||
ಊರಿಗೂರೆ ಮುಳುಗಿ ನಡುಗುತಿದೆ ನೋಡಿದಿರಾ ?
ಮುಗ್ಧ ಜನತೆಯ ಮೇಲೆ ಪ್ರಕೃತಿಯ ಕೇಕೆ  || ೧ ||

ಮೇಘದಬ್ಬರ ನಿಲಿಸು ಕರುಣೆ ಮಳೆಯನು ಸುರಿಸು
ಇನ್ನಾದರೂ ಒಳಿತು ಬುದ್ಧಿ ಬರಲಿ ||
ನಮಗೆ ನೀರಿರದಿರೆ ಕಿತ್ತು ಕೇಳದೆ ಇರಲಿ
ಕಾವೇರಿಗಾಗಿ ಹಠ ಹಿಡಿಯದಿರಲಿ || ೨ ||

ತನ ತಾಯ ಪುಣ್ಯದಲಿ ಮಕ್ಕಳಿಗು ಪಾಲುಂಟೆ ?
ಪಾಪದಲ್ಲಿಯು ಪಾಲು ಅನಿವಾರ್ಯವೇ ? ||
ಪಾಪವೋ ? ಪುಣ್ಯವೋ ? ಹಳೆಯ ಕರ್ಮದ ಫಲವೊ ?
ಮಕ್ಕಳಿಗೆ ಈ ಶಿಕ್ಷೆ  ಸರಿಯೆ ದೊರೆಯೆ ? || ೩ ||

- ಸುರೇಖಾ ಭೀಮಗುಳಿ
03/12/2015
ಚಿತ್ರಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

*ಆ ತಾಯ = ತಮಿಳಮ್ಮ...

Saturday, November 28, 2015

"ಎಣ್ಣೆ ರೊಟ್ಟಿ"

"ಎಣ್ಣೆ ರೊಟ್ಟಿ"
**************

ನಮ್ಮ ಮನೆಯ ಎಣ್ಣೆ ರೊಟ್ಟಿ
ನೋಡಿರಣ್ಣ ಹೇಗಿದೆ ? ||
ಸಣ್ಣ ಸಣ್ಣ ರಂಧ್ರದಲ್ಲು
ಧೂಮವನ್ನು ಉಗುಳಿದೆ ! || ೧ ||

ಅಕ್ಕಿ ರಾಗಿ ಬಿಸಿಯ ನೀರು
ಉಪ್ಪು ಶುಂಠಿ ಬೆರೆಯಿತು ||
ಹದದಿ ತಟ್ಟಿ ರಂಧ್ರ ಹೊಂದಿ
ಬಿಸಿಯ ಕಾವ್ಲಿ ಏರಿತು ! || ೨ ||

ಎಣ್ಣೆಯೊಡನೆ ಬಿಸಿಗೆ ಬೆಂದು
ಕವಚಿ ಕುಳಿತು ನಕ್ಕಿತು ||
ಎಣ್ಣೆ ಹನಿಯು ಮೇಲೆ ಬಿದ್ದು
ಧೂಮ ರಂಧ್ರವೆನಿಸಿತು || ೩ ||

ಬೆಣ್ಣೆ ಬೆಲ್ಲ ಜೇನು ತುಪ್ಪ
ತೆಂಗು ಚಟ್ನಿಯೊಟ್ಟಿಗೆ ||
ಬಿಸಿಯ ರೊಟ್ಟಿ ಬಾಯಿಗಿಡಿರಿ
ಬನ್ನಿ ಎಲ್ಲರೊಟ್ಟಿಗೆ ||  ೪ ||

- ಸುರೇಖಾ ಭೀಮಗುಳಿ
28/11/2015
ಚಿತ್ರ: ಸುಮಂತ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, November 24, 2015

" ಮತ್ತೆ ಬಂದ ಸೂರ್ಯ ನಮ್ಮ ಊರಿಗೆ ....."

" ಮತ್ತೆ ಬಂದ ಸೂರ್ಯ ನಮ್ಮ ಊರಿಗೆ ....."
------------------------------------------
ಅಪರೂಪವಾಗಿದ್ದ ಸೂರ್ಯ ರಶ್ಮಿಯ ಸೊಬಗು
ಮತ್ತೊಮ್ಮೆ ಊರನ್ನು ಬೆಳಗಿದೆಯಲ್ಲ ||
ಹದಿನೈದು ದಿನದಿಂದ ರಜೆಹಾಕಿ ಹೋಗಿದ್ದ
ನಮ್ಮ ಸೂರ್ಯನು ಇಂದು ಬಂದಿಹನಲ್ಲ || ೧ ||

ನಿನ್ನೆನಿನ್ನೆಯವರೆಗೂ ಮಳೆಯದೇ ಕಾರ್ಬಾರು
ಇಂದು ಮಳೆಮೋಡಗಳ ಸುಳಿವೆ ಇಲ್ಲ ||
ಆಕಾಶದಂಗಳವು ಶುಭ್ರವಾಗಿದೆಯಲ್ಲ
ಎಲ್ಲಿ ಹೋದವು ಮೋಡ ದೇವಬಲ್ಲ || ೨ ||

ನನ್ನ ಹಲಸಿನ ಮರವು ರವಿಯ ರಶ್ಮಿಯ ಕಂಡು
ಮಿರಮಿರನೆ ಮಿನುಗುತಿದೆ ನೋಡಿರೆಲ್ಲ ||
ಮೇಘನಿಲ್ಲದ ಬಾನ ಆ ಭಾನು ಆಳಿಹನು
ತಂಗಾಳಿ ಬೀಸುತಿದೆ ಸುಖಿಸಿರೆಲ್ಲ || ೩ ||

ಬಾಲ್ಯದಾ ನೆನಪಿನಲಿ ಬೆನ್ನ ಒಡ್ಡಿಸಿ ಕುಳಿತೆ
ಚಳಿಕಾಯಿಸುವ ಆಸೆ ಮನಸಿನಲ್ಲಿ ||
ಕ್ಷಣ ಕಾಲ ಕಳೆಯುತಲೆ ಚರ್ಮ ಚುರುಗುಟ್ಟಿತದೋ
ಸೂರ್ಯ ಮೆರೆಯುತ ನಕ್ಕ ಬಾನಿದಲ್ಲಿ ! || ೪ ||

- ಸುರೇಖಾ ಭೀಮಗುಳಿ
25/11/2015
ಚಿತ್ರ : ನನ್ನ ಹಲಸಿನ ಮರ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, November 19, 2015

" ಪ್ರಕೃತಿ ಹೇಗಿರಬೇಕೆಂದರೆ............"

" ಪ್ರಕೃತಿ ಹೇಗಿರಬೇಕೆಂದರೆ............"
------------------------------
ಹಗಲು ಹೊತ್ತು ಸೂರ್ಯ ಬರಲಿ
ಕೆಲಸ ಕಾರ್ಯ ಸಾಗಲಿ ||
ರಾತ್ರಿ ಪೂರ ಮಳೆಯು ಸುರಿದು
ಪೃಥ್ವಿ ತುಷ್ಟಿ ಹೊಂದಲಿ || ೧ ||

ನಿದ್ದೆ ಬರುವ ಸಮಯದಲ್ಲಿ
ಚಳಿಯು ನಮ್ಮ ಕಾಡಲಿ ||
ಚಳಿರಾಯನ ಮಡಿಲಿನಲ್ಲಿ
ಹೊಸತು ಕನಸು ಬೀಳಲಿ || ೨ ||

ಮಳೆಯ ಮಧುರ ಸದ್ದಿನೊಡನೆ
ಭಾವ-ಬದುಕು ಸಂಗಮ ||
ಹೊರಗೆ ಮಳೆಯು ಜಡಿಯುತಿರಲು
ಮಲಗಲೆಂಥ ಸಂಭ್ರಮ || ೩ ||

ಮಳೆಯು-ಬಿಸಿಲು-ಚಳಿಯು ನಮಗೆ
ಮಿತದಿ ಬೇಕು ಅಲ್ಲವೆ ? ||
ಅತಿಯಾದರೆ ಅಮೃತವೂ
ವಿಷದ ಹಾಗೆ ಅಲ್ಲವೆ ? || ೪ ||

- ಸುರೇಖಾ ಭೀಮಗುಳಿ
19/11/2015
ಚಿತ್ರ : ಸುಮಂತ್ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, November 18, 2015

" ಬೆಳಗು ಬಾ ಭಾಸ್ಕರನೆ........"

" ಬೆಳಗು ಬಾ ಭಾಸ್ಕರನೆ........"
*****************************
ಬೆಳಗು ಬಾ ಭಾಸ್ಕರನೆ ಬೆಂಗ್ಳೂರ ಹಗಲನ್ನು
ಕುಳಿತಲ್ಲೆ ಜನರೆಲ್ಲ ತೂಕಡಿಸುತಿಹರು ||
ಎದ್ದೇಳಲೇ ಬೇಕೆ ? ಶಾಲೆಗ್ಹೋಗಲೆ ಬೇಕೆ ?
ಗಂಡ-ಮಕ್ಕಳು ಎಲ್ಲ ಗೊಣಗುತಿಹರು || ೧ ||

ನೀಬರದೆ ಹೋದರೇ ನನಗೇನು ಅನ್ನಿಸದು
ಕಳೆದು ಬಿಡುವುದು ಹಾಗೆ ನನ್ನ ದಿನಚರಿಯು ||
ಹೊತ್ತು ಹೋಗುವುದಿಲ್ಲ- ಕೆಲಸ ಸಾಗುವುದಿಲ್ಲ
ಬಟ್ಟೆ ಒಣಗುವುದಿಲ್ಲ ಅದುವೆ ಸಂಕಟವು || ೨ ||

ಕಾರ್ಯಭಾರದ ಚಿಂತೆ ನನ್ನಲ್ಲಿ ಇನಿತಿಲ್ಲ
ಚಳಿರಾಯನ ಜೊತೆಗೆ ನನ್ನ ಸಖ್ಯ ||
ಮನೆಮಂದಿಯೆಲ್ಲರು ಹಾಗೆ ಕೂರುವುದಕುಂಟೆ ?
ಪರಿಪರಿಯ ಕೆಲಸಗಳು ಇಹವು ಮುಖ್ಯ || ೩ ||

ನಿನಗೆ ಹಬ್ಬದ ರಜೆಯು ಅತಿಯಾಗಿ ಹೋಯಿತು
ವಾರದಿಂದೀಚೆಗೆ ಪತ್ತೆ ಇಲ್ಲ ||
ಇನ್ನು ಬಾರದೆ ಇರಲು ಜನ ನಿನ್ನ ಮರೆಯುವರು
ಮತ್ತೆ ನಿನ್ನನು ಯಾರು ಕರೆಯುವುದೆ ಇಲ್ಲ ! ||

- ಸುರೇಖಾ ಭೀಮಗುಳಿ
18/11/2015
ಚಿತ್ರ : ಸುಮಂತ್ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ಪಶ್ಚಿಮ ಘಟ್ಟದ ಚಾರಣ "


" ಪಶ್ಚಿಮ ಘಟ್ಟದ ಚಾರಣ "
***********************
( " ಯೂತ್ ಹಾಸ್ಟೆಲ್ " ಸಂಸ್ಥೆ ಆಯೋಜಿತ " ಕೇರಳ ಚಾರಣ"ಕ್ಕೆ ಹೊರಟ ಸಂಭ್ರಮದಲ್ಲಿ.....)

ಪಶ್ಚಿಮ ದಿಕ್ಕಿನ ಘಟ್ಟದ ಸಾಲಿನ
ಚಾರಣ ಮಾಡಲು ಹೊರಟಿಹೆವು ||
ದೇವರ ನಾಡಿನ ಪ್ರಕೃತಿ ಸೊಬಗನು
ಸೂರೆಗೊಳ್ಳುವಾ ಸಂಭ್ರಮವು || ೧ ||

ಮೂರು ದಿನಗಳ ಚಾರಣವಿರುವುದು
ಹೇಗಾಗುವುದೋ ಗೊತ್ತಿಲ್ಲ ||
ಅನುಭವವೆಲ್ಲವ ಲೇಖನ ರೂಪದಿ
ಹಂಚುವೆ ನಾನು ನಿಮಗೆಲ್ಲ ||

ಹಬ್ಬದ ತಿಂಡಿಯ ಮೆಲ್ಲುತ ತಣಿಯಿರಿ
ನಿಮ್ಮಯ ಮನೆಯಲಿ ನೀವೆಲ್ಲ ||
ಕಾಡಿನ ಇಂಬಳ ದರ್ಶಿಸಿ ಬರುವೆನು
ಹಬ್ಬದ ಶುಭಾಶಯ ನಿಮಗೆಲ್ಲ ||

- ಸುರೇಖಾ ಭೀಮಗುಳಿ
12/11/2015
ಚಿತ್ರ : ಸುಮಂತ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Sunday, November 8, 2015

" ಬೆಂಗಳೂರಲಿ ಇಂದು ...... "

" ಬೆಂಗಳೂರಲಿ ಇಂದು ...... "
***************************
ಬೆಂಗಳೂರಲಿ ಇಂದು ಎಂಥ ಚಂದದ ಹವೆಯು
ಬೆಳಗೆ ಬೆಳಗೆಯೆ ಮಳೆಯು ಸುರಿಯುತಿಹುದು ||
ಮನೆಯ ಬಾಗಿಲ ಮುಚ್ಚಿ ಕಿಟಗಿ ಪರದೆಯ ಎಳೆದು
ಹೊದ್ದು ಮಲಗಲು ಜೀವ ಎಳೆಯುತಿಹುದು || ೧ ||

ಸೋಮಾರಿಯಾಗಿಹೆನು ಸಂತಸದಿ ಬೀಗಿಹೆನು
ಇಂಥ ತಣ್ಣನೆ ಹವೆಯು ನನಗೆ ಇಷ್ಟ ||
ಕೆಲಸ ಸಾಗುವುದಿಲ್ಲ ಬೈಗುಳದ ಭಯವಿಲ್ಲ
ದುರ್ಲಬವೆ ಅಲ್ಲವೇ ಇಂಥ ಅದೃಷ್ಟ ? || ೨ ||

ಮನೆಯ ಮುಂದಿನ ಹೊಂಗೆ ಹಲಸಿನಾ ಮರಗಳಿಗು
ಇಷ್ಟವಾಗುವುದಂತೆ ಈ ಪಿರಿಪಿರಿ ಮಳೆಯು ||
ಆ ರವಿಗು ರಜೆಯಂತೆ ಮನೆಯಲ್ಲಿ ಮಲಗಿರಲಿ
ನನಗು ದೊರಕಿಹುದಿಂದು ಹೊಸತು ರಜೆಯ  || ೩ ||

ಹೇಳುವರು ಯಾರಿಲ್ಲ -ಯಾರೂ ಕೇಳುವುದಿಲ್ಲ
ಹೊದ್ದು ಮಲಗಲೆ ನಾನು ಹಾಡುಹಗಲು ? ||
ವರುಣನಾ ಜೋಗುಳವ ಖುದ್ದು ನಾ ಆಲಿಸುತ
ಕಳೆದು ಹೋಗಲೆ ನನ್ನ ಭಾವಲೋಕದೊಳು ? || ೪ ||

- ಸುರೇಖಾ ಭೀಮಗುಳಿ
09/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

" ನನ್ನ ಮಗಳು "


" ನನ್ನ ಮಗಳು "
 ****************
ಕಪ್ಪು ಕೂದಲ ಚಲುವೆ ಮುದ್ದು ವದನವ ಹೊತ್ತು
ಬಂದು ನಿಂತಳು ನನ್ನ ಮನದ ಮುಂದೆ ||
’ಕಾವ್ಯಕನ್ನಿಕೆ ನಾನು- ನನ್ನ ಸಲಹುವೆ ಏನು ?
ಕಳಿಸಿ ಕೊಟ್ಟಿಹನಲ್ಲ ನನ್ನ ತಂದೆ’ || ೧ ||

ಸ್ವಾಗತಿಸಿದೆ ಅವಳ- ಒಳ ಕರೆದು ನೆರಳಿತ್ತೆ
ಮಗಳಾಗಿ ಸ್ವೀಕರಿಸಿ ಆದರಿಸಿದೆ ||
ಅವಳ ಖುಷಿಯಲ್ಲಿ ನಾ ನನ್ನ ಸುಖವನು ಕಂಡೆ
ಸುತೆಯ ನೋವಲಿ ನಾನು ಕರಗಿ ಹೋದೆ || ೨ ||

ಲಂಗ-ದಾವಣಿ ಕೊಟ್ಟೆ, ರೇಷ್ಮೆ ಲಂಗವ ಹೊಲಿದೆ
ಜರತಾರಿಯನು ಉಡಿಸಿ ಸಿಂಗರಿಸಿದೆ ||
ಕಾಲ್ಗೆಜ್ಜೆಯನು ತೊಡಿಸಿ- ಮೊಗ್ಗ ಜಡೆಯನು ಹೆಣೆದೆ
ನನ್ನ ಸರಗಳ ತೊಡಿಸಿ ದೃಷ್ಟಿ ತೆಗೆದೆ || ೩ ||

ನವ್ಯತೆಯ ಹಂಗಿಲ್ಲ- ಕೃತಕತೆಯ ಸೋಗಿಲ್ಲ
ಸಹಜ ಸುಂದರಿ ಈಕೆ ನನ್ನ ಮಗಳು ||
ಕಾವ್ಯಕನ್ನಿಕೆ ಎಂಬ ಬ್ರಹ್ಮ ಮಾನಸ ಪುತ್ರಿ
ಮೃದುವಾಗಿ ಮಿಡಿದಿಹುದು ನನ್ನ ಕರುಳು || ೪ ||

ಏರು ಜವ್ವನೆ ಈಕೆ ಮೈಕೈಯಿ ತುಂಬಿಹುದು
ಹಗುರಾಗಿ ಹಾರಿಹುದು ಅವಳ ಕುರುಳು ||
ಮಗಳಂದ ನೋಡುತ್ತ ನನ್ನನ್ನೆ ಮರೆತಿಹೆನು
ನನಗೇಕೆ
ಹಿಡಿಯಿತೋ ಇಂಥ ಮರುಳು ? || ೫ ||

- ಸುರೇಖಾ ಭೀಮಗುಳಿ
07/11/2015
ಚಿತ್ರ :ಅಂತರ್ಜಾಲ
ಶುದ್ಧರೂಪ : ಸುಧನ್ವ ಭೀಮಗುಳಿ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Friday, November 6, 2015

" ಕಾವ್ಯಕನ್ನಿಕೆ "

" ಕಾವ್ಯಕನ್ನಿಕೆ "
********************
ಮುದ್ದು ಮಗಳನು ಸಾಕಿ ಮುದಗೊಳ್ಳುವಂತೆಯೇ
ಕಾವ್ಯಕನ್ನಿಕೆ ಇವಳು ನಮ್ಮ ಮಗಳು ||
ಅವಳು ಅರಳುವ ಸಮಯ ಅವಗಣನೆ ಸರಿಯಲ್ಲ
ಗಮನವಿರಲೀ ಈಕೆ ನಮ್ಮ ನೆರಳು || ೧ ||

ಕವನಗಳ ನಿಯಮವನು ಪಾಲಿಸುವ ತಪವಿರಲಿ
ಕಾವ್ಯ ಕನ್ನಿಕೆ ಸೌಖ್ಯ ಮುಖ್ಯ ನಮಗೆ ||
ಕ್ರಮವು ಒಪ್ಪಿದ ಹಾದಿ - ತಾಳ ತಪ್ಪದ ಕಾವ್ಯ
ವ್ಯರ್ಥವೆನಿಸುವುದಿಲ್ಲ ನಾಡ ನುಡಿಗೆ || ೨ ||

ನಡಿಗೆ ಕಲಿಯುವ ಸಮಯ ಸರಿ ಕಲಿಯದಿದ್ದರೆ
ಹೆಜ್ಜೆಗಳು ತಪ್ಪುವವು ಸಹಜವಾಗಿ ||
ಚಪ್ಪಲಿಯ ಚರಪರದ ಶಬ್ದವನು ಮಾಡದಲೆ
ಇಡುವ ಸದೃಢ ಹೆಜ್ಜೆ ಭದ್ರವಾಗಿ || ೩ ||

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ?
ತಿದ್ದುವುದಕಾದೀತೆ ಬಲಿತಮತ್ತೆ ? ||
ಮೂಲದಲ್ಲಿಯೇ ನಾವು ಕಟ್ಟಿನೊಳ ಬೆಳೆಯೋಣ
ಆ ತಾಯಿ ಶಾರದೆಯು ಮೆಚ್ಚುವಂತೆ || ೪ ||

- ಸುರೇಖಾ ಭೀಮಗುಳಿ
06/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Thursday, November 5, 2015

" ಭೂತ - ಭವಿಷ್ಯ- ವರ್ತಮಾನ "

" ಭೂತ - ಭವಿಷ್ಯ- ವರ್ತಮಾನ "
*******************************

ಕಳೆದ ಭೂತದ ಬಗೆಗೆ ಹಲುಬುವುದು ಯಾತಕೇ ?
ಮತ್ತೇನು ಅದು ಚಿಗುರಿ ಎದುರು ನಿಲದು ||
ಭವಿಷ್ಯದ ಕುರಿತಾದ ಚಿಂತೆಯೂ ಬೇಕಿಲ್ಲ
ನಾಳೆ ಇರುತೇವೆಂಬ ಭರವಸೆಯೆ ಇಲ್ಲ ! || ೧ ||

ಹಿಂದಿನದು ನೆನಪಿರಲಿ ನೋವುಗಳ ಮರೆತುಬಿಡಿ
ಹಾಸ್ಯಲೇಪವ ಹಚ್ಚಿ ಖುಷಿಯಪಡಿರಿ ||
ಹಳೆಯದೆಲ್ಲವ ಗೆದ್ದ ಹೆಮ್ಮೆಯನು ಹೊಂದುತಲಿ
ಇಂದು ತಲುಪಿದ ಸ್ಥಿತಿಯ ಒಪ್ಪಿಕೊಳಿರಿ || ೨ ||

ಭವಿಷ್ಯದ ಬಗೆಗೊಂದು ಕನಸಿರಲಿ ಮನಸಿನಲಿ
ಒಳ್ಳೆಯದೆ ಬರಲೆಂಬ ನಿರೀಕ್ಷೆಯಿರಲಿ ||
ಮುಂಬರುವ ಕಷ್ಟಗಳ ಎದುರಿಸುವ ಭಾವದಲಿ
ನಮ್ಮ ಒಳಗಿನ ಮನಸು ಸಿದ್ಧವಿರಲಿ || ೩ ||

ನಿನ್ನೆಯಾ ನೆನಪಿನಲಿ ಮುಂದಿನಾ ಕನಸಿನಲಿ
ಇಂದು ಸುಖಿಸುವ ಕ್ಷಣವು ಜಾರದಿರಲಿ ||
ಈ ಬಾಳನಿತ್ತವಗೆ ಕೊನೆಗೊಳಿಸಬಲ್ಲವಗೆ
ಎಲ್ಲವನು ಹೊರಿಸಿ ಮನ ಹಗುರಗೊಳಲಿ || ೪ ||

- ಸುರೇಖಾ ಭೀಮಗುಳಿ
05/11/2015
ಚಿತ್ರ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Monday, November 2, 2015

" ಅನಾನಾಸು ಸಂಭ್ರಮ !"

" ಅನಾನಾಸು ಸಂಭ್ರಮ !"
***********************

ಪೆರಿಯ ಶಾಂತಿಯ ಅನಾನಾಸದು
ನಮ್ಮ ಬಿಡದೇ ಸೆಳೆವುದು ||
ಎಷ್ಟು ತಿಂದರು ತೃಪ್ತಿಯಾಗದು
’ಹೀಗೆ ಯಾತಕೆ ?’ ತಿಳಿಯದು || ೧ ||

ಮಂಗಳೂರಿನ ಮುಖ್ಯ ರಸ್ತೆಯ
ಬಲ
ಕೆ ತಿರುಗಿದ ಮಾರ್ಗವು ||
ಹಸಿರು ಕಾನನ ನೆರಳ ಪರಿಸರ
ಸುತ್ತ ಮಂಗನ ಆಟವು ! || ೨ ||

ಹಣ್ಣ ಸಿಪ್ಪೆಗೆ - ಕೊಳೆತ ಹಣ್ಣಿಗೆ
ಕಾದು ಕುಳಿತಿವೆ ಮರ್ಕಟ ||
ಮರದ ಮೇಲಿನ ಮಂಗನಾಟಕೆ
ಮರೆವ ಗ್ರಾಹಕ ಸಂಕಟ || ೩ ||

ಹಳದಿ ಹಣ್ಣಿಗೆ ಉಪ್ಪು ಖಾರಾ
ಹಣ್ಣ ತಟ್ಟೆಯು ಮೆರೆವುದು ||
ಬಾಯಿಗಿಟ್ಟರೆ ’ಇನ್ನು ಬೇಕೂ’
ಎಂದು ಮನವೂ ಬೇಡ್ವುದು || ೪ ||

ನಮಗು ಗೊತ್ತಿದೆ ಬಹಳ ತಿಂದರೆ
ದೇಹ ಉಷ್ಣವ ತಡೆಯದು ||
ಬಿಟ್ಟರುಂಟೇ ಇಂಥ
ಸಂಭ್ರಮ ?
ಬೇಕು ಎಂದರು ಸಿಕ್ಕದು || ೫ ||

ನಾಲ್ಕೆ ಜನರೇ ಹತ್ತು ತಟ್ಟೆಯ
ತಿಂದು ತೇಗುತ ಬಂದೆವು ||
ಇಂದು ಮನೆಯಲಿ ಹಾಲು- ಮೆಂತ್ಯದ
ಬೊಂಡ ನೀರಿನ ಪಥ್ಯವು ! || ೬ ||

- ಸುರೇಖಾ ಭೀಮಗುಳಿ
03/11/2015.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ಶ್ಯಾಮ್ ಭೀಮಗುಳಿ ಮತ್ತು ಅನಾನಾಸು ಗಾಡಿ !

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Saturday, October 31, 2015

" ಜೇನು ಮರಿಗೊಂದು ಶೋಕಗೀತೆ "

" ಜೇನು ಮರಿಗೊಂದು ಶೋಕಗೀತೆ "
*******************************
ಒಂದು ದಿನ ಜೇನು ಮರಿಯು
ಏನು ಮಾಡಿತು ? ||
ಮಧುವ ಹುಡುಕಲೆಂದು ಅದು
ಗೂಡು ಬಿಟ್ಟಿತು || ೧ ||

ಹೂವು ಹುಡುಕ ಹೊರಟ ಮರಿಗೆ
ಬೆಲ್ಲ ಕಂಡಿತು ||
ಅದರ ರುಚಿಯ ನೋಡ್ವ ಎಂದು
ನೆಕ್ಕಿ ನೋಡಿತು || ೨ ||

ನೊರೆಯ ಬೆಲ್ಲದಲ್ಲಿ ಕಾಲು
ಸಿಕ್ಕಿಕೊಂಡಿತು ||
ಕಷ್ಟಪಟ್ಟರೂನು ಹೊರಗೆ
ಬಾರದಾಯಿತು || ೩ ||

ಅಷ್ಟರೊಳಗೆ ನೊರೆಯ ಬೆಲ್ಲ
ಗಟ್ಟಿಯಾಯಿತು ||
ಬೆಲ್ಲದಚ್ಚಿನಲ್ಲಿ ಮರಿಯು
ಪ್ರಾಣ ಬಿಟ್ಟಿತು ! || ೪ ||

ಏನೋ ಮಾಡ ಹೋಗಿ ಅದುವು
ಏನೋ ಆಯಿತೆ ? ||
ನೊರೆಯ ಬೆಲ್ಲ ಆಸೆಗಾಗಿ
ಜೀವ ಹೋಯಿತೆ ? || ೫ ||

ಶೋಕಗೀತೆ ಬರೆವುದಕಿದು
ನಾಂದಿಯಾಯಿತೆ ?
ಸತ್ತ ಜೇನಿನಾತ್ಮಕಿಂದು
ಮುಕ್ತಿ ಸಿಕ್ಕಿತೆ ? || ೬ ||

- ಸುರೇಖಾ ಭೀಮಗುಳಿ
31/10/2015
ಚಿತ್ರ : Rajesh Srivatsa (ಕಾಜಾಣ - Kaajaana ಗ್ರೂಪ್)
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, October 28, 2015

" ಶಿವಪ್ಪ ನಾಯ್ಕನನ್ನು ನೆನೆದು .................."


" ಶಿವಪ್ಪ ನಾಯ್ಕನನ್ನು ನೆನೆದು .................."
***********************************

ಬಿದನೂರಿನ ಹಸಿರು ಕೋಟೆ
ಎಷ್ಟು ಭವ್ಯವಾಗಿದೆ ||
ಮನದ ಕ್ಲೇಶವೆಲ್ಲ ಬಿಟ್ಟು
ನೋಡ ಬನ್ನಿ ಎಂದಿದೆ || ೨ ||

ನಮ್ಮ ಊರ ಕೋಟೆ ಕೆರೆಯು
ಶಾಂತವಾಗಿ ಮೆರೆದಿದೆ ||
ಮೂರು ಬಾಹು ಹೊಂದಿಕೊಂಡು
ತುಂಬಿಕೊಂಡು ನಿಂತಿದೆ || ೧ ||

ಕೋಟೆ ಮೇಲೆ ಬಿದ್ದ ನೀರು
ಕೆರೆಗೆ ಮೂಲವಾಯಿತೆ ? ||
ಕೆರೆಯು ತುಂಬಿ ಉಕ್ಕಿ ಹರಿದು
ಊರ ಹಳ್ಳ ಸೇರಿತೆ ? || ೩ ||

ಊರ ನಾಯ್ಕ ಕಾಲವಾಗಿ
ಎಷ್ಟೋ ವರ್ಷವಾಯಿತು ||
ಕೋಟೆ ನೋಡುವಾಗ ಮನವು
ನಾಯ್ಕರನ್ನು ನೆನೆಯಿತು || ೪ ||

ಕೋಟೆ - ಕೆರೆಯು ಇರುವವರೆಗೆ
ಶಿವಪ್ಪ ನಾಯ್ಕ ಅಮರನು ||
ನಮ್ಮ ಊರ ಹಳೆಯ ಕತೆಯ
ನೆನಪುಮಾಡುತಿರುವನು || ೫ ||

- ಸುರೇಖಾ ಭೀಮಗುಳಿ
29/10/2015
ಚಿತ್ರ : Supreeth Dsouza, Dominic Kabale (ನಗರ ಗ್ರೂಪ್)

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Tuesday, October 27, 2015

ನನ್ನ ಬಿದನೂರ ಕೋಟೆ ಕೆರೆ

" ನನ್ನ ಬಿದನೂರ ಕೋಟೆ ಕೆರೆ "
***************************
ಸ್ವಚ್ಛ ಬಾನು ಸುತ್ತ ಕಾನು
ಮಧ್ಯೆ ಕೋಟೆ ಕೆರೆಯಿದೆ ||
ಸುತ್ತ ಹಸಿರು ನೆಲದ ಹಾಸು
ಕೈಯ ಬೀಸಿ ಕರೆದಿದೆ || ೧ ||


ಶುದ್ಧ ಗಾಳಿ ಸ್ತಬ್ಧ ಜಲವು
ಮೂಕವಾಗಿ ನಿಂತಿದೆ ||
ಪ್ರಕೃತಿಯಾ ಧ್ಯಾನದಂತೆ
ನನ್ನ ಮನಕೆ ಕಂಡಿದೆ || ೨ ||

ತನ್ನ ನೈಜ ಚಂದದಿಂದ
ಕೆರೆಯ ಸೊಬಗು ಮೆರೆದಿದೆ ||
ದಾರಿಯಲ್ಲಿ ಹೋಗುವವರ
ಮನವ ಸೂರೆಗೊಂಡಿದೆ || ೩ ||

ಕೆರೆಯ ಸುತ್ತ ಹೂವ ತೋಟ
ಕಾಣುವಂತ ಕನಸಿದೆ ||
ಕೆರೆಯ ನೀರಿನಲ್ಲಿ ಒಮ್ಮೆ
ಈಜಬೇಕು ಎನಿಸಿದೆ ! || ೪ ||

- ಸುರೇಖಾ ಭೀಮಗುಳಿ
27/10/2015
ಚಿತ್ರ : Dominic Kabale (ನಮ್ ನಗರ ಗ್ರೂಪ್)
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ

"
ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ "
*********************************

ತವರಲ್ಲೆ ಉಳಿದಿರುವ ಓ ನನ್ನ ಮನದನ್ನೆ
ನನ್ನ ಮಾತನ್ನೊಮ್ಮೆ ನೀನು ಕೇಳೆ..... || ಪಲ್ಲವಿ ||
ಒಂಟಿಯಾಗಿಹ ನನ್ನ ಸಂಕಟದ ಭಾವಕ್ಕೆ
ಒಂದು ಪದದುತ್ತರವ ನೀನೆ ಹೇಳೆ || ಅನು ಪಲ್ಲವಿ ||


ಹಿರಿಯರೊತ್ತಾಯದಲಿ ನೀನು ತವರಲ್ಲುಳಿದೆ
ನಮ್ಮ ಮನೆ ನನ್ನನ್ನು ಕರೆದೆಳೆಯಿತು ||
ಹೆಚ್ಚು ದಿನ ಉಳಿದರೇ ನನ ಗೌರವಕೆ ಕುಂದು
ಎಂದು ನನ ಒಳಮನಸು ಎಚ್ಚರಿಸಿತು || ೧ ||


ನಗುವಿಲ್ಲ ಮುನಿಸಿಲ್ಲ ಕೈಬಳೆಯ ದನಿಯಿಲ್ಲ
ಜೀವ ತುಂಬುವರಿಲ್ಲ ನನಕವನಕೆ ||
ನೀನು ಇಲ್ಲದ ಮನೆಯ ಮನೆಯೆಂದು ಹೇಳುವರೆ ?
ಜೀವ ಚೈತನ್ಯವೇ ಇಲ್ಲವಿದಕೆ || ೨ ||


ಒಲೆ ಮೇಲೆ ಹಾಲಿಟ್ಟು ಬೇರೆ ಕೆಲಸಕೆ ಹೋದೆ
ಹಾಲು ಬತ್ತಿದ ಬಗ್ಗೆ ಗಮನವಿಲ್ಲ ||
ನನ್ನಡುಗೆಗಳಿಗೆಲ್ಲ ಯಾಕೊ ರುಚಿಯೇ ಇಲ್ಲ
ಗಂಜಿಯುಣ್ಣದೆ ಬೇರೆ ಮಾರ್ಗವಿಲ್ಲ || ೩ || 


ಮುನಿಸ ತೋರುವ ಮುನ್ನ ನೀನಾಗೆ ಬಂದುಬಿಡು
ಬಾರದಿದ್ದರೆ ನೋಡು ನಿನಗೆ ನಷ್ಟ ||
ನೀ ಬೇಗ ಬಾರದಿರೆ ಅಮ್ಮ ಬರುತಾಳಂತೆ !
ಅವಳಡುಗೆ ರುಚಿಯೂನು ನನಗೆ ಇಷ್ಟ || ೪ ||


- ಸುರೇಖಾ ಭೀಮಗುಳಿ
26/10/2015
ಚಿತ್ರ : ಅಂತರ್ಜಾಲ


ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ...... https://www.facebook.com/surekha.bheemaguli

Saturday, October 24, 2015

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "

" ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ "
*****************************************

ತವರಿನೆಡೆ ಮುಖಮಾಡಿ ನಿಂತಿರುವ ಮನದನ್ನೆ
ನನ್ನ ಮಾತನ್ನೊಮ್ಮೆ ನೀನು ಕೇಳೆ..... || ಪಲ್ಲವಿ ||
ನಿನಮಾತುಗಳನೆಲ್ಲ ಪುರಸ್ಕರಿಪ ನನ್ನನ್ನು
ಬಿಟ್ಟೋಡ್ವ ಮನವೇಕೆ ನೀನೆ ಹೇಳೆ || ಅನು ಪಲ್ಲವಿ ||

ಅಮ್ಮನಾರೈಕೆ ಹೆಳೆ ನೀ ಹೊರಟು ನಿಂತಿರುವೆ
ಒಂಟಿಯಾಗಿಸಿ ನನ್ನ ತೆರಳುತಿರುವೆ ||
ನಿನ್ನ ನಾ ಬಿಟ್ಟಗಲಿ ಇರಲಾರೆ ಅರ್ಧಕ್ಷಣ
ನನಮೇಲೆ ಕರುಣೆಯೇ ನಿನಗಿಲ್ಲವೆ ? || 1 ||

ಅತ್ತೆಮಾವನ ಮುದ್ದು ಕೂಸಲ್ಲವೇ ನೀನು
ಹೋದವಳ ಸುಲಭದಲಿ ಬಿಡುವರೇನು ? ||
ಅಪ್ಪ-ಅಮ್ಮನ ಪ್ರೀತಿ ಮಳೆಯಲ್ಲಿ ಮೀಯುತಲಿ
ಬಡಪಾಯಿ ಗಂಡನನು ಮರೆವೆ ನೀನು || 2 ||

ಒಬ್ಬಳನೆ ತವರಿಗೇ ಕಳಿಸಿಕೊಡಲೀ ಹೇಗೆ ?
ನಾನೂನು ಬರುವೆನೂ ನಿನ್ನ ಜೊತೆಗೆ ||
ಆತಿಥ್ಯದಾಸೆಯಲಿ ಬರುವವನು ನಾನಲ್ಲ
ನಿನ್ನ ಬಳಿ ಇರುವುದೇ ಮುಖ್ಯವೆನಗೆ || 3 ||

ನಿಮ್ಮಪ್ಪ ಅಮ್ಮನನು ಇಲ್ಲಿಗೇ ಕರೆಸಿಕೋ
ಬೇಡವೆನ್ನುವೆನೇನು ನನ್ನ ನಲ್ಲೆ ||
ಅವರ ಸೇವೆಯ ಸಮಯ ನಾನೂನು ಜೊತೆ ಕೊಡುವೆ
ಒಂಟಿಯಾಗಿರಲಿಲ್ಲಿ ನಾನು ಒಲ್ಲೆ || 4 ||

- ಸುರೇಖಾ ಭೀಮಗುಳಿ
24/10/2015
ಚಿತ್ರ ಕೃಪೆ : ಅಂತರ್ಜಾಲ

ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli

Wednesday, October 21, 2015

" ಒಂದು ಬೆಳಗಿನ ಜಾವ....."

" ಒಂದು ಬೆಳಗಿನ ಜಾವ....."
****************************
ಇಬ್ಬನಿ ತಬ್ಬಿದ ಪ್ರಕೃತಿಮಾತೆ
ನೇಸರನುದಯಕೆ ಕಾದಿಹಳೇ ? ||
ರವಿಯನ್ನೆತ್ತುವ ಕಾತುರದಿಂದಲಿ
ತನ್ನಯ ಇರವನೆ ಮರೆತಿಹಳೇ ? || 1 ||

ದಾಸಿವಾಳದಾ ಮೋಹಕ ಮೊಗ್ಗದು
ಹೂವಾಗರಳಲು ಕಾದಿದೆಯೇ ? ||
ಪಾರಿಜಾತದಾ ತಾಜಾ ಹೂಗಳು
ರಂಗವಲ್ಲಿಯಾ ಬಿಡಿಸಿವೆಯೇ ? || 2 ||

ಮುಳ್ಳಿನ ಗಿಡದಲಿ ಘಮಘಮ ಜಾಜೀ
ಸುಮಧುರ ಪರಿಮಳ ಸೂಸಿದೆಯೇ ? ||
ಎಲೆಯಾ ಮೇಲಿನ ಇಬ್ಬನಿ ಹನಿಯೂ
ಮೆಲ್ಲನೆ ಧರೆಗೆ ಜಾರಿದೆಯೇ ? || 3 ||

ನಿದ್ದೆಯ ಬಿಡದಿಹ ಪುಟಾಣಿ ಕಂದನು
ಅಮ್ಮನ ಬಿಡದೇ ತಬ್ಬಿಹನೇ ? ||
ದಿನಕರನಿಗೆ ನಾ ರಜೆಯಕೊಟ್ಟಿಹೆನು
ಏಳದಿರಮ್ಮಾ ಎನುತಿಹನೇ ? || 4 ||

- ಸುರೇಖಾ ಭೀಮಗುಳಿ
21/10/2015
ಚಿತ್ರ : Sumana Rajesh

Tuesday, October 20, 2015

" ಭಾವ ಭಿತ್ತಿಯ ಆಶಯ "

" ಭಾವ ಭಿತ್ತಿಯ ಆಶಯ "
*********************
ಶಾರದಾಂಬೆಯ ಕೃಪೆಯು ಎಂದೆಂದು ನಮಗಿರಲಿ
ಮನದ ಸ್ವಾಸ್ಥ್ಯವನೆಂದು ಕಾಯುವುದಕೆ ||
ಮನದ ಮಾತುಗಳೆಲ್ಲ ಮೃದುವಾಗಿ ಹೊರಬರಲಿ
ಭಾವ ಭಿತ್ತಿಗೆ ಮೆರುಗು ತುಂಬುವುದಕೆ || 1 ||

ಲಕ್ಷ್ಮಿದೇವಿಯ ಕರುಣೆ ನಮ್ಮ ಜೊತೆಯಲ್ಲಿರಲಿ
ಮನದಲ್ಲಿ ಸ್ಥೈರ್ಯವನು ಹೊಂದುವುದಕೆ ||
ಹಣವೊ ಆಭರಣವೋ ಸಮಯಕ್ಕೆ ಒದಗಲೀ
ಸಂಕಟದ ಕಡುಕಷ್ಟ ನೀಗುವುದಕೆ || 2 ||

ದುರ್ಗಮಾತೆಯ ದಯೆಯು ನಮ್ಮ ಪೊರೆಯುತ್ತಿರಲಿ
ಬರುವ ಬವಣೆಯನೆಲ್ಲ ತರಿಯುವುದಕೆ ||
ನಷ್ಟದಲಿ ನಲುಗದೇ ಕಷ್ಟದಲಿ ಕರುಬದೇ
ಸಡ್ಡು ಹೊಡೆಯುವ ಧೈರ್ಯ ಹೊಂದುವುದಕೆ || 3 ||

ಅನ್ನಪೂರ್ಣೆಯ ಮಮತೆ ನಮ್ಮ ಕಾಯುತ್ತಿರಲಿ
ಇಚ್ಚಿಸಿದ ಭಕ್ಷ್ಯಗಳ ಮೆಲ್ಲುವುದಕೆ ||
ಜಠರದಲ್ಲಿಹ ಅಗ್ನಿ ಉಪಶಮನಗೊಳುತಿರಲಿ
ಶಕ್ತಿ ರೂಪದಿ ನಮ್ಮ ಪೊರೆಯುವುದಕೆ || 4 ||

- ಸುರೇಖಾ ಭೀಮಗುಳಿ
19/10/2015

Saturday, October 17, 2015

" ಮನದ ಹಾಡು "


" ಮನದ ಹಾಡು "
****************
ದಟ್ಟ ಕಾಡ ಮೇಲಿನಿಂದ
ಮೇಘದೋಟ ಸಾಗಿದೆ ||
ಹಚ್ಚ ಹಸಿರ ಚಂದದಲ್ಲಿ
ಪ್ರಕೃತಿಯು ನಲಿದಿದೆ || 1 ||


ಗದ್ದೆ ಬಯಲ ಮಧ್ಯದಲ್ಲಿ
ಹೂಟಿ ಕೆಲಸ ನಡೆದಿದೆ ||
ಹೆಂಚು ಹೊದ್ದ ಮನೆಯ ಒಳಗೆ
ಬಿಸಿಯ ಬೋಂಡ ಕಾದಿದೆ || 2 ||


ಇಂಥ ಚಂದದೂರಿನಲ್ಲಿ
ನನಗು ಮನೆಯು ಬೇಕಿದೆ ||
ಹಳ್ಳಿ ಕೆಲಸ ಮಾಡಲಾರೆ
ಎಂದು ತನುವು ಕೂಗಿದೆ || 3 ||


ಸೊಬಗು ಬೇಕು ಹಸಿರು ಬೇಕು
ಶುದ್ಧ ಗಾಳಿ ಬೇಕಿದೆ ||
ಕಷ್ಟ ಬೇಡ ಶ್ರಮವು ಬೇಡ
ಎಂದು ಮನವು ಹಾಡಿದೆ ! || 4 ||


- ಸುರೇಖಾ ಭೀಮಗುಳಿ
15/10/2015
ಚಿತ್ರ : Vijay Nayak (ನಮ್ ನಗರ ಗ್ರೂಪ್)

Wednesday, October 14, 2015

" ಯಕ್ಷರಂಗದಲ್ಲೊಂದು ಸುತ್ತು "



" ಯಕ್ಷರಂಗದಲ್ಲೊಂದು ಸುತ್ತು "
*****************************

ಕೃಷ್ಣ ಹೀಗಿದ್ದನೇ ? ನನಗೇನು ಗೊತ್ತುಂಟು
ಆಗಿದ್ದೆನೇ ದ್ವಾರಕೆಯ ದ್ವಾರಪಾಲ ? ||
ಯಕ್ಷರಂಗದೊಳಗವನ ಮತ್ತೊಮ್ಮೆ ಸೃಜಿಸಿದಿರಿ
ಕಲ್ಪನೆಯ ಲೋಕದಲಿ ವರ್ಷ ಕಾಲ || 1 ||

ಪುರಾಣದ ಪಾತ್ರಗಳು ಕಲ್ಪನೆಯ ಪರದೆಯಲಿ
ಅಚ್ಚನೊತ್ತಿವೆ ಇಂದು ನಿಮ್ಮ ನೋಡಿ ||
ನಿಮ್ಮ ಜಾಗದಲೊಮ್ಮೆ ದೇವರನೆ ಕಲ್ಪಿಸಿದೆ
ಪಾತ್ರಗಳೆ ಮಾಡಿದವು ನನಗೆ ಮೋಡಿ || 2 ||

ಸುದಾಮ - ಕೃಷ್ಣರ ಕಂಡೆ ರಂಗಮಂಟಪದಲ್ಲಿ
ಕೃಷ್ಣ ಕಾರುಣ್ಯವನು ಅನುಭವಿಸಿದೆ ||
ಪಾತ್ರಗಳ ದುಃಖದಲಿ ನಾನು ಕಣ್ಣೀರಾದೆ
ಭಾವಲೋಕದಲವರ ಭೇಟಿಯಾದೆ || 3 ||

- ಸುರೇಖಾ ಭೀಮಗುಳಿ
13/10/2015
ಚಿತ್ರ : ಕೃಷ್ಣ - Paneyala Raviraja
ಸುದಾಮ - Balakrishna Maniyani Movear
ಚಿತ್ರಗ್ರಹಣ : Kongot Radhakrishna Bhat

Friday, October 9, 2015

" ಹೊಸಭಾವ "

" ಹೊಸಭಾವ "
***************

ಮನದಲ್ಲಿ ಭಾವಗಳು ಜಾತ್ರೆ ಹೊರಟಿಹವೇನು ?
ಜಗವೆಲ್ಲ ಹೊಸತೆಂದು ಕಾಣುತಿದೆಯಲ್ಲ ||
ಏಕೆಂಬ ಪ್ರಶ್ನೆಗೆ ಉತ್ತರವು ದೊರೆತಿಲ್ಲ
ಅಂತರಂಗದಿ ಭಾವ ಉಕ್ಕುತಿದೆಯಲ್ಲ || 1 ||

ಕಳೆದು ಹೋಯಿತು ಬಾಲ್ಯ ಏನೊಂದು ತಿಳಿಯದೇ
ಜೀವನದ ಹೋರಾಟ ಯೌವ್ವನದ ದಿನದಿ ||
ಸಂಸಾರ ಜೀವನದಿ ಮಾಗಿಹೆನು ನಾನಿಂದು
ಕಣ್ಬಿಟ್ಟು ಕುಳಿತಿರುವೆ ನಾನು ಈ ಕ್ಷಣದಿ || 2 ||

ವ್ಯವಧಾನವಿರಲಿಲ್ಲ ಯೌವ್ವನದ ದಿನಗಳಲಿ
ಲೋಕದಚ್ಚರಿಗಳನು ಗಮನಿಸಲೆ ಇಲ್ಲ ||
ಇಂದು ತಣ್ಣನೆ ಕುಳಿತು ಆಸ್ವಾದಿಸುತ್ತಿರುವೆ
ಈಗಲಾದರು ಇದಕೆ ಸಮಯ ಬಂತಲ್ಲ ! || 3 ||

ನನ್ನಂತರಂಗವನು ತೆರೆದಿರುವೆ ನಿಮ್ಮೆದುರು
ಹುಚ್ಚು ಆಸೆಗಳಿಲ್ಲ ನನ್ನ ಮನದಲ್ಲಿ ||
ತಲೆಯಲ್ಲಿ ಮುಡಿದಿರುವ ಮಲ್ಲಿಗೆಯ ಪರಿಮಳವ
ಆಘ್ರಾಣಿಸುತ್ತಿರುವೆ ಹೊಸ ಭಾವದಲ್ಲಿ ||

- ಸುರೇಖಾ ಭೀಮಗುಳಿ
09/10/2015
ಚಿತ್ರ: ಅಂತರ್ಜಾಲ

" ಪುಟ್ಟನಿಗೊಂದು ಪದ್ಯ "

" ಪುಟ್ಟನಿಗೊಂದು ಪದ್ಯ "
**********************

ಇದೋ ನೋಡಿ ನಮ್ಮ ಪುಟ್ಟ
ಬಾಲ್ಯಕೆನ್ನ ಒಯ್ದೆ ಬಿಟ್ಟ ||
ನನ್ನ ಮನವ ಸೆಳೆದುಬಿಟ್ಟ
ಹಳೆಯ ನೆನಪ ತಂದು ಕೊಟ್ಟ || 1 ||

ಚಿಕ್ಕ ಸಸಿಯ ಕೈಯಲಿಟ್ಟು
ಪುಟ್ಟ ಗೊರಬ ನೆತ್ತಿಲಿಟ್ಟು ||
ಹೊರಟ ನೋಡಿ ನಮ್ಮ ಪುಟ್ಟು
ನೆಟ್ಟಿ ನೆಡುವ ಗಮನವಿಟ್ಟು || 2 ||

ಮಣ್ಣು ಕೆಸರು ಗಮನವಿಲ್ಲ
ಚಳಿಯು ಮಳೆಯು ಬರಲಿ ಎಲ್ಲ ||
ಕೃತಕತೆಯ ಸೋಂಕು ಇಲ್ಲ
ಮನದಿ ನೋವಿನೆಳೆಯು ಇಲ್ಲ || 3 ||

ಅಂಗಿ ತೊಟ್ಟ ಚಂದ ನೋಡಿ
ಯಾವ ತೂತು ಯಾವ ಗುಂಡಿ ||
ಅಂಗಿ ಮಣ್ಣು ಆಗಲಿ ಬಿಡಿ
ಚಡ್ಡಿ ಒದ್ದೆ ಇರಲಿ ಬಿಡಿ || 4 ||

ಇವನ ನೋಡಿ ಪದ್ಯ ಬರೆವ
ಹುಚ್ಚು ಎನಗೆ ಹತ್ತಿತಲ್ಲ ||
ನಿಮ್ಮ ಬಾಲ್ಯ- ಹಳೆಯ ನೆನಪು
ನನ್ನ ಕೆಲಸವಾಯಿತಲ್ಲ ||

- ಸುರೇಖಾ ಭೀಮಗುಳಿ
09/10/2015
ಚಿತ್ರ : Rathnakar joshi ಅವರ ಟೈಂ ಲೈನ್ ನಿಂದ ಕದ್ದಿದ್ದೇನೆ !

Thursday, October 8, 2015

" ಕಾಮನ ಬಿಲ್ಲು / ಕಮಾನು ಬಿಲ್ಲು ... ಯಾವುದು ಸರಿ ? "

" ಕಾಮನ ಬಿಲ್ಲು / ಕಮಾನು ಬಿಲ್ಲು ... ಯಾವುದು ಸರಿ ? "
**************************************************

ಒಂದು ಕಡೆಯಲಿ ಬಿಸಿಲು ಮತ್ತೊಂದೆಡೆಯಲಿ ಮೋಡ
ನಡುವೆ ಮೂಡಿಹುದೊಂದು ಕಾಮನಾ ಬಿಲ್ಲು ||
ಹಸಿರಾಗಿ ಮೆರೆಯುತಿಹ ಪ್ರಕೃತಿಯ ನೋಡುತ್ತ
ಹೊಸಭಾವ ಉಕ್ಕಿಹುದು ನನ್ನ ಮನದಲ್ಲು || 1 ||

ಸುರಪಾಲ ನಿನ್ನನ್ನು ಕಳೆದುಕೊಂಡಿಹನೇನು ?
ರತಿಯರಸ ಮನ್ಮಥನು ನಿನ್ನೊಡೆಯನೇನು ? ||
ನಿನಹೆಸರ ಮರ್ಮವನು ತಿಳಿಯಪಡಿಸುವೆಯೇನು ?
ಬಾಗಿರುವ ಕಾರಣಕೆ ಅನ್ವರ್ಥವೇನು ? || 2 ||

ಎಳೆಬಿಸಿಲು ಮಳೆಹನಿಯು ಒಂದಾಗಿ ಬೆರೆಯುತಿರೆ
ಮೂಡುವುದು ಬಾನಲ್ಲಿ ಮನ್ಮಥನ ಬಿಲ್ಲು ||
ಸೋಜಿಗದ ದೃಷ್ಟಿಯಲಿ ಪ್ರಕೃತಿಯ ವೀಕ್ಷಿಸಲು
ಸೊಬಗಿನಾ ದೃಶ್ಯಗಳು ಕಾಣ್ವುದೆಲ್ಲೆಲ್ಲು || 3 ||

ಮೇಘರಾಜನು ಬರಲಿ ಭಾನು ಪ್ರಕಾಶಿಸಲಿ
ವಿರಚಿಸಲಿ ಆಗಸದಿ ಧರ್ಮ ಸಭೆಯ ||
ವರುಣ ಹೊಯ್ದಾಡಲೀ ಭೂದೇವಿ ತಣಿಯಲೀ
ಕುಡಿದು ನಲಿಯುವ ನಾವು ಅವಳ ಸುಧೆಯ || 4 ||

- ಸುರೇಖಾ ಭೀಮಗುಳಿ
08/10/2015
ಚಿತ್ರ : Sunil Udupa

Thursday, October 1, 2015

" ಶುಭಾಶಯ................"

" ಶುಭಾಶಯ................"
**************************

ನೀವೆಲ್ಲ ಹೊರಟಿಹಿರಿ ಸಾಹಸದ ಯಾತ್ರೆಗೆ
ನನ್ನ ಮನ ಹೊರಟಿಹುದು ನಿಮ್ಮ ಜೊತೆಗೆ ||
ನಮ್ಮ ಯೋಧರನೊಮ್ಮೆ ಮಾತನಾಡಿಸಿ ಸುಖಿಸಿ
ಅದು ತಾನೆ ಯಾತ್ರೆಯ ಶುಭದ ಘಳಿಗೆ ||

ಇಚ್ಚೆ ಇದ್ದರು ಕೂಡ ಬರಲಾರೆ ನಿಮ್ಮೊಡನೆ
ಇಲ್ಲ ನನ್ನಲಿ ಇಂದು ನಿಮ್ಮ ಹರಯ ||
ಗಡಿಯ ಯೋಧರಿಗೆಲ್ಲ ಹೇಳಿ ಬರಲಾರಿರಾ ?
ನನ್ನ ಕಡೆಯಿಂದೊಂದು ಶುಭ ಆಶಯ ||

ಹೊಸ ಸ್ಫೂರ್ತಿ ತುಂಬಲೀ ನಿಮ್ಮ ಆಂತರ್ಯದಲಿ
ಸಂಪನ್ನಗೊಳ್ಳಲೀ ನಿಮ್ಮ ಬಯಕೆ ||
ತಾಯಿ ಭಾರತಿಯ ರಕ್ಷೆ ನಿಮ್ಮೊಂದಿಗಿರಲೆಂದು
ಇಲ್ಲಿಂದಲೇ ನಿಮಗೆ ನನ್ನ ಹರಕೆ ||

- ಸುರೇಖಾ ಭೀಮಗುಳಿ
01/10/2015
ಚಿತ್ರಕೃಪೆ: Neelesh Jadhav ಅವರ ಟೈಂಲೈನ್ ನಿಂದ.

Wednesday, September 30, 2015

" ಜೋಕಾಲಿಯ ಜೋಗುಳದಲ್ಲಿ "

" ಜೋಕಾಲಿಯ ಜೋಗುಳದಲ್ಲಿ "
****************************
ಬಲಭಾಗದಲ್ಲಿಹುದು ಅಟ್ಟ ಹತ್ತುವ ಏಣಿ
ಅದರಾಚೆ ಮೆರೆಯುತಿದೆ ಮುರದ ಒಲೆಯು ||
ಹಸಿಹುಲ್ಲು ಕಡಿಅಕ್ಕಿ ತೌಡನ್ನು ಬೇಯಿಸಲು
ಅದರಿಂದ ಬರುತಿಹುದು ಮುರದ ಘಮಲು || 1 ||

ಹಿಂದೆ ಭತ್ತದ ಪಣಥ ಎಡಕೆ ಹೊರಗಿನ ದ್ವಾರ
ಮುಂಭಾಗದಲ್ಲಿಹುದು ಹಸು ಕೊಟ್ಟಿಗೆ ||
ಅಟ್ಟದೆತ್ತರದಿಂದ ಇಳಿದು ಬಂದಿದೆ ಹಗ್ಗ
ಅದರೆ ಮೇಲಿಟ್ಟಿಹೆವು ಮರದ ಹಲಗೆ || 2 ||

ಜೋಕಾಲಿಯಲಿ ಕುಳಿತು ಜೀಕುವಾ ಮೋಜೇನು
ಸಮಯ ಕಳೆಯಲು ಇರುವ ಏಕದಾರಿ ||
ಬೇಸರಕು, ಸಂತಸಕು, ಕೋಪದುಪಶಮನಕ್ಕು
ಜೋಕಾಲಿ ಸಹಚರ್ಯ ನಮಗೆ ಹೆದ್ದಾರಿ || 3 ||

ಜೀಕಿದಾ ರಭಸಕ್ಕೆ ಹಗ್ಗ ತಪ್ಪಿತು ಮಣೆಯು
ಭೂತಾಯಿ ಜೊತೆಯಲ್ಲಿ ನನ್ನ ಜೋಡು ||
ಕೆಳ ಜಾರಿ ಬಿದ್ದರೂ 'ಅಯ್ಯೋ' ಎನ್ನುವರಿಲ್ಲ
ನನ್ನ ಸಂತೈಸಿಹುದು ಅಟ್ಟದಾ ಮಾಡು || 4 ||

- ಸುರೇಖಾ ಭೀಮಗುಳಿ
30/09/2015
ಚಿತ್ರಕೃಪೆ : ಅಂತರ್ಜಾಲ

Monday, September 28, 2015

" ನರಕದ ದಾರಿ "

" ನರಕದ ದಾರಿ "
**************
ಹಬ್ಬದ ನೆನಪಲಿ ಖುಷಿಯಲ್ಲೊಮ್ಮೆ
ಹೊರಟೆನು ನಾನು ಬೀದಿಯಲಿ ||
ಕಂಡವು ಕುರಿಗಳು ರಸ್ತೆರಸ್ತೆಯಲಿ
ನಮ್ಮಯ ಬೆಂಗ್ಳೂರ್ ಪೇಟೆಯಲಿ || 1 ||


ಕಡುಬಿನ ಸವಿಯದು ಆರಿಯೆ ಇಲ್ಲವೆ
ವಾರದ ಹಿಂದಿನ ಸಿಹಿಯೂಟ ||
ಹೊಟ್ಟೆಯು ತೊಳೆಸಿತು ಮನ ಕಹಿಯಾಯಿತು
ಕೊಬ್ಬಿದ ಕುರಿಗಳ ಮಾರಾಟ || 2 ||


ಮಾಂಸದ ಅಂಗಡಿ ದರ್ಶನ ಮಾತ್ರದಿ
ಹೊಟ್ಟಯ ಒಳಗೇ ಸಂಕಟವು ||
ಮನೆಯ ಒಳಗಡೆ ಮಾಡಿದರಾಗದೆ
ಬೀದಿಯಲೇಕೆ ಪ್ರದರ್ಶನವು ? || 3 ||


ಸಿಂಹವು ತಿನ್ನದು ಸಸ್ಯಾಹಾರವ
ಎನ್ನುವ ಸತ್ಯದ ಅರಿವುಂಟು ||
ಕೊಲ್ಲುವ ಮೊದಲೇ ಹಿಂಸೆಯ ಕೊಡದಿರಿ
ಎನ್ನುವ ಬೇಡಿಕೆ ನನದುಂಟು || 4 ||


ಕೋಳಿಯ ಒಯ್ವರು ವಸ್ತುವಿನಂದದಿ
ಕಾಲನು ಕಟ್ಟುತ ತಲೆಕೆಳಗೆ ||
ಕರುಣೇ ಎನ್ನುವ ಪದವನೆ ಅರಿಯರೆ ?
ಪಾಪಿಗಳಲ್ಲವೆ ಈ ಧರೆಗೆ ? || 5 ||


ಅಸುರರ ತಿದ್ದಲು ಹರಿಯೇ ಸೋತನು
ಅವನೆದುರು ನಾವ್ ಹುಲುಕಡ್ಡಿ ||
ಮಾಂಸಭಕ್ಷಕರ ತಿದ್ದಿಲಾಗುವುದೇ ?
ತುಂಬಿದೆ ತಲೆಯಲಿ ಬರಿಮಡ್ಡಿ || 6 ||


ಗಿಡವದು ಫಲವನು ಬಿಡುವುದೆ ತಿನ್ನಲು
ಎನ್ನುವ ಸತ್ಯದ ಅರಿವಿಹುದು ||
ಮಾಂಸವ ತಿನ್ನುವ ಅಗತ್ಯ ಇದೆಯೇ ?
ಎನ್ನುವ ಸಮಸ್ಯೆ ಕಾಡಿಹುದು || 7 ||


ಸಸ್ಯಾಹಾರದ ಬೆಲೆಯನು ಅರಿಯಿರಿ
ಸಾತ್ವಿಕ ಗುಣವೂ ಬೆಳೆಯುವುದು ||
ತಾಮಸ ಗುಣವನು ಹೊಂದಿದಿರಾದರೆ
ನರಕದ ದಾರಿಯು ಸೆಳೆಯುವುದು || 8 ||


- ಸುರೇಖಾ ಭೀಮಗುಳಿ
25/09/2015
ಚಿತ್ರಕೃಪೆ : ಅಂತರ್ಜಾಲ

" ಹಬ್ಬಗಳ ನೆನಪು "

" ಹಬ್ಬಗಳ ನೆನಪು "
****************

ಸಂಕ್ರಾಂತಿ ನೆನೆಸಿತು ಸುಗ್ಗಿಯ ಸಂಭ್ರಮ
ಹೊಸಧಾನ್ಯಗಳ ರಾಶಿಯನು ||
ಯುಗಾದಿ ತಂದಿತು ನವೀನ ವರುಷವ
ಬೇವ್ಬೆಲ್ಲದ ಸಿಹಿ ಕಹಿಯನ್ನು || 1 ||


ದೀಪಾವಳಿಯಾ ಸಂಭ್ರಮ ಬೆಸೆಯಿತು
ಡಂಡಂಗುಟ್ಟುವ ಪಟಾಕಿಯು ||
ಗೌರೀ -ಗಣಪತಿ ಜೊತೆಯಲಿ ಬೆರೆತವು
ಕಡಬೂ ಕಜ್ಜಾಯ ಮೋದಕವು || 2 ||


ಕ್ರಿಸ್ಮಸ್ ಹಬ್ಬವು ಕೇಕನು ನೆನೆಸಿತು
ಚರ್ಚಿನ ದೀಪದ ಸರಮಾಲೆ ||
ಕ್ರಿಸ್ಮಸ್ ಮರವೂ ಕಣ್ಮನ ಸೆಳೆಯಿತು
ಮೇರಿಯಮ್ಮನಾ ಎಳೆಬಾಲೆ || 3 ||


ರಂಜಾನ್ ಹಬ್ಬದ ಸಂಭ್ರಮ ತೋರಿತು
ನೆನೆಸಿತು ಹಗಲಿನ ಉಪವಾಸ ||
ಬಕ್ರೀದ್ ಹಬ್ಬವು ಕಣ್ಮುಂದೆ ತಂದಿತು
ಕೊಬ್ಬಿದ ಮೇಕೆಯ ಹಸಿಮಾಂಸ || 4 ||


- ಸುರೇಖಾ ಭೀಮಗುಳಿ
25/09/2015
ಚಿತ್ರಕೃಪೆ : ಅಂತರ್ಜಾಲ

Wednesday, September 23, 2015

" ಮೊದಲ ಬಾಣಂತನದ ಸೊಬಗು "


" ಮೊದಲ ಬಾಣಂತನದ ಸೊಬಗು "
*********************************

ಮಗುವಿನಾಗಮನದಾ ನಿರೀಕ್ಷೆಯು ನಮಗಿತ್ತು
ಊರಿನಲಿ ಕಾದದ್ದು ನನ್ನತ್ತಿಗೆ ||
'ಬಾಣಂತಿ ಕಾಡ'ವದು ನನಗಾಗಿ ಕಾದಿತ್ತು
ಗಸಗಸೆಯ ಲೇಹವು ಅದರೊಟ್ಟಿಗೆ || 1 ||

ಒಂಟಿ ಮಂಚದ ಮೇಲೆ ನನ್ನ ಬಾಣಂತನವು
ಪುಟ್ಟನಿಗೆ ಕಟ್ಟಿದ್ದು ಸೀರೆ ಜೋಲಿ ||
ಸುತ್ತು ಔಷಧಿ ಅರೆದು ಮಗುವಿಗಿತ್ತಳು ತಾಯಿ
ಅತ್ತಿಗೆಯ ಹೊಟ್ಟೆಯೂ ತಣ್ಣಗಿರಲಿ || 2 ||

ತುಪ್ಪದನ್ನದ ಜೊತೆಗೆ ಸೀಗೆ ಸೊಪ್ಪಿನ ಸಾರು
ನನಗಿಂತ ಇಷ್ಟವದು ನನ್ನವರಿಗೆ ||
ಬಾಣಂತಿ ಯಾರೆಂದು ಅತ್ತಿಗೇ ನಕ್ಕಳೋ
ಸಾರು ಮುಗಿದೇ ಹೋಯ್ತು ಅಷ್ಟೊತ್ತಿಗೆ || 3 ||

ಕಾಳುಜೀರಿಗೆ ಎಣ್ಣೆ ಮೈಗೆ ಮೆತ್ತುವುದಕ್ಕೆ
ಬಚ್ಚಲಿನ ಹಂಡೆಯಲಿ ಬಿಸಿಯ ನೀರಿತ್ತು ||
ಮಿಂದು ಬರುತ್ತಿದಂತೆ ಹೊದ್ದು ಮಲಗುವ ಶಿಕ್ಷೆ
ಮೈ ಚಟ್ಟುತ್ತಿಲ್ಲವೇ ಎಂಬ ಕೊರಗಿತ್ತು || 4 ||

ಮಲೆನಾಡ ಚಳಿಯಲ್ಲಿ ಅರಳಿತೋ ಹೊಸಬಾಲ್ಯ
ಮನಸೆಲ್ಲ ಬೆಂಗ್ಳೂರ ಹಾದಿಯೊಡನೆ ||
ಎಂಬತ್ತು ದಿನದಲೇ ಎದ್ದು ಹೊರಟೇ ಬಿಟ್ಟೆ
ಮದ್ದು ಮಗುವಿನ ಜೊತೆಗೆ ಗಂಡನೊಡನೆ || 5 ||

- ಸುರೇಖಾ ಭೀಮಗುಳಿ
23/09/2015

Saturday, September 19, 2015

" ನಮ್ಮ ಮನೆಯ ಅಟ್ಟ"

" ನಮ್ಮ ಮನೆಯ ಅಟ್ಟ"
**********************

ಮನೆಯ ಮೇಲಿನ ಅಟ್ಟ ಬಿಸಿ-ಮಸಿಯ ಜಾಗವದು
ಹಳೆಪಾತ್ರೆ ಬೇಡದಾ ವಸ್ತುಗಳ ಜಾತ್ರೆ ||
ವರ್ಷಕ್ಕೊಂದಾವರ್ತಿ ಸ್ವಚ್ಚಗೊಳಿಸುವ ತಾಣ
ಮನದಲ್ಲಿ ನೆನಪುಗಳ ತೀರ್ಥಯಾತ್ರೆ || 1 ||

ಉಪ್ಪಿನಾ ಕಾಯಿಯಾ ಭರಣಿಯೂ ಇಹುದಿಲ್ಲಿ
ದೊಡ್ಡ ಮಡಕೆಯಲಿರುವ ಉಪ್ಪಿನೊಡನೆ ||
ಹಣ್ಣು ಮಾಗಲು ಇಡುವ ಬೆಚ್ಚಗಿನ ಜಾಗವಿದು
ಡಬ್ಬಿಗಳು ಕುಳಿತಿಯವು ಹಂಡೆಯೊಡನೆ || 2 ||

ಕೊಟ್ಟೆಗೆಯ ಮೇಲಿನ ಅಟ್ಟದಾ ನೆನಪಿಹುದು
ಧೂಳಿನಾ ಮಧ್ಯದಲಿ ಜ್ಞಾನಭಂಡಾರ ||
ಬೈಹುಲ್ಲ ನಡುವಿನಲಿ ಕದ್ದು ಕುಳಿತಿಹ ಬೆಕ್ಕು
ಮರಿಗಳಾ ಜೊತೆಯಲ್ಲಿ ಪುಟ್ಟ ಸಂಸಾರ || 3 ||

ಹೆಂಚಿನಾ ಮಾಡಿನಲಿ ಗಾಜಿನಾ ಬೆಳಕಿಂಡಿ
ಅದಕೂನು ಮೆತ್ತಿಹುದು ಒಂದಿಷ್ಟು ಧೂಳು ||
ಮಬ್ಬು ಬೆಳಕಲ್ಲಿಯೇ ಓದುವಾ ಹುನ್ನಾರ
ಕುಳಿತಿರಲು ಮೆಲ್ಲುತ್ತ ಹುರಿದ ಕಾಳು || 4 ||

- ಸುರೇಖಾ ಭೀಮಗುಳಿ
19/09/2015
ಚಿತ್ರ :  Lavina D'souza

Saturday, September 12, 2015

" ಬಾವಲಿಯೊಡನೊಂದು ಸಂವಾದ "

" ಬಾವಲಿಯೊಡನೊಂದು ಸಂವಾದ "
****************************

ಬಾವಲಿಯೊಂದು ಹಲಸಿನ ಮರದಲಿ
ತಲೆಕೆಳಗಾಗಿ ನೇಲಿಹುದು ||
ನಮ್ಮನು ಕಂಡು ಹೆದರಿತೊ ಏನೋ
ಭಯದಲಿ ಕಣ್ ಕಣ್ ಬಿಡುತಿಹುದು || 1 ||

ಹೆದರಿಕೆ ಯಾಕೆ ? ನಾಚಿಕೆ ಬೇಕೆ ?
ಹೇಳುವೆಯೇನು ನಿನ್ನ ಕಥೆ ? ||
ವಿಷಯ ತಿಳಿಯುವ ಆಸೆಯು ನನಗಿದೆ
ಅರಿಕೆ ಮಾಡಿಕೊ ನಿನ್ನ ವ್ಯಥೆ || 2 ||

’ಪುಟ್ಟ ಸಸ್ತನಿ’ ನಿನ್ನದೇ ಬಿರುದು
ಗೊತ್ತೇ ನಿನಗೆ ಬಾವಲಿಯೆ ? ||
ನಿಶಾಚರಿ ಎಂಬ ಕೀರ್ತಿಯು ನಿನಗಿದೆ
ಜೈ ಜೈ ನಿರ್ಭಯ ಸಾಹಸಿಯೆ || 3 ||

ಪಾಳು ಮನೆಗಳು ನಿನ್ನದೇ ಠಾವು
ಎನ್ನುವ ವಿಷಯ ಅರಿತಿರುವೆ ||
ಮಾಡಿನ ಪಕಾಸಿಗೆ ನೇತಾಡುತ್ತ
ಮಗುವನು ಹೇಗೆ ಸುಧಾರಿಸುವೆ ? || 4 ||

- ಸುರೇಖಾ ಭೀಮಗುಳಿ
12/09/2015
ಚಿತ್ರ : ಸುಮಂತ ಭೀಮಗುಳಿ

Friday, September 11, 2015

" ಕಂದಗೊಂದು ಬುಟ್ಟಿ "

" ಕಂದಗೊಂದು ಬುಟ್ಟಿ "
******************

ತೊಟ್ಟಿಲಲ್ಲಿ ನಗುವ ಮಗುವ
ಬುಟ್ಟಿಯಲ್ಲಿ ಹಾಕಿಕೊಂಡು
ಒಟ್ಟು ನೂಕಿ ಒಯ್ವರಲ್ಲ
ಕೆಟ್ಟ ಬೇಸರ || 1 ||

ಎತ್ತಿಕೊಳಿರಿ ಎನಲು ಬರದ
ಹೊತ್ತುಕೊಳದೆ ಮುದ್ದು ಮಗುವ
ವಸ್ತುವಂತೆ ಕಾಣ್ವರಲ್ಲ
ಸುಸ್ತು ಸಂಕಟ || 2 ||

ಕಂದಗೊಂದು ಬುಟ್ಟಿಯೇಕೆ ?
ಚಂದವಾಗಿ ಎತ್ತಿಕೊಂಡು
ಮಂದಗಮನವಾದರೂನು
ಅಂದವಲ್ಲವೇ ? || 3 ||

ಎಳವೆಯಲ್ಲಿ ಎತ್ತಬೇಕು
ಬೆಳೆದ ಮಗುವು ಕೇಳ್ವುದೇನು
ಕಳೆದ ಬಾಲ್ಯ ಮತ್ತೆ ಮತ್ತೆ
ಮೊಳೆಯಲಾರದು  || 4 ||

ಪುಟ್ಟ ಮಗು ನಿಮದೆ ಸಿರಿಯು
ಬೆಟ್ಟದಷ್ಟು ಭಾರವಿಲ್ಲ
ಉಟ್ಟಬಟ್ಟೆ ನೆರಿಗೆ ಬಿದ್ದ
ರಷ್ಟು ಚಿಂತೆಯೇ ? || 5 ||

ಕಂದನನ್ನು ಎತ್ತಿಕೊಳಿರಿ
ಹೃದಯ ಹೃದಯ ಬೆಸೆದುಕೊಳಿರಿ
ಇಂದು ಖುಷಿಯು, ನಾಳೆ ಹೇಗೊ
ಮಂದಮತಿಗಳೇ || 6 ||

- ಸುರೇಖಾ ಭೀಮಗುಳಿ
11/09/2015
ಚಿತ್ರಕೃಪೆ : ಅಂತರ್ಜಾಲ

Monday, September 7, 2015

"ಗೋಕುಲದ ದಾರಿಯಲ್ಲಿ"

"ಗೋಕುಲದ ದಾರಿಯಲ್ಲಿ"
********************

ಗೋಕುಲದ ದಾರಿಯಲಿ ಗೋಧೂಳಿ ಸಮಯದಲಿ
ಗೋವು- ಗೆಳೆಯರ ಜೊತೆಗೆ ಕೃಷ್ಣನೊಡನೆ ||
ಗೋವಿಂದನಾ ಕೊಳಲ ನಾದದಲಿ ಮೈಮರೆತು
ಗಾನ ವೈಭವ ಸವಿವ ಸಕಲರೊಡನೆ || 1 ||

ಯಮುನೆಯಾ ತಟದಿಂದ ಬೀಸಿತದೊ ತಂಗಾಳಿ
ಬೆರೆಯುತಿದೆ ಮುರಲಿಯಾ ಇಂಪಿನೊಡನೆ ||
ಮುದ್ದು ಮೊಗದಾ ಹಸುವು "ಅಂಬಾ" ಎನ್ನುತ್ತಲಿದೆ
ಗಾಯನದಿ ಜೊತೆಗೊಡುತ ಕೊಳಲಿನೊಡನೆ || 2 ||

ಚಂಪಕದ ಪರಿಮಳವು ಪಸರಿಸಿದೆ ವನವನ್ನು
ನಾಸಿಕದ ಹೊಳ್ಳೆಗಳು ಅರಳವೇನು ? ||
ಸೂರಗೆಯ ಕಂಪದೋ ತಾ ತೇಲಿ ಬರುತಲಿದೆ
ಮೈಯ ಮರೆಸುವ ಸಂಚು ಇರುವುದೇನು ? || 3 ||

ಸಂಜೆಗತ್ತಲ ಹೊತ್ತು ಬಹುಬೇಗ ಬಂದಿಹುದು
ಯಾಕಿಷ್ಟು ಅವಸರವೋ ನೇಸರನಿಗೆ ? ||
ಅರೆಗಳಿಗೆ ತಾಳಿಕೋ ನಮ್ಮೊಡನೆ ನಲಿದಾಡು
ಗೋಪಾಲನಾ ಸಖ್ಯವಿರುವವರೆಗೆ ! || 4 ||

- ಸುರೇಖಾ ಭೀಮಗುಳಿ
05/09/2015
ಚಿತ್ರಕೃಪೆ : ಅಂತರ್ಜಾಲ

Wednesday, August 26, 2015

" ನನ್ನೂರ ರೈತ "

" ನನ್ನೂರ ರೈತ "
**************

ಕಂಬಳಿಯ ಕೊಪ್ಪೆಯಲಿ ಶೋಭಿಸಿಹ ರೈತನೇ
ಹುಟ್ಟೂರ ಪ್ರತಿನಿಧಿ ನನಗಾದೆ ನೀನು ||
ಹಗ್ಗದಾ ಸುರುಳಿಯನು ತಲೆಯಲ್ಲಿ ಸುತ್ತಿರುವೆ
ಹಸಿಹುಲ್ಲು ತರಲೆಂದು ಹೊರಟಿರುವೆಯೇನು ? || 1 ||

ನೆರೆದಿರುವ ಗಡ್ಡವದು ಎಷ್ಟೊಂದು ಸ್ಪಷ್ಟವಿದೆ
ಅನುಭವದ ಜೀವನದಿ ನೀನಾದೆ ಹಣ್ಣು ||
ಆಧುನಿಕತೆಯ ಹಂಗು ನಿನಗಿಲ್ಲ ಇಂದಿಗೂ
ಶುದ್ಧತೆಯ ಬದುಕನ್ನು ಸೂಸುತಿವೆ ಕಣ್ಣು || 2 ||

ಶುದ್ಧವಾಗಿಯೆ ಹೀಗೆ ಇದ್ದುಬಿಡು ಮುಂದೆ ಸಹ
ಮೆಚ್ಚುಲೀ ಭಗವಂತ ನಿನ್ನ ಬದುಕ ||
ಹುಚ್ಚು ಪ್ರಪಂಚವಿದು ಅಮಿಷಗಳನೊಡ್ಡುವುದು
ಅದರಲ್ಲಿ ಸಿಲುಕಿಹೆವು ಎಂಥ ಕುಹಕ ! || 3 ||

- ಸುರೇಖಾ ಭೀಮಗುಳಿ
26/08/2015
ಚಿತ್ರ ಕೃಪೆ : Sahana DN

Tuesday, August 11, 2015

" ಸುರಿಯುತಿದೆ ಜಲಧಾರೆ ....."


" ಸುರಿಯುತಿದೆ ಜಲಧಾರೆ ....."
*******************************

ಸುರಿಯುತಿದೆ ಜಲಧಾರೆ ಜಗದ ಕೊಳೆಯನು ತೊಳೆದು
ಭೋರ್ಗರೆವ ಸಡಗರದಿ ಉನ್ಮತ್ತವಾಗಿ ||
ಬಾಳೆಬರೆ ಘಾಟಿಯಾ ಪಯಣಿಗರ ಗಮನವನು
ತನ್ನತ್ತ ಸೆಳೆಯುತಿದೆ ತಾನುತಾನಾಗಿ || 1 ||

ಪ್ರಕೃತಿಯ ಸೊಬಗೇನು ಮೆರೆಯುವಾ ಪರಿಯೇನು 
ಸ್ತಬ್ಧವಾಗ್ವುದು ಒಮ್ಮೆ ಭಾವ ಜಾತ್ರೆ ||
ಅತಿಕ್ರಮಿಸಲು ಹೋಗಿ ಕಾಲು ಜಾರಿದರೊಮ್ಮೆ
ಆ ಕ್ಷಣದಿ ಮುಗಿಯುವುದು ಜೀವ ಯಾತ್ರೆ || 2 ||

ಸುರಲೋಕದಾ ಗಂಗೆ ಧುಮ್ಮಿಕ್ಕುತಿಹಳೇನು
ಭುವಿಯ ಮಕ್ಕಳ ಪಾಪ ತೊಳೆಯಲೆಂದು ||
ಅವಳಿಚ್ಚೆ ಫಲಿಸಿತೇ ? ನನಗೇನು ತಿಳಿಯದು
ನನಗಂತು ಮನಕ್ಲೇಶ ಕಳೆಯಿತಿಂದು || 3 ||

ತನಗೆ ಬೇಕಾದಂತೆ ಮಾತೆ ವಿಜೃಂಭಿಸಲಿ
ವೈಭವವ ನೋಡಿ ಮನ ತಣಿದುಬಿಡಲಿ ||
ಸೃಷ್ಟಿ ಒಡ್ಡೋಲಗದಿ ಬರಿ ಪ್ರೇಕ್ಷಕರು ನಾವು
ಸಂಭ್ರಮದ ವೀಕ್ಷಣೆಯು ನಮದಾಗಲಿ || 4 ||

- ಸುರೇಖಾ ಭಟ್ ಭೀಮಗುಳಿ
11/08/2015
ಚಿತ್ರ ಕೃಪೆ : Sunil Udupa

Saturday, August 8, 2015

" ಅತಿಥಿ "

ಇಂದು ಬೆಳಗಿನ ಹೊತ್ತು ನಮ್ಮ ಮನೆ ಅಂಗಳಕೆ
ಶುಕವೊಂದು ಬಂದಿತ್ತು ಅತಿಥಿಯಾಗಿ ||
ಇಂಚರದ ಶಬ್ದವನು ಗ್ರಹಿಸಿ ಮಗ ಓಡಿದನು
ಶುಕದ ಚಿತ್ರವ ತೆಗೆವ ಇಚ್ಚೆಯಾಗಿ || 1 ||

ರೂಪದರ್ಶಿಯ ತೆರದಿ ಬಗೆಬಗೆಯ ಚಹರೆಗಳ
ಕೊಟ್ಟು ಕುಳಿತಿತ್ತು ಶುಕ ಮೋಡಿ ಮಾಡಿ ||
ತೃಪ್ತಿಯಾಗುವವರೆಗೆ ತೆಗೆದುಕೋ ಪಟಗಳನು
ಎಂದುಲಿಯಿತೇ ಮಗನೆ ನಿನ್ನ ನೋಡಿ ? || 2 ||

ರತ್ನಗಂಧಿಗೆ ಬೀಜ ಮೆಲ್ಲುವುದ ನೋಡುತಲಿ
ಬೆರಗಾಗಿ ನಿಂತೆನು ಮೋಹದಲ್ಲಿ ||
ಕುತ್ತಿಗೆಯ ಬಳಸಿದಾ ಬಣ್ಣದಾ ಪಟ್ಟಿಯನು 
ಗಮನಿಸಿದೆ ನಾನಿಂದು ಸೂಕ್ಷ್ಮದಲ್ಲಿ || 3 ||

ಸೃಷ್ಟಿಯನು ಕೊಟ್ಟಿಹನು ದೃಷ್ಟಿಯನು ಕೊಟ್ಟಿಹನು
ಆ ದೇವನಾ ಕರುಣೆ ಎಷ್ಟಲ್ಲವೇ ? ||
ಸೃಷ್ಟಿಯನು ಸವಿಯುವಾ ಹೂ ಮನಸ ಕೊಟ್ಟಿಹನು
ಇದಕಿಂತ ಹೆಚ್ಚೇನು ಬೇಕಲ್ಲವೇ ? || 4 ||

- ಸುರೇಖಾ ಭಟ್ ಭೀಮಗುಳಿ
07/08/2015
ಚಿತ್ರ : ಸುಮಂತ್ ಭೀಮಗುಳಿ

"ಸ್ನೇಹಿತರ ದಿನ ನಮಗೆ ಬೇಕೇನು ?"

ಅಪ್ಪನಿಗೆ ಒಂದುದಿನ- ಅಮ್ಮನಿಗೆ ಒಂದುದಿನ
ಸ್ನೇಹತರಿಗೊಂದು ದಿನ ನಮಗೆ ಬೇಕೇನು ? || 
ಕೂರುವುದಕ್ಕೊಂದು ದಿನ- ನಿಲ್ಲುವುದಕ್ಕೊಂದು ದಿನ
ನಿದ್ರಿಸುವುಕ್ಕೊಂದು ದಿನ ಇರುವುದೇನು ? || 1 ||

ಪ್ರೀತಿಗೇ ಒಂದುದಿನ- ದ್ವೇಷಕ್ಕೆ ಒಂದುದಿನ
ಕೃತಕವೆನ್ನಿಸದೇನು ಈ ದಿನಚರಿ ? || 
ನೀತಿಗೇ ಒಂದುದಿನ- ಶಾಂತಿಗೇ ಒಂದುದಿನ
ಸತ್ಯಕ್ಕೆ ಒಂದುದಿನ ಮೀಸಲಿಡಿರಿ || 2 ||

ಬಾಲ್ಯದ ಕಾಲದಲಿ ಬಳಪ ಕೊಡುವವರನ್ನೆ
ಸ್ನೇಹಿತರಿವರೆಂದು ನಾನು ನಂಬಿದ್ದೆ ||
ಪ್ರೌಢಾವಸ್ಥೆ ಸಮಯ ಟಿಪ್ಪಣಿಯ ಪುಸ್ತಕದ
ವಿನಿಮಯದ ಸ್ನೇಹಿತರ ನಾನು ಹೊಂದಿದ್ದೆ || 3 ||

ಕೈಚಾಚಿದವರನ್ನು ದೂರಕಳುಹಲು ಇಲ್ಲ
ಸ್ನೇಹಕ್ಕೆ ಹಾತೊರೆದ ಹೊಸಮಂದಿಗೆ ||
ಕೈಬೀಸಿ ಹೊರಟವರ ತಡೆದು ನಿಲ್ಲಿಸಲಿಲ್ಲ
ಬೀಳ್ಕೊಟ್ಟೆ ಅವರನ್ನು ಅವರಿಚ್ಚೆಗೆ || 4 ||

ಓಘದ ಜೀವನದಿ ತುಂಬಿತೋ ತುಳುಕಿತೋ
ನಿಲುಕಲೇ ಇಲ್ಲವೇ ಮಾತು ಕತೆಗೆ || 
ಬಳಪ ಕೊಟ್ಟವರಿಂದ ಬಾಳು ಕೊಟ್ಟವರವರೆಗೆ
ಎಲ್ಲರೂ ಇಹರಿಲ್ಲಿ ನನ್ನ ಜೊತೆಗೆ || 5 ||

- ಸುರೇಖಾ ಭಟ್ ಭೀಮಗುಳಿ
೦3/08/2015
ಚಿತ್ರಕೃಪೆ : ಇಂಟರ್ ನೆಟ್

Sunday, August 2, 2015

" ಶ್ರಮಜೀವಿ "

ಸೆಗಣಿ ಉಂಡೆಯ ಮಾಡಿ ಹೊತ್ತೊಯ್ವೆ ಎಲ್ಲಿಗೇ ?
ಮಳೆನೀರು ಬಿದ್ದು ಅದು ಕರಗದೇನು ? ||
ಹೊತ್ತೊಯ್ದು ನೀನದನು ಇಡುವೆಯಾದರು ಎಲ್ಲಿ ?
ಕಲ್ಲಿನಾ ಅಡಿಯಲ್ಲಿ ಬಚ್ಚಿಡುವೆಯೇನು ? || 1 ||

ನೀವಿಬ್ಬರೊಡಗೂಡಿ ಮಾಡ್ವ ಸಾಹಸವೆಷ್ಟು ?
ನಿಮ್ಮ ಶ್ರಮವನು ಕಂಡು ಬೆರಗಾದೆನು || 
ನಿಮಗಿಂತ ಹತ್ತುಪಟ್ಟಿರಬಹುದೆ ನಿಮ್ಮ ಹೊರೆ ?
ಹೇಳಿಕೊಟ್ಟವರಾರು ಇಂಥ ಜಾಣ್ಮೆಯನು ? || 2 ||

ಪ್ರಕೃತಿಯ ಸೃಷ್ಟಿಯಲಿ ಮೇಲಿಲ್ಲ ಕೀಳಿಲ್ಲ
ಅವರವರ ದೃಷ್ಟಿಯಲಿ ಶ್ರೇಷ್ಠ ತಾನೆ ? || 
ಜೀವನದ ಪ್ರೀತಿಯಲಿ ಮೀರಿಸಿಹೆ ಎಲ್ಲರನು
"ಶ್ರಮಜೀವಿ" ಬಿರುದನ್ನು ಒಪ್ಪುತ್ತಿ ತಾನೆ ? || 3 ||

- ಸುರೇಖಾ ಭಟ್ ಭೀಮಗುಳಿ
30/07/2015
ಚಿತ್ರ ಕೃಪೆ : ಸುಮಂತ ಭೀಮಗುಳಿ

Tuesday, July 28, 2015

" ಓ ಕಲಾಂ ... ನಿನಗೆ ಸಲಾಂ..... ರಾಷ್ಟ್ರಪುರುಷನಿಗೊಂದು ನಮನ "

ನೀ ಏರಿದೆತ್ತರವ ಕಂಡು ಬೆರಗಾಗಿಹೆನು
ಸಲ್ಲಿಸುವೆ ನಿನ್ನಲ್ಲಿ ನನ್ನ ನಮನ ||
ಭಾರತಾಂಬೆಯ ಮಡಿಲ ಹೆಮ್ಮೆಯಾ ಪುತ್ರನೇ
ಶ್ರದ್ಧಾಂಜಲಿಯು ನಿನಗೆ ನನ್ನ ಕವನ || 1 ||

ಕನಸ ಕಾಣುವುದನ್ನು ಹೇಳಿಕೊಟ್ಟಿಹೆ ನೀನು
’ವಿಶ್ವಗುರು’ ಕನಸಿಹುದು ನನ್ನ ಮನದೆ ||
ಭಾರತಾಂಬೆಯು ಇನ್ನು ತಲೆಎತ್ತಿ ನಿಲ್ಲುವಳು
ಪೂರ್ವದಲೆ ನೀನೇಕೆ ನಿರ್ಗಮಿಸಿದೆ ?  || 2 ||

ಗುರುವನಾರಾಧಿಸುತ ಗುರು ಸ್ಥಾನಕ್ಕೇರಿದೆ
ಎಲ್ಲರಾ ಪ್ರೀತಿಯನು ನೀ ಗಳಿಸಿದೆ ||
ಪ್ರತಿಭೆಗಳನರಳಿಸುತ ನಮಗೆ ಮಾದರಿಯಾದೆ
ವಿಜ್ಞಾನ ಪತಾಕೆಯನು ಎತ್ತಿ ಹಿಡಿದೆ || 3 ||

ಮುಗ್ದತೆಗೆ ಇನ್ನೊಂದು ಹೆಸರಾಗಿ ಕಾಣಿಸಿದೆ
ಸರಳತೆಗೆ ರೂಪಕವೆ ನೀನಾಗಿ ಹೋದೆ ||
ತಂತ್ರಜ್ಞಾನದ ಜೊತೆಗೆ ಸಂಸಾರವನು ನಡೆಸಿ
ದೇಶದುದ್ಧಾರಕ್ಕೆ ನಿನ್ನನರ್ಪಿಸಿದೆ || 4 ||

ನಿನ್ನ ಪಾಲಿನ ಕೆಲಸ ಚಂದದಲಿ ನೀ ಮಾಡಿ
ಸಾರ್ಥಕ್ಯಗೊಳಿಸಿದೆ ನಿನಜೀವನ ||
ಪುಣ್ಯಗರ್ಭೆಯು ತಾಯಿ ನನ್ನ ಭಾರತಮಾತೆ
ಮತ್ತೊಮ್ಮೆ ಆಗಲೀ ನಿನ್ನ ಜನನ || 5 ||

- ಸುರೇಖಾ ಭಟ್ ಭೀಮಗುಳಿ
28/07/2015
ಚಿತ್ರಕೃಪೆ : ಇಂಟರ್ ನೆಟ್

Tuesday, July 21, 2015

" ವರುಣದೇವನಿಗೊಂದು ಸಲಹೆ "


ಕಾರ್ಮೋಡ ಮುಸುಕಿತೇ ಮಲೆನಾಡಿನ ಪರಿಸರವ ?
ಹೊರನೋಟವೆಲ್ಲವೂ ಮಸುಕು ಮಸುಕು ||
ಮಳೆರಾಯ ಆವರಿಸಿ ಬಿಗಿದಪ್ಪಿ ಕುಳಿತಿಹನೆ ?
ಸಂಕಟಕೆ ಸಿಕ್ಕಿದೆಯೆ ನಿಮ್ಮ ಬದುಕು ? || 1 ||

ಮಳೆಧಾರೆ ಸುರಿಯುತಿರೆ ರವಿಯು ಮುಷ್ಕರ ಹೂಡೆ
ಆಯ್ತು ಜನ ಜೀವನವು ಅಸ್ತವ್ಯಸ್ತ |
ನಾಲ್ಕು ದಿನ ಕಳೆಯಲಿ - ಹದಗೊಳಲಿ ಪರಿಸ್ಥಿತಿ
ಮಲೆನಾಡ ಜೀವನವೆ ಅತಿ ಪ್ರಶಸ್ತ ! || 2 ||

ಮಳೆಗಾಗಿ ಪರಿತಪಿಸಿ ಕಂಗಾಲು ಆಗಿಹರು
ಬಯಲುಸೀಮೆಯ ಜನರು ಗೊತ್ತೆ ಸ್ವಾಮಿ ? |
ಮಳೆಯಿಲ್ಲ ಬೆಳೆಯಿಲ್ಲ ನೆಲದಲ್ಲಿ ತಂಪಿಲ್ಲ
ಒಣಗಿ ನಿಂತಿಹುದಲ್ಲ ಅವರ ಭೂಮಿ || 3 ||

ಶುದ್ಧ ಗಾಳಿಯ ಹರವು - ಸ್ವಚ್ಛ ನೀರಿನ ಸೆಳವು
ಪ್ರಕೃತಿಯ ಕೃಪೆಯಿಹುದು ಮಲೆನಾಡಿನಲ್ಲಿ ||
ವರುಣದೇವನಿಗೊಂದು ಸಲಹೆಯನು ಕೊಟ್ಟುಬಿಡಿ 
ಸುರಿಯಬಾರದೆ ಬಯಲು ಸೀಮೆಯಲ್ಲಿ ? || 4 ||

- ಸುರೇಖಾ ಭಟ್ ಭೀಮಗುಳಿ
21/07/2015

Friday, July 17, 2015

"ಶುಕ ನೀಡಿದ ಸುಖ"

ರತ್ನಗಂಧಿಗೆ ಗಿಡವು ಮರವಾಗಿ ಶೋಭಿಸಿದೆ
ನಮ್ಮ ಮನೆಯಾ ಎದುರು ಮಣ್ಣಿನಲ್ಲಿ ||
ಕಡಿದೆನಾದರೆ ಅದು ಮತ್ತಷ್ಟು ಚಿಗುರುವುದು
ಆದರೂ ನಾ ಕಡಿಯೆ ಕತ್ತಿಯಲ್ಲಿ || 1 ||

ರತ್ನಗಂಧಿಗೆ ಗಿಡವು ನನ್ನ ಕರೆದುಲಿಯಿತದೊ
ನಿನ್ನ ಪ್ರೀತಿಯ ಗಿಡವು ನಾನುತಾನೆ ? ||
ಕಾಯಿ ಬಿಟ್ಟೆನು ಎಂದು ಕಡಿಯದಿರು ನನ್ನನ್ನು
ಶುಕನೊಲುಮೆಯೂ ನನಗೆ ಪೂಜೆತಾನೆ ? || 2 ||

ದೇವರಾರಾಧನೆಗೆ ಹೂವನೀಯುವುದು ಗಿಡ
ಹರೆಗಳಲಿ ಕಾಯ್ಬಿಟ್ಟು ನಿಂತಿರುವುದು || 
ತನ್ನ ಬೀಜವ ಮೆಲಲು ಶುಕರಾಯ ಬರಬಹುದು
ಎಂಬ ಆಸೆಯನಿಟ್ಟು ಕಾದಿರುವುದು || 3 ||

ಶುಕವೊಂದು ಬಂದಿತ್ತು ಬೀಜವನು ಮೆಲ್ಲಿತ್ತು  
ನನಗಿಡದ ಕಾಯುವಿಕೆ ಫಲ ನೀಡಿತು ||
ರತ್ನಗಂಧಿಗೆ ಮನದ ಬಯಕೆ ಈಡೇರಿತದೊ
ಆ ದೃಶ್ಯ ನನಮನಕೆ ಸುಖ ನೀಡಿತು || 4 ||

- ಸುರೇಖಾ ಭಟ್ ಭೀಮಗುಳಿ
18/07/2015
ಚಿತ್ರ :ಸುಮಂತ ಭೀಮಗುಳಿ

Saturday, July 4, 2015

"ತಿರುವು"

ಪಯಣದಲಿ ತಿರುವುಗಳು ಸಹಜವೋ ಓ ಮನುಜ
ಜಾಗ್ರತೆಯ ಜೊತೆಯಲ್ಲಿ ಮುಂದೆ ಸಾಗು ||
ಸುತ್ತಮುತ್ತಲು ಮಂಜು ಕವಿದು ಕುಳಿತಿಹುದಿಲ್ಲಿ
ದೈವದಾ ಲೀಲೆಯಿದು ತಲೆಯ ಬಾಗು || 1 ||

ಪ್ರಕೃತಿಯ ಸೊಗವನ್ನು ಒಂದುಕ್ಷಣ ಸವಿದುಬಿಡು
ತಡೆಹಾಕು ನಿನ್ನಯಾ ಬಿರು ಓಟಕೆ ||
ಬೇಕು ಎಂದರು ನಾಳೆ ದೊರಕದಿದು ಇನ್ನೊಮ್ಮೆ 
ಉಣಿಸಿಬಿಡು ಹಬ್ಬವನು ನಿನ್ನ ನೋಟಕೆ || 2 ||

ಸಸ್ಯಶ್ಯಾಮಲೆಗಿಂದು ಇಬ್ಬನಿಯ ಮಜ್ಜನಾ
ನೇಸರನ ಕಿರಣಗಳ ಗಂಧ -ಧೂಪ ||
ಮಿಂದು ಮಡಿಯುಟ್ಟು ಶುದ್ಧಳಾದಳು ತಾಯಿ
ತುಂಬಿಕೋ ಮನದಲ್ಲಿ ಅವಳ ರೂಪ || 3 ||

- ಸುರೇಖಾ ಭಟ್ ಭೀಮಗುಳಿ
04/07/2015
ಚಿತ್ರಕೃಪೆ : Vishwas AV - "ನಮ್ ನಗರ" ಗ್ರೂಪ್

Friday, July 3, 2015

" ಭುವನೇಶ್ವರಿ "


ನನ್ನ ಮನದಂಗಳದಿ ಬೆಳೆದಿರುವ ಪುಷ್ಪಗಳ
ಅರ್ಪಿಸಲು ಕಾದಿರುವೆ ಹೃದಯೇಶ್ವರಿ ||
ಜಾಜಿ ಸಂಪಿಗೆ ಕಮಲ ಮಲ್ಲಿಗೆಯ ದಂಡೆಗಳ
ಸ್ವೀಕರಿಸು ಬಾ ತಾಯಿ ಭುವನೇಶ್ವರಿ || 1 ||


ನಾ ಬರೆದ ಕವನಗಳು ಬರಿಬಿಡಿಯ ಹೂವುಗಳು

ಭಾವ ಲೋಕದಲಿ ವಿಹರಿಸಿದ ಪರಿಣಾಮ ||
ಪರಿಪರಿಯ ಪರಿಮಳದ ಬಗೆಬಗೆಯ ಬಣ್ಣಗಳು 
ಅರ್ಪಿಸುವೆ ನಿನ್ನಡಿಗೆ ಮಾಡಿ ಪ್ರಣಾಮ || 2 ||


"ಪ್ರವಾಸ - ಪ್ರಯಾಸ" ನಿಜವಾದ ಕಥನಗಳು

ನಾ ಪಡೆದ ಅನುಭವದ ಹೊನ್ನ ಮೂಟೆ ||
"ಸ್ವಗತಗಳ ಸರಮಾಲೆ" ಪುರಾಣದ ಪಾತ್ರಗಳು
ಪೂರ್ವಜರ ಜೊತೆಯಲ್ಲಿ ನನ್ನ ಹರಟೆ || 3 ||


ಲಘು ಹಾಸ್ಯ ಬರಹಗಳು ಕಲ್ಪನೆಯ ಮಿಶ್ರಬೆಳೆ

ಹಳೆನೆನಪು- ಹೊಸಹುರುಪು- ಮೊಗೆದುಕೊಂಡಷ್ಟು ||
ಹಸಿಸುಳ್ಳು- ಕಟ್ಟುಕತೆ- ಆಮೋದ- ಪ್ರಮೋದ
ಓದುಗರ ಮನವನ್ನು ಸೆಳೆದುಬಿಡಲಿಷ್ಟು || 4 || 


"ಸ್ವಗತಗಳ ಸರಮಾಲೆ" ಕೊರಳಲ್ಲಿನಾ ಹಾರ

ಕವಿತೆಗಳ ಬಿಡಿ ಹೂವು ಪಾದಕಾದೀತೇ ? ||
ಲಘುಹಾಸ್ಯ ಬರಹಗಳು ಕೇಶಕ್ಕೆ ಅಲಂಕಾರ
ಅನುಭವದ ಕಥನಗಳು ನಿನ್ನಿಚ್ಚೆಯಂತೆ || 5 ||

- ಸುರೇಖಾ ಭೀಮಗುಳಿ

04/07/2015
ಚಿತ್ರಕೃಪೆ : ಇಂಟರ್ ನೆಟ್

Thursday, June 25, 2015

ಬಿರುಮಳೆ


ತೀರ್ಥಹಳ್ಳಿ - ಹೊಸನಗರದಲ್ಲಿ ಖಂಡಾಬಟ್ಟೇ (ಭಯಂಕರ) ಗಾಳಿ - ಮಳೆಯಂತೆ ! ಬಹಳಷ್ಟು ಲೈಟ್ ಕಂಬಗಳು ಉರುಳಿದ ಪರಿಣಾಮ ಊರಲ್ಲಿ ವಿದ್ಯುಚ್ಛಕ್ತಿ ಇಲ್ಲ.... ಮೊಬೈಲ್ ಗೆ ಚಾರ್ಜ್ ಇಲ್ಲ ! - ನೆಟ್ವರ್ಕ್ ಇಲ್ಲ !!! ( ನಾವಿಲ್ಲಿ ಕಷ್ಟಪಡುತಿದ್ದರೆ ಬೆಂಗಳೂರಲ್ಲಿ ಕುಳಿತುಕೊಂಡು ಪದ್ಯ ಬರಿತಾಳೆ... ಏನು ಉಪಯೋಗ ? ... ಅಂತ ಬೈದುಕೊಳ್ಳಬೇಡಿ. ನಿಮ್ಮ ಪರವಾಗಿ ವರುಣನಿಗೂ ವಾಯುದೇವನಿಗೂ ಅವಹಾಲು ಸಲ್ಲಿಸುತ್ತಿದ್ದೇನೆ - ಈ ಪದ್ಯದ ಮುಖಾಂತರ !)

"ಬಿರುಮಳೆ" - "ಮಲ್ಲಿಕಾಮಾಲಾ ವೃತ್ತ" ಛಂದಸ್ಸಿನಲ್ಲಿ
****************************************

ಗಾಳಿ ಬೀಸಿತು ಮೋಡ ಮುಸುಕಿತು ಕಪ್ಪು ಕತ್ತಲೆ ಕವಿಯಿತು ||
ಗುಡುಗು ಸಿಡಿಲಿನ ಶಬ್ದಕಂಜೀ ಹೃದಯ ಡವಡವ ಎಂದಿತು || ಪಲ್ಲವಿ ||

ಮೋಡ ಕರಗಿತು ಮಳೆಯು ಸುರಿಯಿತು ನೋಡಿ ಎಲ್ಲರು ನಲಿದರು ||
ಭೂಮಿ ದಾಹವು ತೀರಿ ಹೋಯಿತು ಬಿಸಿಲ ಬೇಗೆಯ ಮರೆತರು ||
ಮಳೆಯ ನೀರಲಿ ಆಡಿ ನಲಿದರು ಬಾಲವೃದ್ಧ ಯುವಕರು  ||
ಸುಖದ ಭಾವವು ತುಂಬಿ ತುಳುಕಿತು ಇವರ ಸಂಭ್ರಮ ನೋಡಿರೊ  || ಗಾಳಿ ಬೀಸಿತು ||

ಆರು ದಿನವೂ ನಿಲ್ಲದೇನೇ ಸೊಕ್ಕು ತೋರಿದ ವರುಣನು || 
ಹಿಂದೆ ಮುಂದೇ ನೋಡದೇನೇ ವಾಯು ಜೊತೆಯಾ ಕೊಟ್ಟನು || 
ಮರವು ಮುರಿಯಿತು ಹೆಂಚು ಹಾರಿತು ಛಿದ್ರವಾಯಿತು ಜೀವನ  ||
ದಾರಿ ಮುಂದಕೆ ತೋಚದೇನೇ ಮನುಜ ಕುಸಿದೂ ಕುಳಿತನು || ಗಾಳಿ ಬೀಸಿತು ||

ಸಾಕೊ ನಿಲ್ಲಿಸು ವರುಣ ದೇವನೆ ನಮ್ಮ ಗೋಳನು ಗಮನಿಸು ||
ಭೂಮಿ ಮಕ್ಕಳ ಕಷ್ಟ ಸುಖವು ನಿನ್ನ ನಂಬಿದೆ ವಿಚಾರಿಸು ||
ಹದವನರಿತುಕೊ ವಾಯುದೇವನೆ ನಿನ್ನ ಆರ್ಭಟ ನಿಲ್ಲಿಸು  ||
ಅತಿಯ ಆಡದೆ ಮಿತಿಯ ಮೀರದೆ ನಮ್ಮ ನೀನೇ ರಕ್ಷಿಸು || ಗಾಳಿ ಬೀಸಿತು ||

- ಸುರೇಖಾ ಭಟ್, ಭೀಮಗುಳಿ
25/06/2015
ಚಿತ್ರಕೃಪೆ : ಇಂಟರ್ ನೆಟ್

Tuesday, June 23, 2015

ಕರ್ತವ್ಯ

"ಕರ್ತವ್ಯ"
*******

ಮತ*ವೊಂದು ಬಿತ್ತೆಂದು ಉಬ್ಬದಿರೊ ಓ ಮನುಜ
ಸುಮ್ಮನೇ ಒತ್ತುವರು ನನಗೆ ಅನುಮಾನ ||
ಓದದೆಯೆ ನೋಡದೆಯೆ ಮೆಚ್ಚುವುದು ಸರಿಯಲ್ಲ
ಸಾಹಿತ್ಯ ಲೋಕಕ್ಕೆ ದೊಡ್ಡ ಅಪಮಾನ || 1 ||

ಓದಿ ಸುಖಿಸುವ ಮಂದಿ ಇನ್ನಿಷ್ಟು ಇಹರಲ್ಲ
ಅದುವೆ ನಿಜಾರ್ಥದಲಿ ಸಾಹಿತ್ಯಾಸಕ್ತಿ || 
ಓದುಗರ ಮುಖದಲ್ಲಿ ಪ್ರತಿಫಲಿತವಾದರೆ
ನಿನ್ನ ಕವಿತೆಯಲಿಹುದು ಒಂದಿಷ್ಟು ಶಕ್ತಿ || 2 ||

ಕವಿಯೊಬ್ಬ ಹೊಸೆಯಲೀ ಮತ್ತೊಬ್ಬ ಹಾಡಲೀ
ಎಲ್ಲರನು ಮುಟ್ಟಲೀ ಕನ್ನಡದ ಕವನ ||
ಅವರವರ ಕಾರ್ಯದಲ್ಲಿ ಅವರವರು ಸಹಕರಿಸೆ
ಸಾರ್ಥಕ್ಯವೆನಿಸುವುದು ಕವಿಯ ಜನನ  || 3 ||

ಯಾರು ನೋಡಲಿ ಬಿಡಲಿ ನಿನ್ನ ಕೆಲಸವ ಮಾಡು
ಛಲ ಬಿಡದ ತ್ರಿವಿಕ್ರಮ ನಿನ್ನ ಆದರ್ಶ || 
ಬರೆದಿಟ್ಟುಬಿಡು ಒಮ್ಮೆ ಮನದಲುಕ್ಕಿದ ಭಾವ
ಅದೇ ನಿನ್ನ ಕರ್ತವ್ಯ ಇನ್ನಷ್ಟು ವರ್ಷ || 4 ||

- ಸುರೇಖಾ ಭಟ್ ಭೀಮಗುಳಿ
23/06/2015

* ಲೈಕ್
ಚಿತ್ರಕೃಪೆ : ಇಂಟರ್ ನೆಟ್

Wednesday, June 17, 2015

ಪಾದಪೂಜೆ

"ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ" ರಾಗದಲ್ಲಿ

" ಪಾದಪೂಜೆ "
*************
ಭಾರತಾಂಬೆಯ ಪಾದಪೂಜೆಯಲಿ | ಭಾಗವಹಿಸ ಬನ್ನೀ || ಭಾಗವಹಿಸ ಬನ್ನೀ ||
ಪಾದದ ಪೂಜೆಯ ವೈಭವವನ್ನು | ನೋಡಿ ತಣಿವ ಬನ್ನೀ || ಧನ್ಯರಾಗ ಬನ್ನೀ || ಪಲ್ಲವಿ ||

ಭಾರತ ಮಾತೆಯ ಪಾದವ ತೊಳೆಯಲು | ಸಾಗರದರಸನು ಕಾದಿಹನು ||
ತಾಯಿ ಭಾರತಿಗೆ ಆರತಿ ಬೆಳಗಲು | ಬಾನಲಿ ಅರುಣನು ಮೂಡಿಹನು ||
ಅರುಣನ ಕಿರಣದ ಜೊತೆಯಲಿ ಸೇರಿ | ಮೇಘನು ಓಕುಳಿ ಚೆಲ್ಲಿಹನು ||
ಪೂಜಾಪರಿಕರ ಕೈಯಲಿ ಹಿಡಿದು | ಆಗಸದರಸನು ನಿಂದಿಹನು || 1 ||

ಸಾಗರದಲೆಗಳು ಮೊರೆಯುವ ಶಬ್ದವೆ | ಸುಪ್ರಭಾತದ ಶುಭದ ನುಡಿ ||
ಬೀಸುವ ಗಾಳಿಯ ತಂಪಿನ ಸ್ಫರ್ಶವೆ | ದೇವನ ಸಂದೇಶದಾಮೋಡಿ ||
ಭಾರತಾಂಬೆಯ ಗುಣವಿಶೇಷಗಳ | ಹಾಡಿ ನಲಿಯುತಿದೆ ಬಾನಾಡಿ ||
ಎಲ್ಲೆಡೆ ಸಂತಸ ಎಲ್ಲೆಡೆ ಸಂಭ್ರಮ | ಸ್ಫೂರ್ತಿಗೊಳ್ಳುವ ಇದನೋಡಿ || 2 ||

ಅಮ್ಮನ ಪ್ರೀತಿಯ ಕರುಣೆಯ ನೋಟವ | ನಾವುಗಳೆಲ್ಲರು ಗಳಿಸೋಣ ||
ಮಾತೃ ಮಮತೆಯ ಕೃಪೆಯನ್ನೊಮ್ಮೆ | ಉಣ್ಣುತ ಸುಖವನು ಹೊಂದೋಣ ||
ಬಿಟ್ಟರೆ ಸಿಕ್ಕದು ಮತ್ತೊಂದು ಅವಕಾಶ | ಮಾತೆಯ ಸೇವೆಯ ಮಾಡೋಣ ||
ಧನ್ಯ ಭಾವದಿ ಶುಭವನು ಕೋರುತ | ತಾಯಿಗೆ ಜಯಜಯವೆನ್ನೋಣ || 3 ||

- ಸುರೇಖಾ ಭಟ್ ಭೀಮಗುಳಿ
17/06/2015

ಛಾಯಾಚಿತ್ರ : 14.06.2015 ರಂದು ಕನ್ಯಾಕುಮಾರಿಯಲ್ಲಿ ನಾನೇ ತೆಗೆದಿದ್ದು.