Friday, December 7, 2018

" ಬಂಗಾರ... ಬಂಗಾರ.... ಬಂಗಾರ... "


ಬಂಗಾರ ಸ್ವಲ್ಪನಾದ್ರೂ ಬೇಕು ಕಣ್ರೀ....

ಹೆಣ್ಣು ಮಕ್ಕಳಿಗಿಷ್ಟು ಬಂಗಾರವಿರಬೇಕು
ಯೌವ್ವನದ ದಿನದಲದು ದಕ್ಕಬೇಕು ||
ದೇಹ-ವದನಗಳೆರಡು ಹೂವಿನಂತಿರುವಾಗ 
ಧರಿಸುವಂತಹ ಭಾಗ್ಯ ಸಿಕ್ಕಬೇಕು || ೧ ||

ತಾರುಣ್ಯವಿರುವಾಗ ಚಿನ್ನ ತೊಟ್ಟರೆ ಚಂದ
ಸಿರಿಮೊಗಕೆ ಮತ್ತಷ್ಟು ಆಕರ್ಷಣೆ ||
ಹರೆಯ ಕಳೆದಿಹ ದಿನದೊಳಾಭರಣ ಸಿಕ್ಕಿದರೆ
ಸಿರಿತನದ ತೋರ್ಪಡಿಕೆಗಷ್ಟೇ ಮಣೆ || ೨ ||

ತೋರ ಕುತ್ತಿಗೆಗೊಂದು ಕಂಠ ಮಾಲಿಕೆ ಧರಿಸೆ 
ನಾಯಿಬೆಲ್ಟಿನ ಹಾಗೆ ಕಾಣದೇನು ? ||
ತಲೆಗಿಷ್ಟು ಕಡುಗಪ್ಪು ಮುಖಕಿಷ್ಟು ಮೇಕಪ್ಪು
ಬಳಿದುಕೊಂಡರೆ ಮುಶಡಿ ಚಂದವೇನು ? || ೩ ||

ಆಭರಣವಿದೆಯೆನುತಲೈದಾರು ಸರ ಧರಿಸೆ
'ಚಿನ್ನದಂಗಡಿ ಬಂತು' ಎಂದೆನುವರು ||
'ನನ್ನ ಹಣ - ನನ್ನ ಸರ' ಎಂದುಕೊಂಡರೆ ಮನದಿ
ನಮ್ಮ ಹಿಂದೆಯೆ ಜನರು ನಗದೆಯಿರರು || ೪ ||

ಆದರೂ ಬೇಕಿಷ್ಟು ಸ್ವರ್ಣದಾಭರಣಗಳು 
ಸಂಸಾರ ಭದ್ರತೆಯ ದೃಷ್ಟಿಯಿಂದ ||
ಮನದೊಳಗದೊಂದಿಷ್ಟು ಸ್ಥೈರ್ಯವನು ತುಂಬುವುದು
ಪಾರು ಮಾಡುವುದೆಮ್ಮ ಕಷ್ಟದಿಂದ || ೫ ||

- ಸುರೇಖಾ ಭೀಮಗುಳಿ
07/12/2018
ಚಿತ್ರ : ಅಂತರ್ಜಾಲ

Thursday, December 6, 2018

" ಮಾತು ಬೆಳ್ಳಿ "

ಮಾತು ಬೆಳ್ಳಿ... ಮೌನ ಬಂಗಾರ .... ದೀರ್ಘ ಮೌನದ ನಂತರದ ಮಾತು ವಜ್ರ .... ಯಾರಿಗೆ ಬೇಕ್ರೀ ಬಂಗಾರ- ವಜ್ರ ? ನಮಗೆ ಬೆಳ್ಳಿಯೇ ಸಾಕು ... ಖುಷಿ ಬಂದಷ್ಟು ವಟವಟ ಅನ್ಕೊಂಡು ಹಾಯಾಗಿರೋಣ .... ಆಗದಾ ? ನೀವ್ ಏನಂತೀರಿ ? 

ಮಾತದೋ ಬೆಳ್ಳಿಯೊಲ್ ಮೌನವದು ಬಂಗಾರ
ಮೌನದಾಚಿನ ಮಾತು ವಜ್ರವಂತೆ ||
ವಜ್ರವದು ಬಲು ಕಠಿಣ ಬಂಗಾರ ಶೃಂಗಾರ
ಬೆಳ್ಳಿ ಹತ್ತಿರ ಮನಕೆ ಗೆಜ್ಜೆಯಂತೆ || ೧ ||

ಮಾತಾಡಬಲ್ಲವರು ಮಾತನಾಡಲುಬೇಕು
ಮಾತಾಡೆ ಬಾರದಿರೆ ಕಿವಿಯಾಗಬೇಕು ||
ಮಾತೆಂಬುದೇ ನಮ್ಮ ಭಾವಬದುಕಿನ ಸೇತು 
ಮಾತಿಲ್ಲದಿರಲದುವು ಮೃಗದ ಬದುಕು || ೨ ||

ಗೆಜ್ಜೆಯಂತೆಯೆ ನಮ್ಮ ನುಡಿಯುಲಿತವಿರಬೇಕು
ಸ್ವರ್ಣದಮೃತದ ಕಲಶ ಎದೆಯೊಳಿರಬೇಕು ||
ವಜ್ರ ಸದೃಶದ ಕಠಿಣ ಮನದ ನಿರ್ಧಾರಗಳು
ಈ ಬದುಕ ಬಂಡಿಯನ್ನೆಳೆಯಬೇಕು || ೩ ||

- ಸುರೇಖಾ ಭೀಮಗುಳಿ
07/12/2018
ಚಿತ್ರ : ಅಂತರ್ಜಾಲ
ತಿದ್ದುಪಡಿ ಮಾರ್ಗದರ್ಶನ - ಅರಿಸಮಾಸದ ಅರಿಗಳನ್ನು ಸಂ’ಹರಿ’ಸಿದವರು: ವಿಶ್ವ ಸರ್

Thursday, November 15, 2018

" ಜ್ಞಾನೋದಯವಾದ ಹೊತ್ತು...... " - ದ್ವಿತೀಯ ಕಂತು.....


"ವಾನಪ್ರಸ್ಥ" ಅಂದ ಕೂಡ್ಲೆ ಅದೇನು ಹಾಗೆ ಬೆಚ್ಚಿಬೀಳ್ತೀರಿ ಮಾರ್ರೆ ? ಯಪ್ಪಾ..... !!!

( https://www.facebook.com/profile.php?id=100007315925874 ದ ಮುಂದುವರೆದ ಭಾಗ )

ವಾನಪ್ರಸ್ಥಕ್ಕೆನಲು ಹೆದರಿಕೊಂಡಿರಿಯೇಕೆ ?
ಕರ್ಮಬಂಧನದೊಳಗೆ ಸೆಳೆತವೇಕೆ ? ||
’ನಾನೀಗ ಬರಲಾರೆ ನನದಿನ್ನು ಎಳೆಪ್ರಾಯ’
’ಅಷ್ಟು ಮುದುಕಿಯೆ ನೀನು ?’ ಎನುವಿರೇಕೆ ? || ೧ ||

ವಾನಪ್ರಸ್ಥಾಶ್ರಮಕೆ ವಯಸಾಗಬೇಕಿಲ್ಲ
ಸಂಸಾರದೊಳಗಿದ್ದು ಮಾಗಬೇಕು ||
ಪದ್ಮಪತ್ರದೊಳಿರುವ ನೀರಹನಿ ತೆರದಲ್ಲಿ
ಅಂಟಿಯಂಟದ ಸ್ಥಿತಿಯ ಹೊಂದಬೇಕು || ೨ ||

ವಾನಪ್ರಸ್ಥಾಶ್ರಮಕೆ ವನವೆಬೇಕೆಂದಿಲ್ಲ
ನಮ್ಮೊಳಗೆ ನಿರ್ಲಿಪ್ತವಾಗಬೇಕು ||
ನಾನು ನನ್ನವರೆಂಬ ಮೋಹವನು ತೊರೆಯುತಲಿ
ಬಂದದ್ದು ಸೌಭಾಗ್ಯವೆನ್ನಬೇಕು || ೩ ||

ಸಂಸಾರದೊಳಗಿದ್ದು ಮನವ ಹದಗೊಳಿಸುತ್ತ
ಬಂದ ಕರ್ತವ್ಯಗಳ ಮಾಡಬೇಕು ||
ನಮ್ಮಾಟ ಮುಗಿದೊಡನೆ ಹೊರಟು ನಿಲ್ಲುವುದಕ್ಕೆ
ಸ್ಥಿತಪ್ರಜ್ಞ ಭಾವವನು ತಾಳಬೇಕು || ೪ ||

- ಸುರೇಖಾ ಭೀಮಗುಳಿ
15/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

Friday, November 9, 2018

" ಜ್ಞಾನೋದಯವಾದ ಹೊತ್ತು...... "

ವಾನಪ್ರಸ್ಥಕ್ಕೆ ಯಾರೆಲ್ಲ ಬರ್ತೀರಿ ? ಹೊರಡಿ ಹೊರಡಿ....

’ಯಾರು ನನ್ನವರಲ್ಲ ನನ್ನವರು ಯಾರಿಲ್ಲ 
ಏಕಾಂಗಿ ನಾ ಜಗದಿ’ - ಇದುವೆ ಸತ್ಯ ||
’ಯಾರೆಲ್ಲ ನನಗಾಗಿ ?’ - ಎನ್ನುತರಸುವೆನಲ್ಲ  
ಬಂಧವೆನ್ನುವುದೊಂದು ಶುದ್ಧ ಮಿಥ್ಯ || ೧ ||

’ನನ್ನ ಬದುಕಿನ ಹೊರೆಯ ನಾನೆ ಸಾಗಿಸಬೇಕು’
ಎಂಬ ಮಾತಿನ ಮರ್ಮದರಿವಾಯಿತು ||
ಯಾರೆನಗೆ ಪರಮಾಪ್ತರೆಂಬ ಹುಡುಕಾಟದಲೆ  
ಬದುಕಿನರ್ಧದ ಪಯಣ ಮುಗಿದು ಹೋಯ್ತು || ೨ ||

ಎದುರಲ್ಲಿ ಬಂದವರು ನಕ್ಕು ಸ್ನೇಹವ ಬಯಸೆ
ನಾನೂನು ನಗಬೇಕು ವಿಶ್ವಾಸ ತುಂಬಿ ||
ದೊರೆತ ಸ್ನೇಹದ ಬಗ್ಗೆ ಸಂಭ್ರಮಿಸಬೇಕಿಲ್ಲ
ಈ ಬಂಧ ಶಾಶ್ವತವದೆಂದು ನಂಬಿ || ೩ ||

ಬಂದಬಂದವರನ್ನು ಮನೆಯೊಳಗೆ ಕರೆಯುವರೆ
ಪಡಸಾಲೆಯಲ್ಲಷ್ಟೆ ಪವಡಿಸುವ ಹಕ್ಕು ||
ಯಾರ್ಯಾರನೆಲ್ಲೆಲ್ಲಿ ನಿರ್ಧರಿಪ ಬುದ್ಧಿಯಿದೆ
ಅದಕೇನು ಹಿಡಿದಿಲ್ಲವಿನ್ನು ತುಕ್ಕು || ೪ ||

ಮುಗುಳು ನಗೆಯನು ಬೀರಿ ಸ್ನೇಹ ಹಸ್ತವ ಚಾಚಿ 
ಬಂದವರ ಕೈಮುಗಿದು ಸ್ವಾಗತಿಸಬೇಕು ||
ಹೊರಟೆನೆ‌ನ್ನುವ ಕ್ಷಣದಿ ಮತ್ತೆ ಗೋಗರೆಯದೆಯೆ
ಭೇಟಿಯಿದು ಖುಷಿಯಾಯಿತೆನ್ನಬೇಕು || ೫ ||

ಎಲ್ಲರೂ ನಶ್ವರರು - ನಶ್ವರವದೀಜಗವು
ವೇದಾಂತ ವಾಣಿಯಲಿ ಸತ್ಯವುಂಟು ||
ಸ್ನೇಹ ಸಂಬಂಧಗಳು ಮಿತಿಯ ಮೀರಿರುವಲ್ಲಿ
ಶಾಂತಿ ನೆಮ್ಮದಿಯೆಲ್ಲ ಕನ್ನಡಿಯ ಗಂಟು || ೬ ||

- ಸುರೇಖಾ ಭೀಮಗುಳಿ
ಸ್ಥಳ : ಭೋಗನಂದೀಶ್ವರ, ನಂದೀಗ್ರಾಮ, ಚಿಕ್ಕಬಳ್ಳಾಪುರ
ಜ್ಞಾನೋದಯವಾದ ಸಮಯ : 06/11/2018 ರ ಬೆಳಗಿನ 12:18 
ಪದ್ಯರೂಪ : 09/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ನಾನೇ ಕಣ್ರೀ.....

Saturday, September 22, 2018

"ಕಡಕೊಡ್ರೀ - ಬಡ್ಡಿ ಕೊಡ್ತೀನಿ..." 😂


ಬಾಳೊಂದು ಮಾಯೆ ನೀರಸದ ಛಾಯೆ
ಉತ್ಸಾಹವೆಲ್ಲಿ ಹೋಯ್ತು ? ||
ಬೋಳಾಯ್ತು ಬದುಕು ಹಾಳಾಯ್ತು ಮನಸು
ಮಾಧುರ್ಯವಿಲ್ಲವಾಯ್ತು || ೧ ||

ಮನದೊಳಗೆ ಬಯಕೆ ಸವಿಮಾತ ನೆನಕೆ
ಬಯಸುತಿಹೆ ಪ್ರೀತಿಯೊರತೆ ||
ಕನಸಿಲ್ಲದಿರಲು ಮನ ಮುದುರಿತೀಗ
ಭಾವಕ್ಕು ಬಂತು ಕೊರತೆ || ೨ ||

ಭಾವಗಳಭಾವ ಕಾಡಿರುವ ಹೊತ್ತು
ನಿಮಗೇತಕಿಂತ ಮೌನ ? ||
ತಾವಾಗಿ ಬಂದು ಸಹಕರಿಸಲೆಂದು
ಮನದೊಳಗೆ ನಿಮದೆ ಧ್ಯಾನ || ೩ ||

ಸವಿಸವಿಯಮಾತು ಜೊತೆಯಲ್ಲಿ ಕೂತು
ತಡೆದಿಹುದೆ ನಿಮ್ಮ ಬಿಂಕ ? ||
ಕವಿಮನದೊಳಿಂದು ಕನವರಿಕೆಗಾಗಿ
ಬಿದ್ದಿಹುದು ಭಾರಿ ಸುಂಕ || ೪ ||

ಒಂದಿಷ್ಟು ಖುಷಿಯ ಮತ್ತಷ್ಟು ನಗುವ
ಕಡವನ್ನು ಕೊಡರಿ ನನಗೆ ||
ಒಂದಕ್ಕೆ ಎರಡು ಬಡ್ಡಿಯನು ಕೂಡಿ
ಮರಳಿಸುವೆ ನಾಳೆ ನಿಮಗೆ || ೫ ||

- ಸುರೇಖಾ ಭೀಮಗುಳಿ
22/09/2018
ಚಿತ್ರ: ಅಂತರ್ಜಾಲ

Tuesday, July 17, 2018

"ಪ್ರತಿಬಿಂಬ"


ಮನದೊಳಗ ಭಾವಕ್ಕೆ ಪದರೂಪ ಕೊಡಬೇಕೆ ?
ಘನವಾದ ಬೀಗವನು ಜಡಿಯಬೇಕೆ ? ||
ಅನುಭವದ ಮೂಟೆಯನು ಪರರೆದುರು ತೆರೆದಿಡಲು
ನನಗಿಲ್ಲದಿಹ ಬಿಂಕ ನಿಮಗದೇಕೆ ? || ೧ ||

ನನ್ನ ಕಥೆಯೋದಿದವರೇನಂದುಕೊಂಡಿರೋ ?
ತನ್ನ ಅನುಭವದೊಡನೆ ತಾಳೆ ನೋಡಿದಿರೊ ? ||
ಹೊನ್ನಿನನುಭವದಿಂದ ಹೊಸಸ್ಫೂರ್ತಿ ಹೊಂದಿದಿರೊ ?
ಭಿನ್ನವಿದೆಯೆನಿಸಿರಲು ಮೂತಿ ತಿರುವಿದಿರೊ ? || ೨ ||

ಮುಚ್ಚಿಡಲು ನನ್ನೊಳಗೆ ಕೊತಕೊತನೆ ಕುದಿಯುವವು
ಬಿಚ್ಚಿಡಲು ಒಡಲೆಲ್ಲ ಹಗುರವೆನಿಸುವುದು ||
ಮೆಚ್ಚಿದರವುಗಳನ್ನು ಧನ್ಯತೆಯು ಮೂಡುವುದು
ವೆಚ್ಚ ಕೇಳದೆ ಮನವು ತುಷ್ಟಿಗೊಳ್ಳುವುದು || ೩ ||

ಇಷ್ಟವಾಗಿರಲಾಗ ಚೆನ್ನವಿದೆ ಎಂದುಬಿಡಿ
ಇಷ್ಟವಾಗದಿರೆ ನೀವ್ ಮೌನವಹಿಸಿ ||
ಇಷ್ಟವಿರದಿರಲಾಗ ಬರೆವೆಯೇಕೆನ್ನದಿರಿ
ಕಷ್ಟವಾದರು ನಿಮಗೆ ಸ್ವಲ್ಪ ಸಹಿಸಿ || ೪ ||

ನನ್ನ ಬರಹಗಳೆಲ್ಲ ನನ್ನದೇ ಪ್ರತಿಬಿಂಬ
ಭಿನ್ನವಲ್ಲವೆ ಅಲ್ಲ ನನ್ನ ವ್ಯಕ್ತಿತ್ವ ||
ಚೆನ್ನವಿಲ್ಲೆನುವವರೆ ದೂರ ನಿಲ್ಲಿರಿ ಸ್ವಲ್ಪ
ನನ್ನೊಳಗ ಬೆಳಗಲಿದೆ ನನ್ನ ಸತ್ತ್ವ || ೫ ||

- ಸುರೇಖಾ ಭೀಮಗುಳಿ
17/07/2018
ಚಿತ್ರ : ಅಂತರ್ಜಾಲ

Thursday, July 12, 2018

" ಹೊಸ ಚಿಗುರು "





ಬರೆಯಬೇಕಿದೆ ನನಗೆ ಮತ್ತೊಂದು ಹೊಸ ಕವನ
ಬೆರಗಿನಲಿ ಭಾವಗಳ ಹೆಕ್ಕಿ ಹೊಸೆದು ||
ದೊರೆಬದುಕು ಬೇಕಿಹುದು ಮತ್ತೆ ಹೊಸ ಹುರುಪಿನದು
ಮರುಳು ಕಹಿನೆನಪುಗಳ ಕಳೆಯ ತೆಗೆದು || ೧ ||
ಸಡಗರದ ನೆನಪುಗಳು ಮನದ ಪುಟಪುಟಗಳಲಿ
ಹಿಡಿದಂಟಿ ಕುಳಿತಿಹವು- ಗೊತ್ತು ನನಗೆ ||
ತಡೆಗೋಡೆಯನ್ನೊಮ್ಮೆ ಕಟ್ಟಿಬಿಡುವೆನು ನಾನು
ಬಡಿದೋಡಿಸುವೆ ಕಹಿಯ ಮನದ ಹೊರಗೆ || ೨ ||
ಬಿಡಗಡೆಯ ಬಯಸಿ ನಾ ಕಹಿನೆನಪ ಬಿಸುಟಿರಲು
ಬಿಡಲಾರೆ ನಾ ನಿನ್ನನೆನ್ನುತಿಹವು ||
ಸುಡುವಾಸೆಯೆಮಗಿಲ್ಲ ಹೊರಹೋಗೆವೆನ್ನುತಲಿ
ಜಡಿದು ಕುಳಿತಿವೆಯೊಳಗೆ ಮಿಸುಕಾಡವು || ೩ ||
ಹಳೆ ನೆನಪುಗಳ ಬಿಡದೆ ನಾನದರ ಮೇಲೆಯೇ
ಒಳಿತಾದ ಮಹಲೊಂದ ಕಟ್ಟಬೇಕು ||
ಮಳೆಬಂದ ಕಾಲಕ್ಕೆ ಹೊಸಚಿಗುರು ಮೊಳೆವಂತೆ
ಕಳೆಕಳೆಯ ಹೊಸಬದುಕು ಕೊನರಬೇಕು || ೪ ||
- ಸುರೇಖಾ ಭೀಮಗುಳಿ
12/07/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

Friday, June 29, 2018

" ಪತ್ರಡೆ - ಕೆಸುಪುರಾಣ ...."



ಊರ ಮನೆಯಂಗಳದಿ ಕೆಸುವಿನೆಲೆ ನಗುತಿರಲು
ತಾರದುಳಿಯಲಿ ನಾನು ಹೇಗೆ ಹೇಳಿ ? ||
ಬೇರೊಂದು ಯೋಚನೆಯೆ ಮಾಡದೆಯೆ ಕೊಯ್ದಿಟ್ಟೆ
ಬಾರದುಳಿವುದೆ ನೆನಪು ಪತ್ರಡೆ-ಹುಳಿ || ೧ ||

ಹತ್ತೆಲೆಯ ಕೊಯ್ವಲ್ಲಿ ಮತ್ತಷ್ಟು ಕೊಯ್ದಾಯ್ತು
ಹೊತ್ತೊಯ್ದು ತಂದಿರುವೆ ಬೆಂಗ್ಳೂರಿಗೆ ||
ಮತ್ತೆಯುಳಿಯುವುದಿಲ್ಲ ಬೇಕೆಂದರಿನ್ನಿಲ್ಲ
ಸುತ್ತಿ ಕೊಂಡೊಯ್ಯಿರೀ ನಿಮ್ಮ ಮನೆಗೆ || ೨ ||

ಮನೆಯ ಮಂದಿಗೆ ಬಿತ್ತು ಪತ್ರಡೆಯ ಕನಸುಗಳು
ನೆನೆಹಾಕಬೇಕಕ್ಕಿಯಿಂದು ನಾನು ||
ಮನವಿಟ್ಟು ಮಾಡುವೆನು ಕೆಸುವಿನೆಲೆಯಡುಗೆಯನು  
ಘನವಾದ ತಿನಿಸಿದುವು - ಬರುವಿರೇನು ? || ೩ ||

ಸಿಗದೆ ಹೋಯಿತುಯೆಂದು ಸಂಕಟವ ಪಡಬೇಡಿ
ಬಿಗಿಗೊಳಿಸಿ ತುಟಿಯನ್ನು ಹೊಲೆಯಬೇಡಿ ||
ತಗಲಿಸುವೆ ಪತ್ರಡೆಯ ಪಟವ ಫೇಸ್ಬುಕ್ಕಿನಲಿ
ಮೊಗದಿ ಕಿರುನಗೆ ಸೂಸಿ ಪ್ರತಿಕ್ರಿಯಿಸಿರಿ || ೪ ||

- ಸುರೇಖಾ ಭೀಮಗುಳಿ
29/06/2018
ಚಿತ್ರ : Padma Shrinivas Huilgol

"ಅಂಬೆಯ ಭಾವದಲ್ಲಿ......"


ಕರೆಯದೆಲೆ ಬಂದವನು ಮನ ಸೂರೆಗೊಂಡವನು
ಸರಿದು ಹೋದನು ಮತ್ತೆ ಬಾರೆನೆಂದು ||
ಬರಿದಾಯಿತೆನ್ನೆದೆಯು ಬರಡಾಯಿತೀಬದುಕು 
ಭರಿಸಲಾರದ ನೋವು ನನ್ನಲಿಂದು || ೧ ||

ತಲೆಭಾರವಾಗಿಹುದು ಕಣ್ಣು ಕೊಳವಾಗಿಹುದು
ಶಿಲೆಯಾಗಿ ಹೋಯ್ತಲ್ಲ ನನ್ನವನ ಹೃದಯ ||
ಕೊಲೆಯಾಯ್ತು ಪ್ರೀತಿಯದು ದೂರು ಸಲ್ಲಿಸಲೆಲ್ಲಿ ?
ಬೆಲೆ ಕೊಡದೆ ಹೋದನೇ ನನ್ನ ಗೆಳೆಯ ? || ೨ ||

ತಪ್ಪು ಮಾಡಿದೆನೇನು ? ಗುರಿಯ ತಪ್ಪಿದೆನೇನು ?
ಒಪ್ಪುವಂತಹ ದಾರಿ ತಿಳಿಯದಾಯ್ತು ||
ಕಪ್ಪು ಆವರಿಸಿಹುದು ಮನಃಪಟಲದಲ್ಲೆಲ್ಲ
ಜಪ್ಪಯ್ಯನೆಂದರೂ ಶನಿ ಬಿಡದೆಹೋಯ್ತು || ೩ ||

ಇವನ ವಾಕ್ಚಾತುರ್ಯಕ್ಕೆ ಬಲಿಬಿದ್ದೆನೇ ನಾನು ?
ಇವನ ಆಳಂಗಕ್ಕೆ ಮರುಳಾದೆನೆ ? ||
ಇವನ ನೆಚ್ಚಿದೆನೇಕೆ ಮಾತು ಕೊಟ್ಟೆನುಯೇಕೆ ?
ಇವನಿಲ್ಲದೆಯೆ ನಾನು ಇರಬಲ್ಲೆನೆ ? || ೪ ||

ಮರೆಯಲೇ ಬೇಕೇನು ಸರಿದು ಹೋದವನನ್ನು
ವಿರಹದುರಿ ತಾಳುವುದು ಸುಲಭವೇನು ? ||
ಬಿರುಗಾಳಿಯೆದ್ದಿಹುದು ಹೃದಯಸಾಮ್ರಾಜ್ಯದಲಿ
ನೆರಳು ಬೆಳಕಿನ ಆಟ ಮುಗಿಯಿತೇನು ? || ೫ ||

- ಸುರೇಖಾ ಭೀಮಗುಳಿ
29/06/2018
ಚಿತ್ರ : NTB Bhat ಅವರ ವಿಡಿಯೋದಿಂದ ಕದಿಯಲಾಗಿದೆ.

Thursday, June 14, 2018




ಬಿಡಿಪದ್ಯಗಳು 

"ಮೌನಗೀತೆ"
--------------
ಕರಿಮೋಡ ಮುಸುಕಿರಲು ಬಾನಿನಂಗಳದಲ್ಲಿ
ಮೆರೆಯುತಿದೆ ನನ್ನೊಳಗೆ ಮೌನ ಸುಗ್ಗಿ || 
ಕರೆದು ಮಾತಾಡಲೀ ನೀನೆ ಮೊದಲೆನ್ನುತ್ತ
ಸರಿಯುತಿದೆ ಸಿರಿಸಮಯ ತಗ್ಗಿಬಗ್ಗಿ ||

"ಭಾವರಾಹಿತ್ಯ"
----------------
ಪಿರಿಪಿರಿಯ ದನಿಯಲ್ಲಿ ಮಳೆಹನಿಯು ಹನಿದಿರಲು
ಪರಿಪರಿಯ ಭಾವಗಳೆ ಹೋದಿರೆಲ್ಲಿ ? ||
ಸರಿದೆಲ್ಲಿ ಹೋಗುವಿರಿ ನೀವು ನನ್ನನು ಬಿಟ್ಟು ?
ಕರೆಯುತಿರುವೆನು ನಿಮ್ಮ- ಬನ್ನಿರಿಲ್ಲಿ || 

"ಹೀಗೊಂದು ಆಕಾಶಯಾನ"
-------------------------
ದೂರದಲಿ ತೇಲುತಿಹ ಮೇಘ ಮಾಲೆಯ ಕಂಡು
ಸಾರಿ ಕರೆದಿತ್ತೆನ್ನ ಹಳೆಯ ಕನಸು ||
ಕೋರಿಕೆಯು ಮನ್ನಿಸಿದ ದೇವತೆಯ ಜೊತೆಯಲ್ಲಿ
ಹಾರಾಡಿ ಬಂದೆ ನಾ - ಎಂಥ ಸೊಗಸು ! ||

"ಮೊಗ್ಗು"
----------
ಅರೆಬಿರಿದ ಮೊಗ್ಗೊಂದು ಮೆಲುನಕ್ಕು ನುಡಿಯುತಿದೆ
ಬರೆಯೆ ಮರುಳೇ ನನ್ನ ಮೇಲೊಂದು ಕವನ ||
ಸರಸರನೆ ಬರೆದಿರುವೆ ನಾಲ್ಕಾರು ಸಾಲುಗಳ
ಕಿರಿದು ಸಮಯದಿಯದರ ಮೇಲಿಟ್ಟು ಗಮನ ||

- ಸುರೇಖಾ ಭೀಮಗುಳಿ
14/06/2018
ಚಿತ್ರ ಮೂಲ : ಅಂತರ್ಜಾಲ 

Sunday, April 29, 2018

"ಹೀಗೊಂದು ನೆನಪು"




(ಇಪ್ಪತ್ತೆಂಟು ವರ್ಷದ ಹಿಂದೆ ನಡೆದ ಅಕ್ಕನ ಮದುವೆಯ ನೆನಪಿನಲ್ಲಿ.... )
ಹೊಂಗನಸಿನೊಡಗೂಡಿ ಭಾವಯ್ಯ ಬರುವಾಗ
ಹೊಂಗೆ ಹೂ ಹಾಸಿದ್ದ ಹಾದಿಯಿತ್ತು ||| 
ತಂಗಾಳಿಯಲಿ ತೇಲಿ ತವರೂರು ಸುಖಿಸಿತ್ತು 
ಸಿಂಗಾರಗೊಂಡಿದ್ದ ಹೆಣ್ಣು ಹೊತ್ತು || ೧ ||
ಮರೆಯಿಂದಲಿಣುಕಿದ್ದ ನಮಗೆ ಕಂಡದ್ದೇನು 
ಮರೆಯ ಮಾಚದೆ ಪೇಳ್ವೆ ಕೇಳಿರೀಗ ||
ಅರೆಬಿರಿದ ತುಟಿಯಲ್ಲಿ ಭಾವಯ್ಯ ನಗುತಿರಲು
ಮೆರೆದಿತ್ತು ಮೊಗದಲ್ಲಿ ಪ್ರೇಮರಾಗ || ೨ ||
ತುಸುನಕ್ಕ ನನ್ನಕ್ಕ ನಾಚಿ ನೀರಾಗುತಿರೆ
ನಸುಗೆಂಪು ಕದಪಿನಲಿ ರಾರಾಜಿಸಿ ||
ಪಿಸುಮಾತಿನಲ್ಲುಲಿದು ಭಾವನನು ಕಾಡಿದೆವು
ಬೆಸೆದ ಬದುಕಿನ ಬಗೆಗೆ ತುಸು ರೇಗಿಸಿ || ೩ ||
ಮನೆಯೊಳಾಗಿರಲಿಲ್ಲ ಪರಿಪರಿಯ ಜರಿಸೀರೆ
ಮನದೊಳಗೆ ಬತ್ತದಿಹ ಉತ್ಸಾಹವಿತ್ತು ||
ಕನಸುಗಳೆ ನಮಗಿದ್ದ ಬಂಗಾರದೊಡವೆಗಳು 
ನನಗಾಗ ಹದಿಹರೆಯ ಬಂದ ಹೊತ್ತು || ೪ ||
- ಸುರೇಖಾ ಭೀಮಗುಳಿ
13/04/2018
ಚಿತ್ರ : ನನ್ನ ನಾಲ್ಕನೆಯ ಅಕ್ಕನ ಮದುವೆಯ ಫೋಟೋ.

"ಸ್ಯಾರಿ- ಸ್ವಾರಿ-ಸ್ಟೋರಿ" (Saree-Sorry-Story)

Image may contain: 3 people, people smiling, people sitting and indoor

ತರಳೆಯರು ಮುಳುಗಿಹರು ಕನಸುಗಳ ಜಾಲದಲಿ
ಅರಳಿ ನಿಲ್ಲಲಿಯವರ ಭವಿತವ್ಯವು ||
ಪರಿಪರಿಯ ಭಾವಗಳ ಸ್ಫುರಿಸುತಿವೆ ನಯನಗಳು
ಮೆರೆಯುತಿದೆ ಪ್ರಜ್ವಲಿಸುತಿರುವ ಮೊಗವು|| ೧ ||😍😍😍

ಯಾರಿವರು ಕನ್ನಿಕೆಯರೆಂದು ಯೋಚಿಸುತಿದ್ದೆ
ಬಂಗಾರದಂಗಡಿಯ ರೂಪಸಿಯರು ||
ಸಾರಿ ಕುಳಿತಿಹರಿಲ್ಲಿ ಭಾರಿ ಮಾತಾಡುತ್ತ
ಸೀರೆಯೊಡನೊಡವೆಯನು ಮೆರೆಸುತಿಹರು || ೨ || 😜😜😜

ಅಂದು ಸಂಜೆಯ ವೇಳೆ ಚಂದನೆಯ ಚಿತ್ರವಿದ
ಮುಂದಿಟ್ಟು ತೋರಿದೆನು ನನ್ನವರಿಗೆ ||
'ಅಂದಗಾತಿಯರಿವರು ಮೇರು ಸೌಂದರ್ಯದಲಿ'
ಎಂದು ಹೊಗಳಿದರಿವರು ನನ್ನೆದುರಿಗೆ ! || ೩ || 😳😳😳

ತೋರಿದ್ದು ಸೀರೆಯನು ಕಂಡದ್ದು ನಾರಿಯರು
ಬಾರದಿರುವುದೆ ನನಗೆ ಕೊಂಚ ಸಿಟ್ಟು ? ||
ಬೇರೆ ಮಾತಾಡದಲೆ ತನ್ನಿರಿಂಥದ್ದೊಂದು
ಸೀರೆ ಬೇಕೆನಗೆಂದೆ ಬಿಡದೆ ಪಟ್ಟು || ೪ || 😡😡😡

ದಾರಿಕಾಣದೆಯಿವರು ನಾರಿಯರ ಪಟಪಿಡಿದು 
ಸೀರೆಯಂಗಡಿಯಲ್ಲಿ ಹುಡುಕಿ ಹುಡುಕಿ ||
ಮೋರೆ ಕಪ್ಪಾಯಿತದೊ 'sorry' ಕೇಳಿಹರೀಗ
'ಬೇರೆ ನಾರಿಯ ಹೊಗಳೆನಿನ್ನು ದುಡುಕಿ' || ೫ || 😥😥😥

ಛೇ ! ಪಾಪ ! 😁😁😁

- ಸುರೇಖಾ ಭೀಮಗುಳಿ
26/03/2018
ಚಿತ್ರ : kavana TN jois ಅವರ ಗೋಡೆಯಿಂದ.
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.

Monday, March 19, 2018

" ಹೊಸ ವರುಷದ ಹೊಸ್ತಿಲಲ್ಲಿ .............."


ಬೇವು ಹೂವ ನಡುವಿನಲ್ಲಿ ಬೆಲ್ಲದಂಥ ಚುಂಬನ ||
ನೋವು ಮರೆತು ಹೋಯಿತೀಗ ಗಟ್ಟಿಯಾಯ್ತು ಬಂಧನ || ೧ ||

ಹೊಸ ವರುಷದ ಹೊಸ್ತಿಲಲ್ಲಿ ನೀನು ಕೊಟ್ಟ ಮುತ್ತಲಿ ||
ಬೆಸಗೊಂಡಿತು ನನ್ನ ಹೃದಯ ಕಳೆದು ಹೋದೆ ಮತ್ತಲಿ || ೨ ||

ಮುದದಿ ಮುತ್ತನೊತ್ತಿಬಿಟ್ಟೆ- ಮಿಂಚು ಹೊಡೆತ ಮೈಯಿಗೆ ||
ಕದವ ತಟ್ಟಿ ಹೃದಯದೊಳಗೆ ಹೆಜ್ಜೆಯಿಟ್ಟೆ ಮೆಲ್ಲಗೆ || ೩ ||

ಬರಿಯ ಸಲುಗೆಯಿಂದ ನನ್ನ ಕರೆಯಬೇಡ ಸರಸಕೆ ||
ಸುರಿಸ ಬೇಡ ಪ್ರೇಮವರ್ಷ ಕೊಚ್ಚಿ ಪೋಪೆ ರಭಸಕೆ || ೪ ||  

ಚೈತ್ರ ಮಾಸ ಮೊದಲಿನಲ್ಲಿ ನೀನು ಕೊಟ್ಟೆ ಉಡುಗೊರೆ ||
ಮೈತ್ರಿ ಗೆರೆಯ ದಾಟುತಿರುವ ಅರಿವುಯಿಹುದೆ ಓ ದೊರೆ ? || ೫ ||

ದಟ್ಟ ಕಾಡ ಕಡೆಗೆ ಹಾರಿ ಪುಟ್ಟ ಗೂಡ ಕಟ್ಟುವ ||
ಬಿಟ್ಟುಯೆಲ್ಲ ಚಿಂತೆಯನ್ನು ಜಗವ ಮರೆತು ಬದುಕುವ || ೬ ||

- ಸುರೇಖಾ ಭೀಮಗುಳಿ
19/03/2018
ಚಿತ್ರ : shivashankar banagar