Thursday, November 15, 2018

" ಜ್ಞಾನೋದಯವಾದ ಹೊತ್ತು...... " - ದ್ವಿತೀಯ ಕಂತು.....


"ವಾನಪ್ರಸ್ಥ" ಅಂದ ಕೂಡ್ಲೆ ಅದೇನು ಹಾಗೆ ಬೆಚ್ಚಿಬೀಳ್ತೀರಿ ಮಾರ್ರೆ ? ಯಪ್ಪಾ..... !!!

( https://www.facebook.com/profile.php?id=100007315925874 ದ ಮುಂದುವರೆದ ಭಾಗ )

ವಾನಪ್ರಸ್ಥಕ್ಕೆನಲು ಹೆದರಿಕೊಂಡಿರಿಯೇಕೆ ?
ಕರ್ಮಬಂಧನದೊಳಗೆ ಸೆಳೆತವೇಕೆ ? ||
’ನಾನೀಗ ಬರಲಾರೆ ನನದಿನ್ನು ಎಳೆಪ್ರಾಯ’
’ಅಷ್ಟು ಮುದುಕಿಯೆ ನೀನು ?’ ಎನುವಿರೇಕೆ ? || ೧ ||

ವಾನಪ್ರಸ್ಥಾಶ್ರಮಕೆ ವಯಸಾಗಬೇಕಿಲ್ಲ
ಸಂಸಾರದೊಳಗಿದ್ದು ಮಾಗಬೇಕು ||
ಪದ್ಮಪತ್ರದೊಳಿರುವ ನೀರಹನಿ ತೆರದಲ್ಲಿ
ಅಂಟಿಯಂಟದ ಸ್ಥಿತಿಯ ಹೊಂದಬೇಕು || ೨ ||

ವಾನಪ್ರಸ್ಥಾಶ್ರಮಕೆ ವನವೆಬೇಕೆಂದಿಲ್ಲ
ನಮ್ಮೊಳಗೆ ನಿರ್ಲಿಪ್ತವಾಗಬೇಕು ||
ನಾನು ನನ್ನವರೆಂಬ ಮೋಹವನು ತೊರೆಯುತಲಿ
ಬಂದದ್ದು ಸೌಭಾಗ್ಯವೆನ್ನಬೇಕು || ೩ ||

ಸಂಸಾರದೊಳಗಿದ್ದು ಮನವ ಹದಗೊಳಿಸುತ್ತ
ಬಂದ ಕರ್ತವ್ಯಗಳ ಮಾಡಬೇಕು ||
ನಮ್ಮಾಟ ಮುಗಿದೊಡನೆ ಹೊರಟು ನಿಲ್ಲುವುದಕ್ಕೆ
ಸ್ಥಿತಪ್ರಜ್ಞ ಭಾವವನು ತಾಳಬೇಕು || ೪ ||

- ಸುರೇಖಾ ಭೀಮಗುಳಿ
15/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

No comments:

Post a Comment