Friday, June 29, 2018

"ಅಂಬೆಯ ಭಾವದಲ್ಲಿ......"


ಕರೆಯದೆಲೆ ಬಂದವನು ಮನ ಸೂರೆಗೊಂಡವನು
ಸರಿದು ಹೋದನು ಮತ್ತೆ ಬಾರೆನೆಂದು ||
ಬರಿದಾಯಿತೆನ್ನೆದೆಯು ಬರಡಾಯಿತೀಬದುಕು 
ಭರಿಸಲಾರದ ನೋವು ನನ್ನಲಿಂದು || ೧ ||

ತಲೆಭಾರವಾಗಿಹುದು ಕಣ್ಣು ಕೊಳವಾಗಿಹುದು
ಶಿಲೆಯಾಗಿ ಹೋಯ್ತಲ್ಲ ನನ್ನವನ ಹೃದಯ ||
ಕೊಲೆಯಾಯ್ತು ಪ್ರೀತಿಯದು ದೂರು ಸಲ್ಲಿಸಲೆಲ್ಲಿ ?
ಬೆಲೆ ಕೊಡದೆ ಹೋದನೇ ನನ್ನ ಗೆಳೆಯ ? || ೨ ||

ತಪ್ಪು ಮಾಡಿದೆನೇನು ? ಗುರಿಯ ತಪ್ಪಿದೆನೇನು ?
ಒಪ್ಪುವಂತಹ ದಾರಿ ತಿಳಿಯದಾಯ್ತು ||
ಕಪ್ಪು ಆವರಿಸಿಹುದು ಮನಃಪಟಲದಲ್ಲೆಲ್ಲ
ಜಪ್ಪಯ್ಯನೆಂದರೂ ಶನಿ ಬಿಡದೆಹೋಯ್ತು || ೩ ||

ಇವನ ವಾಕ್ಚಾತುರ್ಯಕ್ಕೆ ಬಲಿಬಿದ್ದೆನೇ ನಾನು ?
ಇವನ ಆಳಂಗಕ್ಕೆ ಮರುಳಾದೆನೆ ? ||
ಇವನ ನೆಚ್ಚಿದೆನೇಕೆ ಮಾತು ಕೊಟ್ಟೆನುಯೇಕೆ ?
ಇವನಿಲ್ಲದೆಯೆ ನಾನು ಇರಬಲ್ಲೆನೆ ? || ೪ ||

ಮರೆಯಲೇ ಬೇಕೇನು ಸರಿದು ಹೋದವನನ್ನು
ವಿರಹದುರಿ ತಾಳುವುದು ಸುಲಭವೇನು ? ||
ಬಿರುಗಾಳಿಯೆದ್ದಿಹುದು ಹೃದಯಸಾಮ್ರಾಜ್ಯದಲಿ
ನೆರಳು ಬೆಳಕಿನ ಆಟ ಮುಗಿಯಿತೇನು ? || ೫ ||

- ಸುರೇಖಾ ಭೀಮಗುಳಿ
29/06/2018
ಚಿತ್ರ : NTB Bhat ಅವರ ವಿಡಿಯೋದಿಂದ ಕದಿಯಲಾಗಿದೆ.

No comments:

Post a Comment