ತೀರ್ಥಹಳ್ಳಿ - ಹೊಸನಗರದಲ್ಲಿ ಖಂಡಾಬಟ್ಟೇ (ಭಯಂಕರ) ಗಾಳಿ - ಮಳೆಯಂತೆ ! ಬಹಳಷ್ಟು ಲೈಟ್ ಕಂಬಗಳು ಉರುಳಿದ ಪರಿಣಾಮ ಊರಲ್ಲಿ ವಿದ್ಯುಚ್ಛಕ್ತಿ ಇಲ್ಲ.... ಮೊಬೈಲ್ ಗೆ ಚಾರ್ಜ್ ಇಲ್ಲ ! - ನೆಟ್ವರ್ಕ್ ಇಲ್ಲ !!! ( ನಾವಿಲ್ಲಿ ಕಷ್ಟಪಡುತಿದ್ದರೆ ಬೆಂಗಳೂರಲ್ಲಿ ಕುಳಿತುಕೊಂಡು ಪದ್ಯ ಬರಿತಾಳೆ... ಏನು ಉಪಯೋಗ ? ... ಅಂತ ಬೈದುಕೊಳ್ಳಬೇಡಿ. ನಿಮ್ಮ ಪರವಾಗಿ ವರುಣನಿಗೂ ವಾಯುದೇವನಿಗೂ ಅವಹಾಲು ಸಲ್ಲಿಸುತ್ತಿದ್ದೇನೆ - ಈ ಪದ್ಯದ ಮುಖಾಂತರ !)
"ಬಿರುಮಳೆ" - "ಮಲ್ಲಿಕಾಮಾಲಾ ವೃತ್ತ" ಛಂದಸ್ಸಿನಲ್ಲಿ
****************************************
ಗಾಳಿ ಬೀಸಿತು ಮೋಡ ಮುಸುಕಿತು ಕಪ್ಪು ಕತ್ತಲೆ ಕವಿಯಿತು ||
ಗುಡುಗು ಸಿಡಿಲಿನ ಶಬ್ದಕಂಜೀ ಹೃದಯ ಡವಡವ ಎಂದಿತು || ಪಲ್ಲವಿ ||
ಮೋಡ ಕರಗಿತು ಮಳೆಯು ಸುರಿಯಿತು ನೋಡಿ ಎಲ್ಲರು ನಲಿದರು ||
ಭೂಮಿ ದಾಹವು ತೀರಿ ಹೋಯಿತು ಬಿಸಿಲ ಬೇಗೆಯ ಮರೆತರು ||
ಮಳೆಯ ನೀರಲಿ ಆಡಿ ನಲಿದರು ಬಾಲವೃದ್ಧ ಯುವಕರು ||
ಸುಖದ ಭಾವವು ತುಂಬಿ ತುಳುಕಿತು ಇವರ ಸಂಭ್ರಮ ನೋಡಿರೊ || ಗಾಳಿ ಬೀಸಿತು ||
ಆರು ದಿನವೂ ನಿಲ್ಲದೇನೇ ಸೊಕ್ಕು ತೋರಿದ ವರುಣನು ||
ಹಿಂದೆ ಮುಂದೇ ನೋಡದೇನೇ ವಾಯು ಜೊತೆಯಾ ಕೊಟ್ಟನು ||
ಮರವು ಮುರಿಯಿತು ಹೆಂಚು ಹಾರಿತು ಛಿದ್ರವಾಯಿತು ಜೀವನ ||
ದಾರಿ ಮುಂದಕೆ ತೋಚದೇನೇ ಮನುಜ ಕುಸಿದೂ ಕುಳಿತನು || ಗಾಳಿ ಬೀಸಿತು ||
ಸಾಕೊ ನಿಲ್ಲಿಸು ವರುಣ ದೇವನೆ ನಮ್ಮ ಗೋಳನು ಗಮನಿಸು ||
ಭೂಮಿ ಮಕ್ಕಳ ಕಷ್ಟ ಸುಖವು ನಿನ್ನ ನಂಬಿದೆ ವಿಚಾರಿಸು ||
ಹದವನರಿತುಕೊ ವಾಯುದೇವನೆ ನಿನ್ನ ಆರ್ಭಟ ನಿಲ್ಲಿಸು ||
ಅತಿಯ ಆಡದೆ ಮಿತಿಯ ಮೀರದೆ ನಮ್ಮ ನೀನೇ ರಕ್ಷಿಸು || ಗಾಳಿ ಬೀಸಿತು ||
- ಸುರೇಖಾ ಭಟ್, ಭೀಮಗುಳಿ
25/06/2015
ಚಿತ್ರಕೃಪೆ : ಇಂಟರ್ ನೆಟ್