Friday, April 17, 2015

"ನೀವೇದನೆ"

ಭಾರತಮಾತೆಯ ಪಾದವ ತೊಳೆಯಲು
ಅದೆಷ್ಟು ಕಾತುರ ಸಾಗರಕೆ ?
ತೆರೆಗಳನೆತ್ತಿ ಉಕ್ಕುತ ಬರುತಿದೆ
ಚರಣದ ದೂಳನು ತೊಳೆವುದಕೆ || 1 ||

ಮಾತೆಯ ಪಾದವ ತೊಳೆಯುವುದೊಂದು
ಹೆಳೆ ಇರಬಹುದೇ ? ಅನುಮಾನ ||
ತನ್ನಯ ಪಾಪವ ನಿವೇದಿಸಹೊರಟಿದೆ
ಬಯಸಿದೆ ಕೃಪೆಯ ಸಮಾಧಾನ || 2  ||

ತಾಯಿಯ ಪಾದವ ತೊಳೆಯಲು ಬೇಕದು
ಸಿಹಿಸಿಹಿ ನೀರದು - ಪನ್ನೀರು !
ಎಲ್ಲಿಂದ ತರುವನು ಸಮುದ್ರದರಸನು
ತುಂಬಿದೆ ಅವನಲಿ ಉಪ್ನೀರು || 3 ||

ಹರಿದಿವೆ ನದಿಗಳು ಸಿಹಿನೀರಿನ ಜೊತೆ
ಸಾಗರದೆಡೆಗೆ ಮುಖಮಾಡಿ ||
ಆಯಿತೆ ಸಾಗರ ಸಿಹಿ ನೀರಿನ ಕೊಳ
ಬದಲಾಗಲೆ ಇಲ್ಲ ಜೊತೆಗೂಡಿ || 4 ||

ಭಾರತ ಮಾತೆಯು ಕೊಟ್ಟಿಹಳೆಲ್ಲವ 
ಏನನು ಕೊಟ್ಟೆವು ಹಿಂತಿರುಗಿ ?
ಕೊಡುವುದೆ ಇದ್ದರೆ ಒಳಿತನೆ ಕೊಡುವ
ಚಂದದಿ ಬಾಳುವ ತಲೆಬಾಗಿ || 5 ||

-ಸುರೇಖಾ ಭಟ್, ಭೀಮಗುಳಿ
17.04.2015

No comments:

Post a Comment