Wednesday, January 21, 2015

"ರಾಮ-ಲಕ್ಷ್ಮಣರ ಜೊತೆಯಲ್ಲಿ"

ಒಂದು ದಿನ ಬೆಳಗಿನಲಿ ನನ್ನಷ್ಟಕೇ ನಾನು
ಮುಳುಗಿದ್ದೆನೆನ್ನ ಮನೆಗೆಲಸದಲ್ಲಿ ||
ಕರಗಂಟೆ ಸದ್ದಾಯ್ತು ಯಾರೊ ಬಂದಿರಬೇಕು
ಯಾಕೆ ಬಂದಿಹರೊ ಈ ಸಮಯದಲ್ಲಿ ? ||೧||

ಬಂದವನು ಶ್ರೀರಾಮ ಮೈ ಚಿವುಟಿಕೊಂಡೆ ನಿಜ 
ನನ್ನ ಕಣ್ಣುಗಳ ನಾ ನಂಬಲಿಲ್ಲ ! ||
ಕರೆದದ್ದು ಲಕ್ಷ್ಮಣನ ಬಂದವನು ರಾಮನಿವ
ಯಾಕೆ ಬಂದಿಹನೆಂದು ತಿಳಿಯಲಿಲ್ಲ. ||೨||

ಬಂದದ್ದು ಶುಭಗಳಿಗೆ ಸಂತಸವಾಯ್ತೆನಗೆ
ನಿನ್ನ ತಮ್ಮನ ನಾನು ಕಾಣಲಿತ್ತು ||
ಬಾರನೇನೋ ಅವನು ನಮ್ಮ ಮನೆಯಂಗಳಕೆ 
ಅವನೊಡನೆ ಮಾತಾಡಿ ತಿಳಿಯಲಿತ್ತು ||೩||

ನಸುನಕ್ಕ ಶ್ರೀರಾಮ ಹುಸಿಮುನಿಸ ತೋರುತಲಿ
ಒಳಗೆ ಬಾರದೆ ನಿಂದ ದ್ವಾರದಲ್ಲಿ ||
ಕೇಳಿದ್ದು ತಪ್ಪಾಯ್ತೆ ? ತೆಪ್ಪಗಿರಬೇಕಿತ್ತೆ ?
ಹೊರಟು ಬಿಡುವನೊ ಹಾಗೆ ಕೋಪದಲ್ಲಿ ||೪||

ನಾನೆಲ್ಲಿ ಹಾಗಂದೆ ? ನೀನು ನನ್ನಯ ತಂದೆ
ನಿನ್ನ ಮಗಳಾ ಮನೆಯು ಇದಲ್ಲವೇ ? ||
ಕೋಪ ಮಾಡದಿರಯ್ಯ ಬೇಸರಿಸ ಬೇಡಯ್ಯ
ಕಾದಿದ್ದೆ ಲಕ್ಷ್ಮಣನ ಗೊತ್ತಿಲ್ಲವೆ ? ||೫||

ಲಕ್ಷ್ಮಣನು ಬಂದಿಹನು ಬೀದಿಯಲಿ ನಿಂದಿಹನು
ರಥವ ನಿಲ್ಲಿಸಿ ಬರುವ ತಾಳು ಮಗಳೆ ||
ಅವನು ಒಬ್ಬನೆ ಬರನು ಎಂಬ ನಿಜವರಿತಾಗ 
ಕರೆತಂದೆ ತಡೆಯದೇ ನಿನ್ನ ರಗಳೆ ||೬||

ಅಷ್ಟರಲಿ ಬಂದನಾ ಸೌಮಿತ್ರಿ ದ್ವಾರದಲಿ
ಕೇಳಿದನು ಅಪ್ಪಣೆಯ ಬರಲು ಒಳಗೆ  ||
ಬಾರಯ್ಯ ಬಾರೊ ನೀ ನಿನ್ನ ಕಾಯುತಲಿದ್ದೆ 
ಎಷ್ಟು ಕಾಯಿಸಿಬಿಟ್ಟೆ ಬರಲು ಬಳಿಗೆ ||೭||

ಕಾಯುತ್ತ ನಿ೦ದೆನ್ನ ದೇಹ ಬಳಲುತಲಿಹುದು 
ಶಬರಿಯದೆ ಕತೆಯಾಯ್ತು ನನ್ನದೂನು ||
ನಿನ್ನ ನೋಡಲು ಬೇಕು, ಮಾತನಾಡಿಸಬೇಕು
ಭೇಟಿ ಮಾಡದೆ ಹೇಗೆ ಉಳಿವೆ ನಾನು ? ||೮||

ಬನ್ನಿ ಕೂಡಿರಿ ಒಮ್ಮೆ, ದಣಿವನಾರಿಸಿಕೊಳ್ಳಿ
ಕುಡಿದು ತಂಪಿನ ನೀರು ಜೊತೆಗೆ ಬೆಲ್ಲ ||
ಹೇಗೆ ಆಯಿತು ಪಯಣ ? ಸುಖಕರವದಾಗಿತ್ತೆ ?
ಯಾವಾಗಲೂ ಬರುವ ದಾರಿಯಲ್ಲ ||೯||

ಬಗೆಬಗೆಯ ಆಡುಗೆಗಳ ಸಿದ್ಧ ಮಾಡಿದೆ ನಾನು
ಅಪರೂಪದಲಿ ಬಂದ ಅತಿಥಿಗಳಿಗೆ ||
ಗಸಗಸೆಯ ಪಾಯಸವ ಮೆಚ್ಚಿ ತಿಂದನು ರಾಮ
ಚಿತ್ರಾನ್ನ ಹಿಡಿಸಿತಾ ಲಕ್ಷ್ಮಣನಿಗೆ ||೧೦||

ಹೇಳು ಲಕ್ಷ್ಮಣದೇವ ನಿನ್ನ ಜೀವನಕತೆಯ
ಲೋಕಕ್ಕೆ ತಿಳಿಯಲೀ ನಿನ್ನ ವಿಷಯ ||
ಹೇಳು ನೀ ಸೌಮಿತ್ರಿ ನಿನ್ನ ಯುದ್ಧದ ಕತೆಯ
ಅದು ಹೇಗೆ ನೀ ಕೊಂದೆ ಇಂದ್ರಾರಿಯ ? ||೧೧|

ನನದೇನು ಹೊಸತಿಲ್ಲ ರಾಮಕತೆ ಬರೆದುಬಿಡು
ನನ್ನದೆನ್ನುವ ವಿಷಯ ಬೇರೆಯಿಲ್ಲ ||
ನಾನು ರಾಮನ ತಮ್ಮ, ರಾಮ ನನ್ನಯ ಅಣ್ಣ
ಹೊಸತು ಬಿರುದುಗಳಲ್ಲಿ ಹಸಿವೆಯಿಲ್ಲ ||೧೨||

ಶ್ರೀರಾಮನಾ ಕತೆಯ ಎಲ್ಲರೂ ತಿಳಿದಿಹರು
ನನಗೆ ಬೇಕೆನಿಸಿದ್ದು ನಿನ್ನ ಕುರಿತೇ  ||
ರಾಮನಾ ಮುಖವನ್ನು ತಾ ನೋಡಿ ಸೌಮಿತ್ರಿ
ಹೇಳಲೇ ಬೇಕೇನು ನನ್ನ ಚರಿತೇ ? ||೧೩||

ಹೇಳಿಬಿಡು ಸೌಮಿತ್ರಿ ಅವಳ ಕಾಯಿಸಬೇಡ
ಅವಳು ಪಾಪದ ಹುಡುಗಿ ಬೇರೆಯಲ್ಲ ||
ಮನದಲಿರುವುದ ಹೇಳು ಬರೆದುಕೊಳ್ಳಲಿ ಅವಳು
ಸಂಕೋಚ ಎಳ್ಳಷ್ಟು ನಿನಗೆ ಸಲ್ಲ ||೧೪||

ಅಣ್ಣನಾಜ್ಞೆಯ ಕೇಳಿ ತೆರೆದಿಟ್ಟ ಸೌಮಿತ್ರಿ
ಚಂದದಲಿ ತೋರಿದನು ಬಾಳ ದಾರಿ ||
ಮುಚ್ಚಿಡದೆ ಹೇಳಿದನು ತನ್ನ ಬದುಕಿನ ನಡೆಯ 
ಸಾಕಲ್ಲವೇ ಎಂಬ ಬಿಂಕ ತೋರಿ ||೧೫||

ಅಣ್ಣನಿಗೆ "ಶ್ರೀ" ಉಂಟು ನಿನಗೆ ಮಾತ್ರವೆ ಇಲ್ಲ
ಬೇಕಿಲ್ಲವೇನಯ್ಯ ನಿನಗೆ ಬಿರುದು  ||
ಶ್ರೀ ಎಂಬ ಉಪನಾಮ ಅಣ್ಣನಿಗೆ ಇರಲಿ ಬಿಡು
ಅಣ್ಣನೇ ಬಂದಿಹನು ನನಗೆ ಒಲಿದು ||೧೬||

ಸಾಕಷ್ಟು ಪಟ್ಟಾಂಗ ನಡೆಯಿತದು ನಮ್ಮಲ್ಲಿ
ಹರಿಯಿತ೦ದಿನ ದಿವಸ ಹಾಸ್ಯಹೊನಲು ||
ಮತ್ತೆ ಕಾಣುವ ಎಂದು ಹೊರಟ ಸಮಯದಲೊಮ್ಮೆ 
ಕಣ್ಣಂಚು ನೀರು ಸಂತಸದ ಕಡಲು ||೧೭||

ನಾನಿಂದು ಹೇಳುತಿಹೆ ಲಕ್ಷ್ಮಣನ ಕತೆಯನ್ನು
ಸುವಿಸಾರವಾಗಿಯೇ ಕೇಳಿಕೊಳ್ಳಿ  ||
ಸಮಯ ಹೊಂದಿಸಿಕೊಂಡು ನೋಡಿಬಿಡಿ ಹಾಗೊಮ್ಮೆ
ಸಂತಸವ ನಿಮ್ಮಲ್ಲು ತುಂಬಿಕೊಳ್ಳಿ ||೧೮||

-ಸುರೇಖಾ ಭಟ್, ಭೀಮಗುಳಿ
21.01.2015

No comments:

Post a Comment