Saturday, January 31, 2015

"ಮಂಥರೆ"

ಒಂದು ದಿನ ಸಂಜೆಯಾ ವಿಶ್ರಮದ ವೇಳೆಯಲಿ
ಬಂದಳೊಬ್ಬಳು ಮುದುಕಿ ನಮ್ಮ ಮನೆಗೆ ||
ಬೆನ್ನು ಗೂನಾಗಿಹುದು, ಮುಖವು ಸಹ ಬಾಡಿಹುದು
ಯಾಕೆ ಬಂದಿಹಳೀಕೆ ಎನ್ನ ಗೃಹಕೆ ? ||೧||

ಏನು ಬೇಕಾಗಿತ್ತು ? ಯಾರ ಕಾಣುವುದಿತ್ತು ?
ಯಾಕೆ ಬಂದಿರಿ ಎಂದು ಕೇಳಬಹುದೆ ? ||
ನಿನ್ನ ಕಾಣುವುದಿತ್ತು ಮಾತನಾಡುವುದಿತ್ತು
ನನ್ನ ವಿಷಯವನಿಷ್ಟು ಹೇಳಬಹುದೆ ? ||೨||

ದುಷ್ಟೆ ಮಂಥರೆಯೆಂದು ಜರೆಯುವರು ನನ್ನನ್ನು
ನಿಜವನ್ನು ತಿಳಿಯದಾ ಮೂಢರಿವರು ||
ನನ್ನ ಕತೆಯನ್ನೆಲ್ಲ ಬಿಚ್ಚಿಡಲು ಬಂದಿರುವೆ
ಮತ್ತೆ ನಿರ್ಧರಿಸಲೀ ಜಗದ ಜನರು ||೩||

ಬಂದು ನೀ ಕುಳಿತುಕೋ ವಿಶ್ರಮಿಸು ಅರೆಗಳಿಗೆ
ಕತೆಯನ್ನು ಮತ್ತೆ ಹೇಳ್ದರಾಯ್ತು  ||
ಕುಡಿವುದಕೆ ಏನ್ಕೊಡಲಿ ಕಾಫಿ, ಮಜ್ಜಿಗೆ ನೀರು
ಪುನರ್ಪುಳಿ ಪಾನಕವೊ ಯಾವುದಾಯ್ತು ? ||೪||

ನನಗೆ ನೀ ಕೊಡಬೇಡ ಏನನ್ನೂ ಓ ಮಗಳೆ
ನನಮಾತ ಕೇಳುವರು ನನಗೆ ಬೇಕು ||
ಆತಿಥ್ಯದಿಚ್ಛೆಯಲಿ ನಾನು ಬಂದವಳಲ್ಲ
ನಿನ್ನ ಬಳಿಯಲಿ ಒಮ್ಮೆ ಕೂರಬೇಕು ||೫||

ಹೇಳಲದೆ ಹಿಂಜರಿಕೆ, ಮುದುಡಿಹೋಗಿಹೆ ನಾನು
ಮೌನವೇ ತುಂಬಿಹುದು ಬಾಳಿನಲ್ಲಿ ||
ನಾನು ಹೇಳುವುದನ್ನು ಕೇಳುವರು ಸಿಗಲಿಲ್ಲ
ಅದಕಾಗಿ ಬಂದಿರುವೆ ನಾನು ಇಲ್ಲಿ ||೬||

ಹಿಂಜರಿಕೆ, ಬಗ್ಗುವಿಕೆ, ತಗ್ಗುವಿಕೆ ಬೇಕಿಲ್ಲ 
ನಿನ್ನಳಲು ಆಲಿಸಲು ನಾನಿಲ್ಲವೆ ? ||
ನಿನ್ನ ಮನಸಿಲಿ ಒಮ್ಮೆ ನೆಮ್ಮದಿಯು ಉಕ್ಕಿದರೆ 
ಅದು ನನ್ನ ಜೀವಿತದ ಗುರಿಯಲ್ಲವೇ ? ||೭||

ನಾನು ಪೇಳುವುದೆಲ್ಲ ನೀ ಕೇಳು ಮನಸಿಟ್ಟು
ನಿನ್ನಭಿಪ್ರಾಯವನು ಮತ್ತೆ ಹೇಳು ||
ಆಯ್ತು ಮಂಥರೆ ಹೇಳು, ನಾನು ಸುಮ್ಮನೆ ಜರೆಯೆ
ನಡುವೆ ಬಾಯ್ತೆರೆದರೆ ನೀನು ಕೇಳು ||೮||

ನಿನ್ನಯಾ ಮಾತನ್ನು ಮೆಚ್ಚಿದೆನು ಓ ಮಗಳೆ
ಮೂಕ ವಿಸ್ಮಿತಳಾದೆ ನಿನ್ನ ನಡೆಗೆ ||
ತನ್ತನವ ನಿನ್ನಲ್ಲಿ ಬಿಚ್ಚಿಡುವೆ ನಾನಿಂದು
ಜಗವೆಲ್ಲ ನೋಡಲಿ ನನ್ನ ಕಡೆಗೆ ||೯||

ಮಂಥರೆಯ ಸ್ವಗತವನು ನಿಮ್ಮೆದುರು ತೆರೆದಿಡುವೆ
ನಿರ್ಧರಿಪುದೀಗ ನಿಮ್ಮಯಾ ಕೆಲಸ ||
ಒಂದು ಅರೆಗಳಿಗೆಯಾ ಮಂಥರೆಗೆ ಕೊಟ್ಟುಬಿಡಿ
ನೋಯಿಸಾ ಬೇಡಿರೈ ಅವಳ ಮನಸ ||೧೦||

ಸುರೇಖಾ ಭಟ್, ಭೀಮಗುಳಿ
31.01.2015

Friday, January 23, 2015

" ಭಾವ-ಭಂಗಿ "

ಪೋಣಿಸಲು ಹೊರಟಿಹೆನು "ಸ್ವಗತಗಳ ಸರಮಾಲೆ"
ಪರಿಪರಿಯ ಹೂಗಳಿವೆ ಮೊಲ್ಲೆ ಜಾಜಿ ||
ಚಂದದಾ ಪರಿಮಳವ ತಾ ಸೂಸುತಿಹವಿಲ್ಲಿ
ಅವುಗಳಾ ಜೊತೆಯಲ್ಲಿ ನಾನು ರಾಜಿ ||1||

ಸೃಷ್ಠಿಕರ್ತನ ಮನೆಯ ಆಟದಾ ಬಯಲಿನಲಿ
ವೇಷವಾ ತೊಟ್ಟಿಹರು ಜಗದ ಮುಂದು ||
ತಂತನವ ಬಿಚ್ಚಿಡುವ ಹವಣಿಕೆಯ ಹಾದಿಯಲಿ 
ಹೇಳಿಕೊಳ್ಳುತ್ತಿಹರು ನನ್ನೊಳಿ೦ದು ||2||

ಧ್ಯಾನಿಸುತ ಕುಳಿತೊಡನೆ ಎಡಬಿಡದೆ ಮೂರುದಿನ
ಕುಣಿಕುಣಿದು ಬರುತಾವೆ ನನ್ನ ಮನಕೆ ||
ಹೇಳಿಕೊಳ್ಳುವವು ತಮ್ಮೊಡಲಿನಾಳದ ತುಡಿತ
ಬಿಡದೆ ತೀರಿಸುತಾವೆ ನನ್ನ ಬಯಕೆ ||3||

ಅಂದಚಂದದ ಪಾತ್ರ ಕಣ್ಮುಂದೆ ಬರುತಲಿವೆ
ಕರೆದಾಗ ಬರುತಾವೆ ಎನದೆ ಇಲ್ಲ ||
ತಪ್ಪಿಸುತ ಸರತಿಯನು ಕೀಟಲೆಯ ಮಾಡುತಿವೆ
ಶಿಸ್ತಿನಲ್ಲಿರುವುದಕೆ ಇಷ್ಟವಿಲ್ಲ ||4||

ಇದ್ದುದನು ಸರಿಯಾಗಿ ನಿಮ್ಮೊಡನೆ ಹೇಳುವೆನು
ಗೊತ್ತಿರುವ ಪಾತ್ರದಾ ಭಾವ-ಭಂಗಿ ||
ಅವರು ಹೇಳಿದ ಕತೆಯ ಬಿಡದೆ ಬಿತ್ತರಿಸುವೆನು
ನಾನವರ ನಡುವಿನಲಿ ಪುಟ್ಟ ತಂಗಿ ! ||5||

ಸುರೇಖಾ ಭಟ್, ಭೀಮಗುಳಿ
23.01.2015

Wednesday, January 21, 2015

"ರಾಮ-ಲಕ್ಷ್ಮಣರ ಜೊತೆಯಲ್ಲಿ"

ಒಂದು ದಿನ ಬೆಳಗಿನಲಿ ನನ್ನಷ್ಟಕೇ ನಾನು
ಮುಳುಗಿದ್ದೆನೆನ್ನ ಮನೆಗೆಲಸದಲ್ಲಿ ||
ಕರಗಂಟೆ ಸದ್ದಾಯ್ತು ಯಾರೊ ಬಂದಿರಬೇಕು
ಯಾಕೆ ಬಂದಿಹರೊ ಈ ಸಮಯದಲ್ಲಿ ? ||೧||

ಬಂದವನು ಶ್ರೀರಾಮ ಮೈ ಚಿವುಟಿಕೊಂಡೆ ನಿಜ 
ನನ್ನ ಕಣ್ಣುಗಳ ನಾ ನಂಬಲಿಲ್ಲ ! ||
ಕರೆದದ್ದು ಲಕ್ಷ್ಮಣನ ಬಂದವನು ರಾಮನಿವ
ಯಾಕೆ ಬಂದಿಹನೆಂದು ತಿಳಿಯಲಿಲ್ಲ. ||೨||

ಬಂದದ್ದು ಶುಭಗಳಿಗೆ ಸಂತಸವಾಯ್ತೆನಗೆ
ನಿನ್ನ ತಮ್ಮನ ನಾನು ಕಾಣಲಿತ್ತು ||
ಬಾರನೇನೋ ಅವನು ನಮ್ಮ ಮನೆಯಂಗಳಕೆ 
ಅವನೊಡನೆ ಮಾತಾಡಿ ತಿಳಿಯಲಿತ್ತು ||೩||

ನಸುನಕ್ಕ ಶ್ರೀರಾಮ ಹುಸಿಮುನಿಸ ತೋರುತಲಿ
ಒಳಗೆ ಬಾರದೆ ನಿಂದ ದ್ವಾರದಲ್ಲಿ ||
ಕೇಳಿದ್ದು ತಪ್ಪಾಯ್ತೆ ? ತೆಪ್ಪಗಿರಬೇಕಿತ್ತೆ ?
ಹೊರಟು ಬಿಡುವನೊ ಹಾಗೆ ಕೋಪದಲ್ಲಿ ||೪||

ನಾನೆಲ್ಲಿ ಹಾಗಂದೆ ? ನೀನು ನನ್ನಯ ತಂದೆ
ನಿನ್ನ ಮಗಳಾ ಮನೆಯು ಇದಲ್ಲವೇ ? ||
ಕೋಪ ಮಾಡದಿರಯ್ಯ ಬೇಸರಿಸ ಬೇಡಯ್ಯ
ಕಾದಿದ್ದೆ ಲಕ್ಷ್ಮಣನ ಗೊತ್ತಿಲ್ಲವೆ ? ||೫||

ಲಕ್ಷ್ಮಣನು ಬಂದಿಹನು ಬೀದಿಯಲಿ ನಿಂದಿಹನು
ರಥವ ನಿಲ್ಲಿಸಿ ಬರುವ ತಾಳು ಮಗಳೆ ||
ಅವನು ಒಬ್ಬನೆ ಬರನು ಎಂಬ ನಿಜವರಿತಾಗ 
ಕರೆತಂದೆ ತಡೆಯದೇ ನಿನ್ನ ರಗಳೆ ||೬||

ಅಷ್ಟರಲಿ ಬಂದನಾ ಸೌಮಿತ್ರಿ ದ್ವಾರದಲಿ
ಕೇಳಿದನು ಅಪ್ಪಣೆಯ ಬರಲು ಒಳಗೆ  ||
ಬಾರಯ್ಯ ಬಾರೊ ನೀ ನಿನ್ನ ಕಾಯುತಲಿದ್ದೆ 
ಎಷ್ಟು ಕಾಯಿಸಿಬಿಟ್ಟೆ ಬರಲು ಬಳಿಗೆ ||೭||

ಕಾಯುತ್ತ ನಿ೦ದೆನ್ನ ದೇಹ ಬಳಲುತಲಿಹುದು 
ಶಬರಿಯದೆ ಕತೆಯಾಯ್ತು ನನ್ನದೂನು ||
ನಿನ್ನ ನೋಡಲು ಬೇಕು, ಮಾತನಾಡಿಸಬೇಕು
ಭೇಟಿ ಮಾಡದೆ ಹೇಗೆ ಉಳಿವೆ ನಾನು ? ||೮||

ಬನ್ನಿ ಕೂಡಿರಿ ಒಮ್ಮೆ, ದಣಿವನಾರಿಸಿಕೊಳ್ಳಿ
ಕುಡಿದು ತಂಪಿನ ನೀರು ಜೊತೆಗೆ ಬೆಲ್ಲ ||
ಹೇಗೆ ಆಯಿತು ಪಯಣ ? ಸುಖಕರವದಾಗಿತ್ತೆ ?
ಯಾವಾಗಲೂ ಬರುವ ದಾರಿಯಲ್ಲ ||೯||

ಬಗೆಬಗೆಯ ಆಡುಗೆಗಳ ಸಿದ್ಧ ಮಾಡಿದೆ ನಾನು
ಅಪರೂಪದಲಿ ಬಂದ ಅತಿಥಿಗಳಿಗೆ ||
ಗಸಗಸೆಯ ಪಾಯಸವ ಮೆಚ್ಚಿ ತಿಂದನು ರಾಮ
ಚಿತ್ರಾನ್ನ ಹಿಡಿಸಿತಾ ಲಕ್ಷ್ಮಣನಿಗೆ ||೧೦||

ಹೇಳು ಲಕ್ಷ್ಮಣದೇವ ನಿನ್ನ ಜೀವನಕತೆಯ
ಲೋಕಕ್ಕೆ ತಿಳಿಯಲೀ ನಿನ್ನ ವಿಷಯ ||
ಹೇಳು ನೀ ಸೌಮಿತ್ರಿ ನಿನ್ನ ಯುದ್ಧದ ಕತೆಯ
ಅದು ಹೇಗೆ ನೀ ಕೊಂದೆ ಇಂದ್ರಾರಿಯ ? ||೧೧|

ನನದೇನು ಹೊಸತಿಲ್ಲ ರಾಮಕತೆ ಬರೆದುಬಿಡು
ನನ್ನದೆನ್ನುವ ವಿಷಯ ಬೇರೆಯಿಲ್ಲ ||
ನಾನು ರಾಮನ ತಮ್ಮ, ರಾಮ ನನ್ನಯ ಅಣ್ಣ
ಹೊಸತು ಬಿರುದುಗಳಲ್ಲಿ ಹಸಿವೆಯಿಲ್ಲ ||೧೨||

ಶ್ರೀರಾಮನಾ ಕತೆಯ ಎಲ್ಲರೂ ತಿಳಿದಿಹರು
ನನಗೆ ಬೇಕೆನಿಸಿದ್ದು ನಿನ್ನ ಕುರಿತೇ  ||
ರಾಮನಾ ಮುಖವನ್ನು ತಾ ನೋಡಿ ಸೌಮಿತ್ರಿ
ಹೇಳಲೇ ಬೇಕೇನು ನನ್ನ ಚರಿತೇ ? ||೧೩||

ಹೇಳಿಬಿಡು ಸೌಮಿತ್ರಿ ಅವಳ ಕಾಯಿಸಬೇಡ
ಅವಳು ಪಾಪದ ಹುಡುಗಿ ಬೇರೆಯಲ್ಲ ||
ಮನದಲಿರುವುದ ಹೇಳು ಬರೆದುಕೊಳ್ಳಲಿ ಅವಳು
ಸಂಕೋಚ ಎಳ್ಳಷ್ಟು ನಿನಗೆ ಸಲ್ಲ ||೧೪||

ಅಣ್ಣನಾಜ್ಞೆಯ ಕೇಳಿ ತೆರೆದಿಟ್ಟ ಸೌಮಿತ್ರಿ
ಚಂದದಲಿ ತೋರಿದನು ಬಾಳ ದಾರಿ ||
ಮುಚ್ಚಿಡದೆ ಹೇಳಿದನು ತನ್ನ ಬದುಕಿನ ನಡೆಯ 
ಸಾಕಲ್ಲವೇ ಎಂಬ ಬಿಂಕ ತೋರಿ ||೧೫||

ಅಣ್ಣನಿಗೆ "ಶ್ರೀ" ಉಂಟು ನಿನಗೆ ಮಾತ್ರವೆ ಇಲ್ಲ
ಬೇಕಿಲ್ಲವೇನಯ್ಯ ನಿನಗೆ ಬಿರುದು  ||
ಶ್ರೀ ಎಂಬ ಉಪನಾಮ ಅಣ್ಣನಿಗೆ ಇರಲಿ ಬಿಡು
ಅಣ್ಣನೇ ಬಂದಿಹನು ನನಗೆ ಒಲಿದು ||೧೬||

ಸಾಕಷ್ಟು ಪಟ್ಟಾಂಗ ನಡೆಯಿತದು ನಮ್ಮಲ್ಲಿ
ಹರಿಯಿತ೦ದಿನ ದಿವಸ ಹಾಸ್ಯಹೊನಲು ||
ಮತ್ತೆ ಕಾಣುವ ಎಂದು ಹೊರಟ ಸಮಯದಲೊಮ್ಮೆ 
ಕಣ್ಣಂಚು ನೀರು ಸಂತಸದ ಕಡಲು ||೧೭||

ನಾನಿಂದು ಹೇಳುತಿಹೆ ಲಕ್ಷ್ಮಣನ ಕತೆಯನ್ನು
ಸುವಿಸಾರವಾಗಿಯೇ ಕೇಳಿಕೊಳ್ಳಿ  ||
ಸಮಯ ಹೊಂದಿಸಿಕೊಂಡು ನೋಡಿಬಿಡಿ ಹಾಗೊಮ್ಮೆ
ಸಂತಸವ ನಿಮ್ಮಲ್ಲು ತುಂಬಿಕೊಳ್ಳಿ ||೧೮||

-ಸುರೇಖಾ ಭಟ್, ಭೀಮಗುಳಿ
21.01.2015

Saturday, January 17, 2015

"ಗೆಜ್ಜೆ - ಹೆಜ್ಜೆ"

ಜಗದಲ್ಲಿ ಎಲ್ಲರದು ಮುನ್ನೋಟ - ಮುಂದೋಟ
ನನ್ನ ಜೊತೆಯಲಿ ಬರುವ ಗೆಳೆಯರಿಲ್ಲ ||
ಓಡುವರು-ನಡೆವವರು ಅವರಷ್ಟಕವರಿರಲಿ
ಮುನ್ನೆಡೆವ ದಾರಿಯಲಿ ಆಸಕ್ತಿ ಇಲ್ಲ. || 1 ||

ಹೊರಟಿರುವ ಯಾತ್ರೆಯಿದು ರಾಮ-ಕೃಷ್ಣರ ಜೊತೆಗೆ
ನಾಳೆಯಾ ಚಿಂತೆ ನನ್ನಲ್ಲಿ ಇಲ್ಲ. ||
ಬಂಧನವ ಕಳೆವ ನಿಜ ಅಂಬಿಗನೆ ಜೊತೆಯಿರಲು
ಚಂದದಲಿ ಕಾಯುವನು ಆತಂಕ ಸಲ್ಲ. || 2 ||

ನೋವಿಹುದು ನಲಿವಿಹುದು ಚೆಲ್ಲಾಟವಿಹುದಿಲ್ಲಿ
ಹೊಡೆದಾಟ ಬಡಿದಾಟ ಎಲ್ಲ ಇಹುದು ||
ಬಿಚ್ಚಿಡಲು ಹೊರಟಿರುವೆ ಸತ್ವವಿಹ ಸರಮಾಲೆ
ನೀವುಗಳು ನನ್ನ ಜೊತೆ ಸೇರಬಹುದು ||3||

ಹೊರಟಿರುವೆ ನಾನಿಂದು ಹಿಮ್ಮುಖದ ದಾರಿಯಲಿ
ಬರುವಿರಾ ಜೊತೆಯಲ್ಲಿ ನಾಲ್ಕು ಹೆಜ್ಜೆ ||
ನಮ್ಮ ಪಯಣವು ನಿತ್ಯ ರಾಮ-ಕೃಷ್ಣರ ಜೊತೆಗೆ
ಕುಣಿಯೋಣ ಬನ್ನಿರೈ ಕಟ್ಟಿ ಗೆಜ್ಜೆ ! ||4||

ಸುರೇಖಾ ಭಟ್, ಭೀಮಗುಳಿ
17.01.2015

Friday, January 16, 2015

" ಇದು ಕವಿತ್ವವೋ - ಕಪಿತ್ವವೋ ? "

ಚೌಪದಿಯ ರೀತಿಯಲಿ ಬರೆಯಹೊರಟಿಹೆ ನಾನು
ಕುತ್ತಿಗೆಗೆ ಕೈ ಹಾಕಿ ದಬ್ಬಬೇಡಿ ||
ಪ್ರಾಸ ಕೂಡಿಸುವಲ್ಲಿ ಮೋಸವಾದರು ಒಮ್ಮೆ
ಇವಳೇಕೆ ಹೀಗೆಂದು ಬೈಯ್ಯಬೇಡಿ || 1 ||

ನನ್ನ ಕವಿತ್ವವನು ಕಪಿತ್ವವೆಂದೆನಬೇಡಿ
ಒಂದೊಂದೆ ಅಕ್ಷರವು ಹೆಚ್ಚು ಕಡಿಮೆ ||
ಕಪಿಶ್ರೇಷ್ಠ ಹನುಮಂತ ನನ್ನ ಪಕ್ಷದಲಿಹನು
ಗೊತ್ತಿಲ್ಲದವರುಂಟೆ ಅವನ ಮಹಿಮೆ ||2||

ಕಗ್ಗದಾ ಸವಿಯನ್ನು ಅರೆದು ಕುಡಿದಿಹೆ ನಾನು
ನೆತ್ತಿಗೇರುವುದೇನು ಕುಡಿದ ಅಮಲು ||
ಪದ್ಯದಾ ಮಧ್ಯದಲಿ ಗುಂಡಪ್ಪ ಇಣುಕಿದರೆ
ಬಂದರೂ ಬರಬಹುದು ಕಗ್ಗ ಘಮಲು ||3||

ಪದ್ಯಗಳ ಗುಂಗಿನಲಿ ಕಳೆದುಹೋಗಿಹೆ ನಾನು
ಕುಂತಲ್ಲಿ ನಿಂತಲ್ಲಿ ಹೊಳೆವ ಸಾಲು ||
ನನ್ನ ಬರೆ ನನ್ನ ಬರೆ ಎಂದು ಕಾಡಿವೆ ನೋಡಿ
ಹಿಡಿದೆಳೆಯುತಿವೆಯಲ್ಲ ನನ್ನ ಕಾಲು ! ||4||

-ಸುರೇಖಾ ಭಟ್, ಭೀಮಗುಳಿ
16.01.2015

Wednesday, January 14, 2015

"ಪದ್ಯ - ಗದ್ಯ"

ನಾಲ್ಕಾರು ನಿಯಮಗಳ ಬಿಡದೆ ಪಾಲಿಸಬೇಕು
ಜಗಣ ಗುರು ಲಘುವೆಡೆಗೆ ಗಮನ ಬೇಕು ||
ಬಿಟ್ಟರೊಲಿಯದು ಪದ್ಯ - ಗದ್ಯಕದು ಹಾಗಿಲ್ಲ
ಛಂದಸ್ಸು-ಮಾತ್ರೆಗಳ ಚಿಂತೆಯಿಲ್ಲ ||1||

ನಿಯಮಗಳ ಹಂಗಿಲ್ಲ ನನ್ನ ಗದ್ಯದ ಹದಕೆ
ಮನದಲುಕ್ಕುವ ಭಾವ ಕಕ್ಕುವುದಕೆ ||
ಕಣ್ಣು ಹಾಯಿಸಿರೊಮ್ಮೆ ನನ್ನ ಗದ್ಯದ ಕಡೆಗೆ
ಸಾಹಿತ್ಯ ಹಿತತಾನೆ ನಮ್ಮಮ್ಮಗೆ ||2||


ಸುರೇಖಾ ಭಟ್, ಭೀಮಗುಳಿ
14.01.2015

Sunday, January 11, 2015

"ಎಚ್ಚೆತ್ತ ಕವಿತ್ವ"

ನಿನ್ನೆ ಓದಿದೆ ನಾನು ಒಂದು ಸುಂದರ ಪದ್ಯ
ನನ್ನೊಳಗಿನಾ ಕವಿಯು ಎಚ್ಚೆತ್ತು ಬಿಟ್ಟ
ಕವಿತೆಯನು ಬರೆಯೆಂದು ಪಟ್ಟು ಹಿಡಿದಿಹನವನು
ಸಹಿಸಿಕೊಂಡರೆ ನಿಮಗೆ ರಾಜಪಟ್ಟ !

- ಸುರೇಖಾ ಭಟ್, ಭೀಮಗುಳಿ
11.01.2015