
ಇಷ್ಟು ಕಾಡುವುದೇಕೆ ಕರುಣೆಯಿಲ್ಲದೆ ಹೀಗೆ
ನಷ್ಟವಾಗುತ್ತಿಹುದು ಸುಖದ ಘಳಿಗೆ ||
ಸ್ಪಷ್ಟವಿಲ್ಲವೆ ಹೇಳು ಮನದೊಡಲ ಮಾತುಗಳು
ಕಷ್ಟವಾಗುತ್ತಿಹುದು ನಿಜದಿ ನನಗೆ || ೧ ||
ದಿಡ್ಡಿ ಬಾಗಿಲಿನಲ್ಲೆ ನಾನಡ್ಡ ನಿಂತಿರುವೆ
ಒಡ್ಡುತೆನ್ನಯ ತನುವ ತಂಗಾಳಿಗೆ ||
ದಡ್ಡನಂತಾಡದೆಲೆ ಬಳಿಬಂದು ಸಡಗರಿಸು
ದೊಡ್ಡ ಸಂಪತ್ತಿದುವೆ ಸಿರಿಬಾಳಿಗೆ || ೨ ||
ಗುಬ್ಬೆತೋಳಿನ ರವಿಕೆ, ದಟ್ಟನೀಲಿಯ ಸೀರೆ
ತಬ್ಬಿಕೊಂಡಿದೆ ಮುಡಿಯ ಮಲ್ಲಿಗೆಯ ಮಾಲೆ ||
ಕೊಬ್ಬುತೋರುವುದೇಕೆ ಬಿರುನುಡಿಯ ಮೊನಚೇಕೆ
ಹಬ್ಬ ಮಾಡುವ ಬಾರೊ-ನಾನು ನಿನ್ನವಳೆ || ೩ ||
- ಸುರೇಖಾ ಭೀಮಗುಳಿ
25/10/2017
ಚಿತ್ರ : ಬೇರೆಯವರ ಗೋಡೆಯಿಂದ ಕದ್ದದ್ದು.
http://bhaavabhitti.weebly.com/
ಥೋ ! ಕರ್ಮಕಾಂಡ ! ವಿರಹದ ಬಗ್ಗೆ ಅನುಭವನೇ ಇಲ್ಲದ್ದೋಳು ವಿರಹಗೀತೆ ಬರೆದ್ರೆ ಹೀಗೇ ಆಗೋದು.... ಇದು ವಿರಹ ಗೀತೆನಾ ? ಅಥವಾ ಪ್ರೇಮಗೀತೆನಾ ? ಅಂಥ ನನಗೇ ಕನ್ಫೂಷನ್ನು.... ಅಂಥದ್ದೆಲ್ಲ ಏನಿಲ್ಲ ಮಾರಾಯ್ರೇ ... ಯಾರದ್ದೋ ಗೋಡೆಯಲ್ಲಿ ಸಿಕ್ಕಿದ ಚಿತ್ರಕ್ಕೆ ಕವನ ಬರೆದದ್ದು ಅಷ್ಟೇ....
ಚಂದ ಪದ್ಯ
ReplyDelete