Tuesday, May 19, 2015

"ಛಂದಸ್ಸಿನ ಅಂದ"


ಕವನಗಳ ಲೋಕದಲಿ ಸಂಚರಿಸಿ ನೋಡಿದರೆ 
ಜಗಣ ಗುರು ಛಂದಸ್ಸಿನಂದ ತಿಳಿಯುವುದು ||
ಹೊಳೆಯ ನೀರಲಿ ಇಳಿದು ಕೈಕಾಲುಬಡಿಯದಿರೆ 
ಈಜೆಂಬ ವಿದ್ಯೆಯನು ಹೇಗೆ ಕಲಿಯುವುದು ? || 1 ||

ಒಮ್ಮೆ ಕಲಿತರೆ ವಿದ್ಯೆ, ಬಿಟ್ಟರೂ ಬಿಡದೆಮ್ಮೆ
ತಾನ್ತಾನೆ ಛಂದಸ್ಸು, ಅಂದ ತೋರುವುದು || 
ಕೈಕಾಲುಗಳ ಕಟ್ಟಿ ನೀರಿನಲ್ಲೆಸೆದರೂ 
ಮನಮಾಡೆ ತಕ್ಷಣದಿ ಬದುಕಿ ಬರಬಹುದು || 2 ||

ಅತಿಯಲ್ಲದಾ ವಿದ್ಯೆ, ಮಿತಿಯಲ್ಲಿನಾ ಜ್ಞಾನ 
ಹದದಲ್ಲಿ ಇವೆಯಲ್ಲ ಪದದ ಸಂಪತ್ತು ||
ಮನಸಿಟ್ಟು ಬರೆಯುವೆನು ಮನದ ಭಾವವನೆಲ್ಲ
ನನ್ನಿಂದ ಬರದಿರಲಿ ಕವನಕಾಪತ್ತು || 3 ||

- ಸುರೇಖಾ ಭಟ್, ಭೀಮಗುಳಿ
19/05/2015

Monday, May 18, 2015

"ವೈಶಾಖ ಪುಷ್ಪ"

ವೈಶಾಖ ಬಂತೆಂದು ನಿನಗಾರು ಹೇಳಿದರು ?
ತೆಲೆತುಂಬ ಹೂ ಮುಡಿದು ನಿಂತೆಯಲ್ಲೆ ||
ಹನ್ನೊಂದು ಮಾಸಗಳ ತಪವಿಂದು ಮುಗಿದಿಹುದೆ ?
ಸೌಂದರ್ಯ ಸೂಸುತಿಹೆ ಮೀರಿ ಎಲ್ಲೆ || 1 ||

ಎಲ್ಲಿಂದ ಬಂದು ನೀ ನಮ್ಮೂರ ಸೇರಿದೆಯೋ
ಈ ನೆಲದ ಗಟ್ಟಿತನ ಹೊಂದಲಿಲ್ಲ ||
ಬಿರುಗಾಳಿ ಮಳೆಯೆಂದು ಕೊಂಬೆ ರೆಂಬೆಯೆ ಮುರಿದು
ಧರೆಗುರುಳುವುದೇಕೆ ತಿಳಿಯಲಿಲ್ಲ || 2 ||

ವರ್ಷಕೊಂದಾವರ್ತಿ ಬುಟ್ಟಿಗಟ್ಟಲೆ ಹೂವು
ಹೆಣ್ಣಿನಾ ಮುಡಿಯನ್ನು ಏರಲಿಲ್ಲ ||
ರಕ್ತವರ್ಣದ ಪುಷ್ಪ ಪರಿಪೂರ್ಣವಾದರೂ
ದೇವರಾ ಪೂಜೆಯಲಿ ಸಲ್ಲಲಿಲ್ಲ || 3 ||

-ಸುರೇಖಾ ಭೀಮಹುಳಿ
18/05/2015
ಚಿತ್ರಕೃಪೆ : ಇಂಟರ್ ನೆಟ್

Friday, May 8, 2015

"ಬಾಳಿನಾ ದಾರಿ"


ಬಾಳಿನಾ ದಾರಿಯಲಿ ಏರುಮುಖದಾ ಪಯಣ
ಪಯಣಿಸಲು ನಮ್ಮ ಮನ ಸಿದ್ಧವಿರಲಿ ||
ಗುರಿಯ ಮುಟ್ಟಿದ ಮೇಲೆ ನೋಡುವಾ ದೃಶ್ಯಗಳು
ಪಯಣದಾ ಕಷ್ಟಗಳ ಮರೆಸಿಬಿಡಲಿ || 1 ||

ಒಮ್ಮೆ ಏರುವ ದಾರಿ, ಮತ್ತೆ ಇದೆ ಸಮತಟ್ಟು
ಎದುರಿಸುವ ಕೆಚ್ಚು ಅದು ಹೆಚ್ಚುತಿರಲಿ ||
ಇದೆ ದಾರಿ ಬೇಕೆಂಬ ಆಯ್ಕೆಯು ನಮಗಿಲ್ಲ
ಕಲ್ಲು ಮುಳ್ಳಿನ ದಾರಿ ಮರೆಯದಿರಲಿ || 2 ||

ಕಷ್ಟಗಳು ಬಂದಾಗ ಎದುರಿಸುವ ಮನ ಬೇಕು
ಸುಖವೆನ್ನುವುದರ ಬೆಲೆ ಹೆಚ್ಚು ಆಗ ||
ನಷ್ಟಗಳು ಬಾರದೇ ನೋವಿನನುಭವವಿರದೆ
ನಮ್ಮ ಅರಿವಿಗೆ ಬರದು ರಾಜ ಯೋಗ || 3 ||

ದೇವನುದ್ಯಾನದಲಿ ಬೆಳೆದ ಗಿಡಗಳು ನಾವು
ಹೇಗೆ ಬಾಳಿಸಬೇಕು ಅವನ ಹಕ್ಕು ||
ತೋಟದಾ ಮಾಲೀಕ, ಮಾಲಿಯೂ ಆತನೇ
ಅವನೆದುರು ನಡೆದೀತೆ ನಮ್ಮ ಸೊಕ್ಕು ? || 4 ||

ಸುರೇಖಾ ಭೀಮಗುಳಿ
08/05/2015

ಛಾಯಾಚಿತ್ರ : ಸುಮಂತ ಭೀಮಗುಳಿ
ಸ್ಥಳ : ಗಡಾಯಿಕಲ್ - ಉಜಿರೆ ಸಮೀಪ
ಸಂದರ್ಭ : 2013 ಫೆಬ್ರವರಿ 10. ಮೈಸೂರು ಯೂತ್ ಹಾಸ್ಟೆಲ್ ನವರ ಜೊತೆ ನಮ್ಮ ಕುಟುಂಬದ ಟ್ರಕ್ಕಿಂಗ್ ಸವಿನೆನಪು....