Sunday, March 1, 2015

"ಇದು ಪದ್ಯವೂ ಅಲ್ಲ - ಗದ್ಯವೂ ಅಲ್ಲ !"

ಓ ಮುದ್ದು ಮಕ್ಕಳೇ ! 
ನೀವೇಕೆ ಮುಚ್ಚಿ ಕುಳಿತಿರಿ ಕಿವಿ-ಬಾಯಿ-ಕಣ್ಣು ?
ಗಾಂಧೀಜಿಯ ಮಂಗಗಳಂತೆ
ಹಾಗೆ ಕುಳಿತುಕೊಳ್ಳಬೇಕಾದವರು ನಾವು....
ಪೋಷಕರು ! ಏಕೆ ಗೊತ್ತೇ ?

ನಿಮ್ಮನ್ನು ಸಭ್ಯ ರೀತಿಯಲ್ಲಿ ಬೆಳೆಸಲರಿಯದೆ
ನಾವೀಗ ಕುಳಿತಿದ್ದೇವೆ ತಲೆಯ ಮೇಲೆ ಕೈ ಹೊತ್ತು
ಥೇಟು ಈ ಮಂಗಗಳಂತೆ !

ಕಂಡದ್ದನ್ನೆಲ್ಲ ಬೇಕೆನ್ನುವ ನಿಮ್ಮನ್ನು 
ಸುಮ್ಮನಾಗಿಸುವ ದಾರಿ ಕಾಣದಾಗಿದೆ ನಮಗೆ
ಕೇಳಿದ್ದೆಲ್ಲ ಕೊಡಿಸಿದರೆ ಹಠಮಾರಿಗಳಾಗುತ್ತೀರಿ
ಕೊಡಿಸದಿದ್ದರೆ ಹಠಮಾಡಿ ನಮ್ಮ ಮೇಲೆ ಸಿಟ್ಟಾಗುತ್ತೀರಿ !
ನಿಮ್ಮ ಬೇಡಿಕೆಗೆ ಜಾಣ ಕಿವುಡನ್ನು ಪ್ರದರ್ಶಿಸದಿದ್ದರೆ ಹೇಗೆ ?

ನಾವು ಹೇಳುವ ನೀತಿ-ಬುದ್ಧಿವಾದ ನಿಮಗೆ ಬೇಕಿಲ್ಲ
ನಿಮಗೆ ಬೇಡದ ಬುದ್ಧಿವಾದ ಹೇಳುವುದಕ್ಕಿಂತ 
ಮೂಗರಂತಿರುವುದೇ ಲೇಸಲ್ಲವೇ ?

ಬೇಡವೆಂದರೂ ಬೆನ್ನು ಹತ್ತಿದ್ದೀರಿ ಟಿವಿ-ಮೊಬೈಲು-ಇಂಟರ್ನೆಟ್ಟು !
ಆಟ-ಪಾಠ-ಸಂಗೀತ ಎಲ್ಲಕ್ಕೂ ಬೇಕು ನಮ್ಮ ಒತ್ತಾಯ
ನಮ್ಮ ಒತ್ತಾಯವೇ ಇಲ್ಲದೆ ನೀವು ಮಾಡುವ ಕೆಲಸ 
ಟಿವಿ-ಮೊಬೈಲು-ಇಂಟರ್ನೆಟ್ಟಿನ ಸಹವಾಸ
ಹಾಗಾದಾಗ ನಾವು ಕುರುಡರಂತಿರುವುದೇ ಲೇಸಲ್ಲವೇ ?

ಸ್ವತಂತ್ರ ಬಂದದ್ದು ಯಾರಿಗೆ ? ನಿಮಗೋ ? ನಮಗೋ ?
ಈಗ ಹೇಳಿ : ಕಿವಿ-ಬಾಯಿ-ಕಣ್ಣು ಮುಚ್ಚಿ 
ಕುಳಿತುಕೊಳ್ಳಬೇಕಾದವರು ನಾವೋ ನೀವೋ ?

-ಸುರೇಖಾ ಭಟ್, ಭೀಮಗುಳಿ
01/03/2015

No comments:

Post a Comment