Thursday, November 15, 2018

" ಜ್ಞಾನೋದಯವಾದ ಹೊತ್ತು...... " - ದ್ವಿತೀಯ ಕಂತು.....


"ವಾನಪ್ರಸ್ಥ" ಅಂದ ಕೂಡ್ಲೆ ಅದೇನು ಹಾಗೆ ಬೆಚ್ಚಿಬೀಳ್ತೀರಿ ಮಾರ್ರೆ ? ಯಪ್ಪಾ..... !!!

( https://www.facebook.com/profile.php?id=100007315925874 ದ ಮುಂದುವರೆದ ಭಾಗ )

ವಾನಪ್ರಸ್ಥಕ್ಕೆನಲು ಹೆದರಿಕೊಂಡಿರಿಯೇಕೆ ?
ಕರ್ಮಬಂಧನದೊಳಗೆ ಸೆಳೆತವೇಕೆ ? ||
’ನಾನೀಗ ಬರಲಾರೆ ನನದಿನ್ನು ಎಳೆಪ್ರಾಯ’
’ಅಷ್ಟು ಮುದುಕಿಯೆ ನೀನು ?’ ಎನುವಿರೇಕೆ ? || ೧ ||

ವಾನಪ್ರಸ್ಥಾಶ್ರಮಕೆ ವಯಸಾಗಬೇಕಿಲ್ಲ
ಸಂಸಾರದೊಳಗಿದ್ದು ಮಾಗಬೇಕು ||
ಪದ್ಮಪತ್ರದೊಳಿರುವ ನೀರಹನಿ ತೆರದಲ್ಲಿ
ಅಂಟಿಯಂಟದ ಸ್ಥಿತಿಯ ಹೊಂದಬೇಕು || ೨ ||

ವಾನಪ್ರಸ್ಥಾಶ್ರಮಕೆ ವನವೆಬೇಕೆಂದಿಲ್ಲ
ನಮ್ಮೊಳಗೆ ನಿರ್ಲಿಪ್ತವಾಗಬೇಕು ||
ನಾನು ನನ್ನವರೆಂಬ ಮೋಹವನು ತೊರೆಯುತಲಿ
ಬಂದದ್ದು ಸೌಭಾಗ್ಯವೆನ್ನಬೇಕು || ೩ ||

ಸಂಸಾರದೊಳಗಿದ್ದು ಮನವ ಹದಗೊಳಿಸುತ್ತ
ಬಂದ ಕರ್ತವ್ಯಗಳ ಮಾಡಬೇಕು ||
ನಮ್ಮಾಟ ಮುಗಿದೊಡನೆ ಹೊರಟು ನಿಲ್ಲುವುದಕ್ಕೆ
ಸ್ಥಿತಪ್ರಜ್ಞ ಭಾವವನು ತಾಳಬೇಕು || ೪ ||

- ಸುರೇಖಾ ಭೀಮಗುಳಿ
15/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಅಂತರ್ಜಾಲ

Friday, November 9, 2018

" ಜ್ಞಾನೋದಯವಾದ ಹೊತ್ತು...... "

ವಾನಪ್ರಸ್ಥಕ್ಕೆ ಯಾರೆಲ್ಲ ಬರ್ತೀರಿ ? ಹೊರಡಿ ಹೊರಡಿ....

’ಯಾರು ನನ್ನವರಲ್ಲ ನನ್ನವರು ಯಾರಿಲ್ಲ 
ಏಕಾಂಗಿ ನಾ ಜಗದಿ’ - ಇದುವೆ ಸತ್ಯ ||
’ಯಾರೆಲ್ಲ ನನಗಾಗಿ ?’ - ಎನ್ನುತರಸುವೆನಲ್ಲ  
ಬಂಧವೆನ್ನುವುದೊಂದು ಶುದ್ಧ ಮಿಥ್ಯ || ೧ ||

’ನನ್ನ ಬದುಕಿನ ಹೊರೆಯ ನಾನೆ ಸಾಗಿಸಬೇಕು’
ಎಂಬ ಮಾತಿನ ಮರ್ಮದರಿವಾಯಿತು ||
ಯಾರೆನಗೆ ಪರಮಾಪ್ತರೆಂಬ ಹುಡುಕಾಟದಲೆ  
ಬದುಕಿನರ್ಧದ ಪಯಣ ಮುಗಿದು ಹೋಯ್ತು || ೨ ||

ಎದುರಲ್ಲಿ ಬಂದವರು ನಕ್ಕು ಸ್ನೇಹವ ಬಯಸೆ
ನಾನೂನು ನಗಬೇಕು ವಿಶ್ವಾಸ ತುಂಬಿ ||
ದೊರೆತ ಸ್ನೇಹದ ಬಗ್ಗೆ ಸಂಭ್ರಮಿಸಬೇಕಿಲ್ಲ
ಈ ಬಂಧ ಶಾಶ್ವತವದೆಂದು ನಂಬಿ || ೩ ||

ಬಂದಬಂದವರನ್ನು ಮನೆಯೊಳಗೆ ಕರೆಯುವರೆ
ಪಡಸಾಲೆಯಲ್ಲಷ್ಟೆ ಪವಡಿಸುವ ಹಕ್ಕು ||
ಯಾರ್ಯಾರನೆಲ್ಲೆಲ್ಲಿ ನಿರ್ಧರಿಪ ಬುದ್ಧಿಯಿದೆ
ಅದಕೇನು ಹಿಡಿದಿಲ್ಲವಿನ್ನು ತುಕ್ಕು || ೪ ||

ಮುಗುಳು ನಗೆಯನು ಬೀರಿ ಸ್ನೇಹ ಹಸ್ತವ ಚಾಚಿ 
ಬಂದವರ ಕೈಮುಗಿದು ಸ್ವಾಗತಿಸಬೇಕು ||
ಹೊರಟೆನೆ‌ನ್ನುವ ಕ್ಷಣದಿ ಮತ್ತೆ ಗೋಗರೆಯದೆಯೆ
ಭೇಟಿಯಿದು ಖುಷಿಯಾಯಿತೆನ್ನಬೇಕು || ೫ ||

ಎಲ್ಲರೂ ನಶ್ವರರು - ನಶ್ವರವದೀಜಗವು
ವೇದಾಂತ ವಾಣಿಯಲಿ ಸತ್ಯವುಂಟು ||
ಸ್ನೇಹ ಸಂಬಂಧಗಳು ಮಿತಿಯ ಮೀರಿರುವಲ್ಲಿ
ಶಾಂತಿ ನೆಮ್ಮದಿಯೆಲ್ಲ ಕನ್ನಡಿಯ ಗಂಟು || ೬ ||

- ಸುರೇಖಾ ಭೀಮಗುಳಿ
ಸ್ಥಳ : ಭೋಗನಂದೀಶ್ವರ, ನಂದೀಗ್ರಾಮ, ಚಿಕ್ಕಬಳ್ಳಾಪುರ
ಜ್ಞಾನೋದಯವಾದ ಸಮಯ : 06/11/2018 ರ ಬೆಳಗಿನ 12:18 
ಪದ್ಯರೂಪ : 09/11/2018
ತಿದ್ದುಪಡಿ ಮಾರ್ಗದರ್ಶನ : ವಿಶ್ವ ಸರ್.
ಚಿತ್ರ : ಸುಮಂತ ಭೀಮಗುಳಿ
ರೂಪದರ್ಶಿ : ನಾನೇ ಕಣ್ರೀ.....